
ಅಫಜಲಪುರ: ದತ್ತಾತ್ರೇಯ ಮಹಾರಾಜರ ಜನ್ಮೋತ್ಸವ ಪ್ರಯುಕ್ತ ತಾಲ್ಲೂಕಿನ ದೇವಲ ಗಾಣಗಾಪುರದ ದತ್ತಾತ್ರೇಯ ಮಹಾರಾಜರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಸಂಜೆ ಸಹಸ್ರಾರು ಭಕ್ತರ ಮಧ್ಯೆ ಬಾಲದತ್ತಾತ್ರೇಯ ಮಹಾರಾಜರ ರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು.
ರಥೋತ್ಸವ ಪ್ರಯುಕ್ತ ದತ್ತರ ಮೂರ್ತಿ ಹಾಗೂ ಪಾದುಕೆಗಳಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಕಾಕಡ ಆರತಿ ಮಾಡಲಾಯಿತು. ಬಾಲಮೂರ್ತಿ ದತ್ತಾತ್ರೇಯ ಮಹಾರಾಜರ ಮೂರ್ತಿಯನ್ನು ಹೂಗಳಿಂದ ಅಲಂಕಾರ ಮಾಡಲಾಗಿತ್ತು. ರಥೋತ್ಸವ ಆರಂಭವಾಗುತ್ತಿದ್ದಂತೆ ಭಕ್ತರು ಜೈ ಘೋಷ ಹಾಕಿ, ರಥದ ಮೇಲೆ ಹೂವು, ಹಣ್ಣುಗಳನ್ನು ತೂರಿ ಭಕ್ತಿ ಸಮರ್ಪಿಸಿದರು.
ದತ್ತ ಮಹಾರಾಜರ ಜನ್ಮೋತ್ಸವ ಹಾಗೂ ರಥೋತ್ಸವ ಎರಡು ದಿನಗಳ ಕಾರ್ಯಕ್ರಮ ಶುಕ್ರವಾರ ಸಂಪನ್ನಗೊಂಡಿತು. ಯಾತ್ರಿಕರು ಶುಕ್ರವಾರ ಭೀಮಾ ಅಮರ್ಜಾ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ, ನರಸಿಂಹ, ಸರಸ್ವತಿ ಅವರ ಪಾದುಕೆಗಳಿಗೆ ಪೂಜೆ ಸಲ್ಲಿಸಿದರು. ನಿರ್ಗುಣ ಮಠ (ದತ್ತ ಮಂದಿರ), ಸಂಗಮೇಶ್ವರ ಸ್ವಾಮಿ ದೇವಸ್ಥಾನ ಮತ್ತು ಕಲ್ಲೇಶ್ವರ ದೇಗುಲದಲ್ಲಿ ಭಕ್ತರು ದರ್ಶನ ಪಡೆದರು.
ದೇವಸ್ಥಾನದಲ್ಲಿ ನಿರ್ಗುಣ ಪಾದುಕೆ ಮತ್ತು ಅಶ್ವತ್ಥಕಟ್ಟೆಯನ್ನು ದರ್ಶನ ಪಡೆದ ಆಲಯದ ಪ್ರಾಂಗಣದಲ್ಲಿ ಪಾದುಕಾ ಪೂಜೆ, ರುದ್ರಾಭಿಷೇಕ, ದೀಪಾರಾಧನೆ, ಮಧುಕರಿ ಮತ್ತು ಅನ್ನದಾನ ಸೇವೆ ಜರುಗಿದವು.
ರಥೋತ್ಸವದಲ್ಲಿ ಹಿರಿಯ ಅರ್ಚಕ ಉದಯ ಭಟ್ ಪೂಜಾರಿ ಹಾಗೂ ಸಾಲಕಾರಿ ಕಾರ್ಯದರ್ಶಿ ಪ್ರಿಯಾಂಕ ಪೂಜಾರಿ, ಪ್ರಫುಲ್ ಭಟ್ ಪೂಜಾರಿ, ನರಹರಿ ಪೂಜಾರಿ, ಅಚ್ಚುತ ಪೂಜಾರಿ, ಚಂದ್ರಕಾಂತ್ ಭಟ್ ಪೂಜಾರಿ, ಗುರುರಾಜ್ ಕುಲಕರ್ಣಿ, ಗ್ರಾಮದ ಮುಖಂಡರಾದ ಮಾರುತಿ ಮೂರ, ರಾಮಚಂದ್ರ ಪಟೇದ, ತಿಪ್ಪಣ್ಣ ಚನ್ನಮಳ್ಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ದತ್ತು ಹೇರೂರ ಹಾಗೂ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.