ADVERTISEMENT

ಅಫಜಲಪುರ: ಅತನೂರ ಗ್ರಾಮಸ್ಥರ ಕುಂದು- ಕೊರತೆ ಆಲಿಸಿದ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2022, 7:08 IST
Last Updated 16 ಏಪ್ರಿಲ್ 2022, 7:08 IST
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಅತನೂರ ಗ್ರಾಮದಲ್ಲಿ ಶನಿವಾರ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಅಜ್ಜಿಯೊಬ್ಬರ ಮನವಿ ಆಲಿಸಿದರು.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಅತನೂರ ಗ್ರಾಮದಲ್ಲಿ ಶನಿವಾರ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಅಜ್ಜಿಯೊಬ್ಬರ ಮನವಿ ಆಲಿಸಿದರು.   

ಅಫಜಲಪುರ (ಕಲಬುರಗಿ ಜಿಲ್ಲೆ):"ಜಿಲ್ಲಾಧಿಕಾರಿ ನಡೆ-ಹಳ್ಳಿಯ ಕಡೆ" ಕಾರ್ಯಕ್ರಮದ ಅಂಗವಾಗಿ, ಶನಿವಾರ ಅಫಜಲಪುರ ತಾಲ್ಲೂಕಿನ ಅತನೂರಗೆ ಬಂದ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಜನರ ಕುಂದು- ಕೊರತೆ ಆಲಿಸಿದರು.

ಅತನೂರ ಹಾಗೂ ಈ ಪಂಚಾಯಿತಿ ವ್ಯಾಪ್ತಿಗೆ ಬರುವ ಹಳ್ಳಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಮಹಿಳೆಯರು ಕೂಡ ಸರದಿಯಲ್ಲಿ ನಿಂತು ಮನವಿ ಸಲ್ಲಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ, ಉಪವಿಭಾಗಾಧಿಕಾರಿ ಮೋನಾ ರೋಟ್, ಅಫಜಲಪುರ ತಹಶೀಲ್ದಾರ್ ಸಂಜೀವಕುಮಾರ ದಾಸರ, ಡಿ.ಡಿ.ಎಲ್.ಅರ್. ಶಂಕರ್, ಗ್ರಾಮ‌ ಪಂಚಾಯಿತಿ ಅದ್ಯಕ್ಷೆ ಪಾರ್ವತಿ ಜಗನ್ನಾಥ ಗೊಳಸಾರ ಕೂಡ ಪಾಲ್ಕೊಂಡರು.

ADVERTISEMENT

ಇದಕ್ಕೂ ಮುನ್ನ ಗ್ರಾಮದ ಮಹಿಳೆಯರು ಅಧಿಕಾರಿಗಳಿಗೆ ತಿಲಕವಿಟ್ಟು, ಕುಂಭ ಕಳಸದೊಂದಿಗೆ ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು. ಪುರುಷರು ಡಿ.ಸಿ. ಮತ್ತು ಸಿ.ಇ.ಒ ಅವರನ್ನು ಆಲಂಕೃತ ಎತ್ತಿನ ಚಕ್ಕಡಿಯಲ್ಲಿ ಮೆರವಣಿಗೆ ಮೂಲಕ ವೇದಿಕೆ ಸ್ಥಳಕ್ಕೆ ಕರೆತಂದರು.

ವೇದಿಕೆ ಸ್ಥಳಕ್ಕೆ ಬರುವ‌ ಮುನ್ನ ಅಧಿಕಾರಿಗಳು ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ಅತನೂರ ಮಠದ ಅಭಿನವ ಗುರುಬಸವ ಶಿವಚಾರ್ಯರು ಅಧಿಕಾರಿಗಳನ್ನು ಸನ್ಮಾನಿಸಿದರು.

ಗ್ರಾಮ ವಾಸ್ತವ್ಯ ಅಂಗವಾಗಿ ಆರೋಗ್ಯ ಇಲಾಖೆಯಿಂದ ಆಯೋಜಿಸಿದ ಅರೋಗ್ಯ ಶಿಬಿರಕ್ಕೆ ಭೇಟಿ ಮಾಡಿ ಕೋವಿಡ್ ಲಸಿಕೆ ಕಾರ್ಯ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.