ಕಲಬುರ್ಗಿ: ‘ತಂದೆಯವರ ನೆನಪಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರಂಭಿಸಲಾಗಿರುವ ಡಾ. ಎನ್.ಧರ್ಮಸಿಂಗ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿಗೆ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದು ಧರ್ಮಸಿಂಗ್ ಪುತ್ರ ಮತ್ತು ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ತಿಳಿಸಿದರು.
‘ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 90 ಅಂಕ ಗಳಿಸಿದ 50 ವಿದ್ಯಾರ್ಥಿಗಳಿಗೆ ಎರಡು ವರ್ಷಗಳವರೆಗೆ ಉಚಿತ ಸೀಟು ನೀಡಲಾಗುವುದು. ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಮತ್ತು ವಾಹನ ಸೌಕರ್ಯ ಇರಲಿದೆ. ಆರಂಭಿಕ ಹಂತದಲ್ಲಿ ಆರ್ಯನ್ ಶಾಲೆಯ ಪಕ್ಕದ ಕಟ್ಟಡದಲ್ಲಿ ತರಗತಿಗಳು ನಡೆಯಲಿವೆ’ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘1999ರಲ್ಲಿ ಧರ್ಮಸಿಂಗ್ ಅವರು ತಮ್ಮ ಸಹೋದರ ಶಂಕರ ಸಿಂಗ್ ಅವರ ನೆನಪಿನಲ್ಲಿ ಟ್ರಸ್ಟ್ ಆರಂಭಿಸಿದ್ದರು. ಆ ಟ್ರಸ್ಟ್ ಮೂಲಕ ಪಬ್ಲಿಕ್ ಸ್ಕೂಲ್, ಐಟಿಐ, ಡಿ ಫಾರ್ಮಾ, ಬಿ ಫಾರ್ಮಾ ಕಾಲೇಜು ನಡೆಸಲಾಗುತ್ತಿದೆ. ಉತ್ತಮ ಶೈಕ್ಷಣಿಕ ಅನುಭವ ಹೊಂದಿದ ಉಪನ್ಯಾಸಕ ವೃಂದವಿದ್ದು, ಐಐಟಿ, ನೀಟ್, ಜೆಇಇ, ಮೆಡಿಕಲ್ ಕೋಚಿಂಗ್ ಸಹ ನೀಡಲಾಗುವುದು’ ಎಂದರು.
₹ 259 ಕೋಟಿ ಪ್ರಸ್ತಾವ: ‘ಜೇವರ್ಗಿ ತಾಲ್ಲೂಕಿನಲ್ಲಿ ಚೆಕ್ ಡ್ಯಾಂ ನಿರ್ಮಾಣದಂತಹ ನೀರಾವರಿ ಚಟುವಟಿಕೆ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ₹ 259 ಕೋಟಿ ಮೊತ್ತದ ಪ್ರಸ್ತಾವ ಸಲ್ಲಿಸಲಾಗಿತ್ತು. ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಅನುಮೋದನೆ ನೀಡಬೇಕು ಎನ್ನುವಷ್ಟರಲ್ಲಿ ಸರ್ಕಾರ ಬಿದ್ದು ಹೋಯಿತು. ಈ ಬಾರಿ ಹಣ ಬಿಡುಗಡೆಯಾಗುವ ನಿರೀಕ್ಷೆ ಇದೆ. ಈಗಾಗಲೇ ಕ್ಷೇತ್ರದಲ್ಲಿ ₹ 21.5 ಕೋಟಿ ಮೊತ್ತದ ನೀರಾವರಿ ಕಾಮಗಾರಿಗಳು ನಡೆಯುತ್ತಿವೆ’ ಎಂದು ಡಾ. ಅಜಯ್ ಸಿಂಗ್ ವಿವರಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ ಪತ್ರಿಕಾಗೋಷ್ಠಿಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.