ಕಲಬುರ್ಗಿ: ತಾಯಿಗೆ ಆಮ್ಲಜನಕ ಕೊಡಿಸಿ ಎಂದು ಕಣ್ಣೀರಿಟ್ಟಿದ್ದ ಸಿಆರ್ಪಿಎಫ್ ಯೋಧ ಸಂಜೀವ ಪವಾರ ಅವರ ತಾಯಿ ನಿರ್ಮಲಾ ಪವಾರ ಚಿಕಿತ್ಸೆಗೆ ಸ್ಪಂದಿಸದೆ ಇಲ್ಲಿನ ಜಿಮ್ಸ್ ಆಸ್ಪತ್ರೆಯಲ್ಲಿ ಗುರುವಾರ ಬೆಳಿಗ್ಗೆ ಸಾವಿಗೀಡಾದರು.
ಆಸ್ತಮಾದಿಂದ ಬಳಲುತ್ತಿದ್ದ ನಿರ್ಮಲಾ ಅವರನ್ನು ಕೆಲ ದಿನಗಳ ಹಿಂದೆ ಜಿ ಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ರೋಗಿಗಳ ಆಕ್ರಂದನದಿಂದ ಭೀತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಆ ಸಂದರ್ಭದಲ್ಲಿ ಕೋವಿಡ್ ತಪಾಸಣೆ ಮಾಡಲಾಗಿತ್ತು.
ಬುಧವಾರ ಅವರಿಗೆ ಕೋವಿಡ್ ಇರುವುದು ದೃಢಪಟ್ಟಿತ್ತು. ಉಸಿರಾಟದ ತೊಂದರೆ ತೀವ್ರವಾಗುತ್ತಿದ್ದಂತೆಯೇ ನಿರ್ಮಲಾ ಪತಿ ದಾಮ್ಲು ಪವಾರ ತಮ್ಮ ಮಗ ಸಂಜೀವಗೆ ಕರೆ ಮಾಡಿ ತಿಳಿಸಿದ್ದರು.
ಕಾಶ್ಮೀರದಿಂದಲೇ ಕಣ್ಣೀರಿಡುತ್ತಾ ವಿಡಿಯೊ ಮಾಡಿದ ಸಂಜೀವ, ತಮ್ಮ ತಾಯಿಯ ಪರಿಸ್ಥಿತಿ ವಿವರಿಸಿದ್ದರು. ಇದನ್ನು ಗಮನಿಸಿದ ಹಲವರು ಜಿಲ್ಲಾಡಳಿತದ ಗಮನಕ್ಕೆ ತಂದರು. ರಾತ್ರಿ ಅವರನ್ನು ಜಿಮ್ಸ್ ಗೆ ದಾಖಲಿಸಲಾಯಿತು. ಡಾ.ಜಗದೀಶ್ ನೇತೃತ್ವದ ತಂಡ ಪ್ರಯತ್ನಪಟ್ಟರೂ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಆಸ್ಪತ್ರೆಗೆ ಸೇರಿಸಲು ಶ್ರಮಿಸಿದ್ದ ಎಚ್ ಕೆಸಿಸಿಐ ಮಾಜಿ ಅಧ್ಯಕ್ಷ ಅಮರನಾಥ ಪಾಟೀಲ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.