ಸೇಡಂ: ‘ಜ್ಯೋತಿಯ ಮೂಲಕ ಮನೆ ಮತ್ತು ಮನ ಬೆಳಗಿಸುವ ಸಂಸ್ಕೃತಿ ನಮ್ಮದು. ಆದರೆ ಪ್ರಸ್ತುತ ದಿನಗಳಲ್ಲಿ ನಮ್ಮ ಮಕ್ಕಳ ಜನ್ಮದಿನವನ್ನು ಜ್ಯೋತಿ ಆರಿಸಿ ಆಚರಿಸುತ್ತೇವೆ. ಇದು ಭಾರತೀಯ ಸಂಸ್ಕೃತಿಯ ವಿನಾಶದ ಸಂಕೇತ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಸು. ರಾಮಣ್ಣ ಕಳವಳ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಶುಕ್ರವಾರ ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಘಟಕ ಆಯೋಜಿಸಿದ್ಧ ದೀಪಲಕ್ಷ್ಮಿ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಮಾರುಹೋಗುತ್ತಿರುವ ನಾವು, ಮಕ್ಕಳಿಗೆ ದೀಪ ಆರಿಸುವ ಸಂಸ್ಕೃತಿಯನ್ನು ಕಲಿಸುತ್ತಿದ್ದೇವೆ. ಜ್ಯೋತಿಯಂತೆ ಪ್ರಕಾಶಿಸಿ ಬೆಳಗಬೇಕಾದ ನಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕೆ ವಿನಾಶದ ಸಂಸ್ಕೃತಿಯ ಮುನ್ನುಡಿ ಬರೆಯುತ್ತಿದ್ದೇವೆ. ಈ ನಿಟ್ಟಿನಲ್ಲಿ ನಮ್ಮತನ ಹಾಗೂ ತಾಯಿನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು’ ಎಂದರು.
ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ‘12ನೇ ಶತಮಾನದಲ್ಲಿಯೇ ಶರಣರು ನಮ್ಮ ಸಮಾಜದ ಕಲ್ಪನೆಯನ್ನು ಕಂಡಿದ್ದರು. ಪ್ರತಿಯೊಂದು ಸಮಾಜದ ಶರಣರನ್ನು ಗುರುತಿಸಿದ ಬಸವಣ್ಣ ವಿವಿಧ ಸಮಾಜಕ್ಕೆ ಪ್ರಾತಿನಿಧ್ಯ ನೀಡಿದ್ದರು. ಈ ನಿಟ್ಟಿನಲ್ಲಿ ಅವರು ಹಾಕಿಕೊಟ್ಟ ವಚನ ಸಂದೇಶಗಳು ಇಂದಿನ ಮನುಕುಲದ ಏಳಿಗೆಗೆ ದಾರಿದೀಪಗಳಾಗಿವೆ’ ಎಂದರು.
ಶಿವಶಂಕರೇಶ್ವರ ಮಠದ ಶಿವಶಂಕರ ಶಿವಾಚಾರ್ಯ, ದಿಗ್ಗಾಂವ ಸಿದ್ಧವೀರ ಶಿವಾಚಾರ್ಯ, ಬಳಿರಾಮ ಮಹಾರಾಜ, ಕರಿಬಸವ ಮಹಾಸ್ವಾಮೀಜಿ, ಪಾಳಾದ ಗುರುಮೂರ್ತಿ ಶಿವಾಚಾರ್ಯ, ಸದಾಶಿವ ಸ್ವಾಮೀಜಿ, ಪಂಚಾಕ್ಷರಿ ಸ್ವಾಮೀಜಿ, ಶಾಂತ ಸೋಮನಾಥ ಶಿವಾಚಾರ್ಯ, ಕೊಟ್ಟೂರೇಶ್ವರ ಶಿವಾಚಾರ್ಯ, ಸಂಗಮನಾಥ ಸ್ವಾಮೀಜಿ ಇದ್ದರು. ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ದೀಪಾಲಿ ಲಿಂಗರಾಜಪ್ಪ ಅಪ್ಪ, ಸಿದ್ದು ಬಾನಾರ್, ಶಿವಲಿಂಗರೆಡ್ಡಿ ಬೆನಕನಹಳ್ಳಿ, ವಿಜಯಲಕ್ಷ್ಮೀ ಹಿರೇಮಠ, ಸುಭಾಷ ಕಾಂಬಳೆ, ಭಾಗ್ಯಲಕ್ಷ್ಮೀ ನಾಯಿಕೋಡಿ, ಮಾಧವಿ ಐನಾಪೂರ, ಶಿವಕುಮಾರ ಬೋಳಶೆಟ್ಟಿ, ರಾಘವೇಂದ್ರ ಮುಸ್ತಾಜರ್ ಇದ್ದರು.
ಸರೋಜಾ ನಿಂಗದಾಳ ಸ್ವಾಗತಿಸಿದರು. ಮಿನಾಲ್ ನಿರೂಪಿಸಿದರು. ಸರಿತಾ ಮಾಣಿಕವಾರ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.