ಜೇವರ್ಗಿ: ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ತಾವು ಸಂಕಲ್ಪ ತೊಟ್ಟಿದ್ದೇವೆ. ಆ ನಿಟ್ಟಿನಲ್ಲಿ ಸರ್ಕಾರದ ಯೋಜನೆಗಳ ಜತೆಗೆ ಧರ್ಮಸಿಂಗ್ ಫೌಂಡೇಶನ್ ವತಿಯಿಂದ ಅಕ್ಷರ ಆವಿಷ್ಕಾರ ಯೋಜನೆ ಜಾರಿಗೆ ತರಲಾಗಿದೆ ಎಂದು ಶಾಸಕ ಡಾ.ಅಜಯಸಿಂಗ್ ಹೇಳಿದರು.
ಸೋಮವಾರ ಪಟ್ಟಣದ ದತ್ತನಗರ ಬಡಾವಣೆಯಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ 2019–20ನೇ ಸಾಲಿನ ಕೆಕೆಆರ್ಡಿಬಿ ಯೋಜನೆಯಡಿ ₹3.24 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರದ ಅವಧಿ ಯಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬಡ, ಹಿಂದುಳಿದ, ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗಾಗಿ 5 ವಸತಿ ನಿಲಯಗಳನ್ನು ನಿರ್ಮಾಣ ಮಾಡಲಾಗಿದೆ. ಶಾಸಕರಾಗಿ ಆಯ್ಕೆಯಾದ ನಂತರ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಎಸ್ಎಸ್ಎಲ್ಸಿಯಲ್ಲಿ ಮಕ್ಕಳು ಗುಣಮಟ್ಟದ ಸಾಧನೆಗೈಯಲು ಅಕ್ಷರ ಆವಿಷ್ಕಾರ ಯೋಜನೆ ಜಾರಿಗೆ ತಂದು ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಲಾಗಿದೆ. ತಾಲ್ಲೂಕಿನಲ್ಲಿ 6 ಮೊರಾರ್ಜಿ ವಸತಿ ಶಾಲೆಗಳ ನಿರ್ಮಾಣ ಮಾಡಿ, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸಲಾಗುತ್ತಿದೆ ಎಂದು ಹೇಳಿದರು.
ನೂತನ ವಸತಿ ನಿಲಯ ನಿರ್ಮಾಣಕ್ಕೂ ಮುಂಚೆ ಖಾಸಗಿ ಕಟ್ಟಡಗಳಲ್ಲಿ ವಿದ್ಯಾರ್ಥಿಗಳು ಹಲವು ಸಮಸ್ಯೆಗಳ ನಡುವೆ ತೊಂದರೆ ಅನುಭವಿಸುವಂತಾಗಿತ್ತು. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಉನ್ನತ ಶಿಕ್ಷಣ ಪಡೆದು ಹೆತ್ತವರ ಕನಸು ನನಸು ಮಾಡಬೇಕು ಎಂದು ಸಲಹೆ ನೀಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲ್ಲೂಕು ವಿಸ್ತೀರ್ಣಾಧಿಕಾರಿ ಮಹ್ಮದ್ ಯೂನೂಸ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅಶೋಕ ನಾಯಕ, ಶಿವರಾಜ, ಜೇವರ್ಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ಧಲಿಂಗರೆಡ್ಡಿ ಇಟಗಿ, ಯಡ್ರಾಮಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರುಕುಂ ಪಟೇಲ ಇಜೇರಿ, ಮುಖಂಡರಾದ ರಾಜಶೇಖರ ಸೀರಿ, ಶೌಕತ್ ಅಲಿ ಆಲೂರ, ಸಿದ್ದು ಕಾಳಗಿ ಕೂಟನೂರ, ಚಂದ್ರಶೇಖರ ಹೊಸಮನಿ, ಲಕ್ಕಪ್ಪ ಕೂಟನೂರ, ನೀಲಕಂಠ ಪಾಟೀಲ ಕಟ್ಟಿಸಂಗಾವಿ, ಬಸವರಾಜ ಕಂಕಿ ನೆಲೋಗಿ, ಚಂದ್ರಶೇಖರ ಹರನಾಳ, ಕಾಶಿಂ ಪಟೇಲ ಮುದಬಾಳ, ಅಬ್ದುಲ್ ರಹೇಮಾನ ಪಟೇಲ, ಬಹಾದ್ಧೂರ ರಾಠೋಡ, ಹಯ್ಯಾಳಪ್ಪ ಗಂಗಾಕರ್, ಮಹೆಬೂಬ ಶಾನವಾಲೆ, ಸಲೀಂ ಕಣ್ಣಿ, ಮಹಮೂದ್ ನೂರಿ, ಮಹಮೂದ್ ಪಟೇಲ, ರವಿ ಕೋಳಕೂರ, ಮರೆಪ್ಪ ಸರಡಗಿ ಸೇರಿ ಬಿಸಿಎಂ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.