
ಕಲಬುರಗಿ: ಜೂಜಾಟ ಹಾಗೂ ಕುಡಿತದ ಚಟಕ್ಕಾಗಿ ಹಗಲು ಹೊತ್ತಿನಲ್ಲೇ ಮನೆಗಳವು ಮಾಡುತ್ತಿದ್ದ ಕಳ್ಳನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
‘ನಗರದ ಹೀರಾಪುರ ಪ್ರದೇಶದ ನಿವಾಸಿ ಚಾಂದಪಾಷಾ (25) ಬಂಧಿತ ಆರೋಪಿ’ ಎಂದು ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಅಶೋಕನಗರ ಠಾಣೆ ವ್ಯಾಪ್ತಿಯ ಮೂರು ಮನೆಗಳಲ್ಲಿ ಹಗಲು ಹೊತ್ತಿನಲ್ಲೇ ಕಳವು ನಡೆದಿತ್ತು. ಒಟ್ಟು ₹15 ಲಕ್ಷ ಮೊತ್ತದ ಚಿನ್ನ–ಬೆಳ್ಳಿ ಆಭರಣಗಳು ಕಳುವಾಗಿದ್ದವು. ಆ ಪೈಕಿ ಬಂಧಿತ ಆರೋಪಿಯಿಂದ ₹8 ಲಕ್ಷ ಮೌಲ್ಯದ 83 ಗ್ರಾಂ ಚಿನ್ನಾಭರಣ, ₹50 ಸಾವಿರ ಮೌಲ್ಯದ 30 ಗ್ರಾಂ ಬೆಳ್ಳಿ ಆಭರಣ ಹಾಗೂ ₹10 ಸಾವಿರ ನಗದು ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ವಿವರಿಸಿದರು.
‘ಆರೋಪಿ ಮೇಲೆ 2019ರಿಂದ 2022ರ ಅವಧಿಯಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದವು. ಎರಡ್ಮೂರು ವರ್ಷಗಳಿಂದ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಸೊಲ್ಲಾಪುರದಲ್ಲಿ ಜೂಜಾಟ, ಕುಡಿತದ ಚಟಕ್ಕೆ ಬಿದ್ದಿದ್ದ ಆರೋಪಿ ಮತ್ತೆ ಕಳ್ಳತನಕ್ಕೆ ಇಳಿದಿದ್ದ’ ಎಂದರು.
‘ಮನೆ–ಮನೆಗಳಿಗೆ ಶುದ್ಧ ನೀರಿನ ಕ್ಯಾನ್ ಪೂರೈಸುವ ಕೆಲಸ ಮಾಡುವ ಜೊತೆಗೆ ಕೀಲಿ ಹಾಕಿದ ಮನೆಗಳನ್ನು ಗುರುತಿಸಿ ಏಕಾಂಗಿಯಾಗಿ ಕಳವು ಮಾಡಿದ್ದ. ಅರ್ಧಗಂಟೆಯಲ್ಲೇ ಕೃತ್ಯ ಎಸಗಿ ಪರಾರಿಯಾಗುತ್ತಿದ್ದ. ಬಿದ್ದಾಪುರ ಕಾಲೊನಿಯಲ್ಲಿ ನ.23ರಂದು ನಡೆದ ಪ್ರಕರಣ ಮನೆಗಳವು ಪ್ರಕರಣದಲ್ಲಿ ಸಿಕ್ಕ ಬೆರಳಚ್ಚು ಸಾಕ್ಷ್ಯವು ಆರೋಪಿ ಬಂಧನಕ್ಕೆ ನೆರವಾಯಿತು. ಕದ್ದ ಒಡವೆ, ನಗದನ್ನು ಪಕ್ಕದ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಅಪರಿಚಿತರಿಗೆ ಮಾರಿ, ಜೂಜಾಟ, ಕುಡಿತಕ್ಕೆ ಬಳಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಮಾಹಿತಿ ನೀಡಿದರು.
‘ದಕ್ಷಿಣ ಉಪವಿಭಾಗದ ಎಸಿಪಿ ಶರಣಬಸಪ್ಪ ಸುಬೇದಾರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಅರುಣಕುಮಾರ, ಎಎಸ್ಐ ಶೈಲಜಾ, ಹೆಡ್ಕಾನ್ಸ್ಟೆಬಲ್ಗಳಾದ ವೈಜಿನಾಥ, ಮಲ್ಲಿಕಾರ್ಜುನ, ಶಿವಪ್ರಕಾಶ, ಕಾನ್ಸ್ಟೆಬಲ್ಗಳಾದ ನೀಲಕಂಠರಾಯ, ಚಂದ್ರಶೇಖರ, ಮುಜಾಹೀದ್ ಅವರ ತಂಡವು ಬೆರಳಚ್ಚು ಸೇರಿದಂತೆ ವೈಜ್ಞಾನಿಕವಾಗಿ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದೆ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಸಿಪಿ ಶರಣಬಸಪ್ಪ ಸುಬೇದಾರ, ಇನ್ಸ್ಪೆಕ್ಟರ್ ಅರುಣಕುಮಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.