
ಕಲಬುರಗಿ: ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ತಮ್ಮ ಜೀವಿತಾವಧಿಯಲ್ಲಿ ವಾಡಿ ಪಟ್ಟಣಕ್ಕೆ ಎರಡು ಬಾರಿ ಭೇಟಿ ನೀಡಿ ಜನರ ಜೊತೆ ಚರ್ಚಿಸಿದ್ದರು. ಬಳಿಕ ಇಲ್ಲಿಯ ರೈಲು ನಿಲ್ದಾಣದಿಂದ ರೈಲಿನಲ್ಲಿ ತೆರಳಿದ್ದರು. ಇದರ ನೆನಪಿಗಾಗಿ ವಾಡಿ ರೈಲು ನಿಲ್ದಾಣಕ್ಕೆ ಅವರ ಹೆಸರಿಡಬೇಕು ಎಂದು ಒತ್ತಾಯಿಸಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಯುವ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
‘ಈ ಸಂಬಂಧ ಹಲವು ಬಾರಿ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ಕೇಂದ್ರ ಸಚಿವ ಸೋಮಣ್ಣ ಗಮನಹರಿಸಬೇಕು. ಜಿಲ್ಲಾಡಳಿತವು ವಾಡಿಯಲ್ಲಿ ಕಮಾನು ನಿರ್ಮಾಣ ಮಾಡಿ ಅದಕ್ಕೆ ಭೀಮ ಪಾದ ಸ್ಪರ್ಶ ಭೂಮಿ ಎಂದು ನಾಮಕರಣ ಮಾಡಬೇಕು’ ಎಂದು ಒತ್ತಾಯಿಸಿದರು.
‘ವಾಡಿ ಪುರಸಭೆ ವ್ಯಾಪ್ತಿಯ ಕಾಕಾ ಚೌಕ್ನಲ್ಲಿ ಅಂಬೇಡ್ಕರ್ ಭವನ ಕಾಮಗಾರಿ ಅರ್ಧಕ್ಕೆ ನಿಂತಿದೆ. ಹಲವು ಬಾರಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಆದರೂ ಸ್ಪಂದಿಸಿಲ್ಲ. ಜಿಲ್ಲಾಧಿಕಾರಿ ಇದನ್ನು ಪರಿಶೀಲಿಸಿ ಕಾಮಗಾರಿ ಪುನರಾರಂಭಕ್ಕೆ ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.
‘ವಾಡಿ ಪುರಸಭೆಯಲ್ಲಿ ಕೆಲ ಸಿಬ್ಬಂದಿ 15 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ತನಿಖೆ ನಡೆಸಿ ಅವರನ್ನು ವರ್ಗಾಯಿಸಬೇಕು. ಇಲ್ಲದಿದ್ದರೆ ಬಂದ್ಗೆ ಕರೆ ನೀಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಆರ್ಪಿಎಫ್ನ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ನಾಟೇಕರ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಭಿಷೇಕ ಚಕ್ರವರ್ತಿ, ಪ್ರಧಾನ ಕಾರ್ಯದರ್ಶಿ ಮಹಾರುದ್ರ ನಾವೆ, ಮುಖಂಡರಾದ ಶರಣಪ್ಪ ಎಂ.ವಾಡೇಕಾರ, ಅಮೀತಕುಮಾರ ಪಂಚ ಕಟ್ಟಿ, ದತ್ತು ಹೀರಾಪುರ, ಚಂದ್ರಕಾಂತ ಬಿರಾದಾರ, ಆಕಾಶ ಮೂಲಭಾರತಿ, ಬಸವರಾಜ ದೊಡ್ಡಮನಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.