ಕಲಬುರಗಿ: ಮಗಳ ಎರಡೂ ಕಿಡ್ನಿ ವಿಫಲವಾಗಿದ್ದು, ಡಯಾಲಿಸಿಸ್ ಚಿಕಿತ್ಸೆಗೆ ಧನಸಹಾಯಕ್ಕಾಗಿ ನಗರದ ನಿವಾಸಿಗಳಾದ ಶೀಲಾದೇವಿ ಮತ್ತು ಅಣ್ಣಾರಾವ ಗೌಳಿ ಮನವಿ ಮಾಡಿದ್ದಾರೆ.
‘ಬಾಡಿಗೆ ಮನೆಯಲ್ಲಿ ವಾಸವಾಗಿರುವ ಅಣ್ಣಾರಾವ ಗೌಳಿ, ₹8 ಸಾವಿರ ಸಂಬಳಕ್ಕೆ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮೂವರು ಮಕ್ಕಳಲ್ಲಿ 17 ವರ್ಷದ ಕೋಮಲಾ ಅವರಿಗೆ ಹುಟ್ಟಿನಿಂದಲೂ ಒಂದು ಕಿಡ್ನಿ ವಿಫಲವಾಗಿತ್ತು. ಈಗ ಎರಡೂ ಕಿಡ್ನಿ ಹಾಳಾಗಿದ್ದು, ನಗರದ ವಾತ್ಸಲ್ಯ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸುತ್ತಿದ್ದಾರೆ’ ಎಂದು ಕರ್ನಾಟಕ ವಿಜಯ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ಹಿರೇಮಠ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಕೋಮಲಾಗೆ ಮೊದಲು ಪುಟ್ಪರ್ತಿಯ ಶ್ರೀಸತ್ಯಸಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಮಗಳ ಚಿಕಿತ್ಸೆಗೆ ದುಡಿದ ಹಣವೂ ಸಾಕಾಗುತ್ತಿಲ್ಲ. ಇದಕ್ಕಾಗಿ ಪೋಷಕರು ₹10 ಲಕ್ಷ ಸಾಲ ಮಾಡಿಕೊಂಡಿದ್ದಾರೆ. ಸೋಂಕು ತಗುಲಿದ ಕಾರಣ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡುತ್ತಿಲ್ಲ. ಹಾಗಾಗಿ, ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಮೂರು ವರ್ಷಗಳಿಂದ ವಾರದಲ್ಲಿ ಮೂರು ಬಾರಿ ಡಯಾಲಿಸಿಸ್ ಮಾಡಿಕೊಂಡು ಬರುತ್ತಿದ್ದಾರೆ. ತಿಂಗಳಿಗೆ ₹17,500 ಮೌಲ್ಯದ ವೆಲ್ಪಾನಟ್ 28 ಮಾತ್ರೆ ಹಾಗೂ ಡಯಾಲಿಸಿಸ್ ವೆಚ್ಚ ಸೇರಿ ₹40,000 ಖರ್ಚಾಗುತ್ತಿದೆ’ ಎಂದು ವಿವರಿಸಿದರು.
ತಾಯಿ ಶೀಲಾದೇವಿ ಹಾಗೂ ತಂದೆ ಅಣ್ಣಾರಾವ ಗೌಳಿ ಮಾತನಾಡಿ, ‘ಕಿಡ್ನಿ ವೈಫಲ್ಯ ಕಾರಣ 7ನೇ ತರಗತಿಗೆ ಓದು ಸ್ಥಗಿತವಾಗಿದೆ. ಈಗ ಅವಳು ನಮ್ಮೊಂದಿಗೆ ಬದುಕಿದರೆ ಸಾಕು. ಮಗಳ ಚಿಕಿತ್ಸೆಗಾಗಿ ಧನಸಹಾಯ ಮಾಡುವವರು ಶೀಲಾದೇವಿ ಹೆಸರಿನ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ: 13002250023483 (ಐಎಫ್ಎಸ್ಸಿ: ಸಿಎನ್ಆರ್ಬಿ0011300) ಅಥವಾ ಪೋನ್ ಪೇ:7411015673 ಸಂಖ್ಯೆಗೆ ನೆರವು ನೀಡಬಹುದು. ಸರ್ಕಾರ ಮತ್ತು ಸಚಿವರೂ ಚಿಕಿತ್ಸೆಗೆ ಸಹಾಯ ಮಾಡಬೇಕು’ ಎಂದು ಕೋರಿದರು.
ವಿಶ್ವನಾಥ ದೇವಣಿ, ಚನ್ನವೀರಯ್ಯ ಹಿರೇಮಠ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.