ADVERTISEMENT

ಹೊಸ ವರ್ಷಕ್ಕೆ ಸಾಂಸ್ಕೃತಿಕ ಮೆರುಗು

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 11:34 IST
Last Updated 4 ಜನವರಿ 2021, 11:34 IST
ಕಲಬುರ್ಗಿಯಲ್ಲಿ ಹೊಸ ವರ್ಷಾಚರಣೆ ಅಂಗವಾಗಿ ಶನಿವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯುವಕರು ಹಾಗೂ ಮಕ್ಕಳು ವಿವಿಧ ವೇಷ ಧರಿಸಿ ಗಮನ ಸೆಳೆದರು.
ಕಲಬುರ್ಗಿಯಲ್ಲಿ ಹೊಸ ವರ್ಷಾಚರಣೆ ಅಂಗವಾಗಿ ಶನಿವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯುವಕರು ಹಾಗೂ ಮಕ್ಕಳು ವಿವಿಧ ವೇಷ ಧರಿಸಿ ಗಮನ ಸೆಳೆದರು.   

ಕಲಬುರ್ಗಿ: ಇಲ್ಲಿನ ಭಗತ್ ಯುವ ಬಳಗ ಮತ್ತು ನವಚೇತನ ಸಾಂಸ್ಕೃತಿಕ ಕಲಾ ಸಂಸ್ಥೆ ಆಶ್ರಯದಲ್ಲಿ ಹೊಸ ವರ್ಷದ ಪ್ರಯುಕ್ತ ನಗರದಲ್ಲಿ ಶನಿವಾರ ನಡೆದ ‘ಸಾಂಸ್ಕೃತಿಕ ಸಂಜೆ’ ಕಾರ್ಯಕ್ರಮ ಪ್ರೇಕ್ಷಕರ ಮನ ಗೆದ್ದಿತು.

ಕಲಾವಿದರು ವಿವಿಧ ವಿನೋದಾವಳಿ ಹಾಗೂ ಕಲಾಪ್ರದರ್ಶನದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಭಾಗ್ಯಶ್ರೀ ಮಾಲಿಪಾಟೀಲ (ವೀರವನಿತೆ ಚನ್ನಮ್ಮ), ಅಭಿಷೇಕ ಹೊಸಗೌಡ (ಬುಡಬುಡಕಿ), ಚಿರಂಜೀವಿ ಗುತ್ತೇದಾರ (ವೀರ ಅಭಿಮನ್ಯು), ಹರ್ಶಿತ್ ಹಾಗೂ ರೋಹಿತ್ (ರೈತರು), ದರ್ಶನ್ (ಸತ್ಯ ಹರೀಶ್ಚಂದ್ರ), ಪ್ರಮೋದ (ಏಕಲವ್ಯ) ಅವರು ತಮ್ಮ ಕಲಾ ಪ್ರದರ್ಶನ ಮಾಡಿದರು. ಲಕ್ಷ್ಮಿಕಾಂತ ಜೋಶಿ ಅವರ ಚೊಚ್ಚಲ ನಿರ್ದೇಶನದಲ್ಲಿ ಎಲ್ಲ ಏಕಪಾತ್ರಾಭಿನಯಗಳು ಪ್ರದರ್ಶನಗೊಂಡವು.

ದೇವಾನಂದ್ ಎಸ್.ಪಿ. ಅವರ ಸುಮಧುರ ಗಾಯನ ಪ್ರೇಕ್ಷಕರನ್ನು ಆಕರ್ಷಿಸಿತು. ನಿಖಿಲ್ , ಶ್ರದ್ಧಾ, ಪ್ರದೀಪ, ಶಾಂತಕುಮಾರ, ಸ್ನೇಹಾ, ಸಮೀಕ್ಷಾ, ಆರಾಧ್ಯ, ಬಸಯ್ಯ, ಶೇಖರ್ ಮುಂತಾದ ಮಕ್ಕಳು ವಿವಿಧ ಹಾಡುಗಳಿಗೆ ನೃತ್ಯ ಮಾಡಿ ಗಮನ ಸೆಳೆದರು. ಚಿರಂಜೀವಿ ಗುತ್ತೇದಾರ ಅವರ ಸಂಯೋಜನೆಯಲ್ಲಿ ಮಕ್ಕಳ ನೃತ್ಯ ಮೂಡಿಬಂದಿತು. ಸೋಮಶಂಕರ್ ಜಿ. ಬಿರಾದರ ಅವರ ಬೆಳಕಿನ ನಿರ್ವಹಣೆ ಅಚ್ಚುಕಟ್ಟಾಗಿತ್ತು.

ADVERTISEMENT

ಇದಕ್ಕೂ ಮುನ್ನ ಪತ್ರಕರ್ತ ದಸ್ತಗೀರ್ ನದಾಫ್ ಉದ್ಘಾಟಿಸಿದರು. ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಹೂಗಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಯುವ ರಂಗಭೂಮಿ ಕಲಾವಿದೆ ವಿಜಯಲಕ್ಷ್ಮಿ ದೊಡ್ಮನಿ ಅಧ್ಯಕ್ಷತೆ ವಹಿಸಿದ್ದರು. ಅನಂತರ ನೃತ್ಯಗಳು ಪ್ರದರ್ಶನಗೊಂಡವು. ಅಂಬರೀಶ್ ಮರಾಠಾ ಮತ್ತು ಕವಿತಾ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.