ಕಲಬುರ್ಗಿ: ‘ಆಯುಷ್ಮಾನ್ ಭಾರತ್– ಆರೋಗ್ಯ ಕರ್ನಾಟಕ’ ಯೋಜನೆಯು ಬಡವರಿಗೆ ತುಂಬ ಸಹಾಯಕವಾಗಿದ್ದು, ಪ್ರತಿಯೊಬ್ಬ ಫಲಾನುಭವಿಯೂ ಇದರ ಪ್ರಯೋಜನ ಪಡೆಯಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ ಹೇಳಿದರು.
ನಗರದಲ್ಲಿ ಶುಕ್ರವಾರ ‘ಆಯುಷ್ಮಾನ್ ಭಾರತ– ಆರೋಗ್ಯ ಕರ್ನಾಟಕ’ ಯೋಜನೆಯಡಿ ಸಾರ್ವಜನಿಕರಿಗೆ ಆರೋಗ್ಯ ಕಾರ್ಡ್ ವಿತರಿಸುವ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆ ಬಡವರಿಗೆ ತುಂಬ ಉಪಯೋಗವಾಗಿದ್ದು, ಅನೇಕ ಮಾರಣಾಂತಿಕ ಕಾಯಿಲೆಗಳಿಗೆ ಇಲ್ಲಿ ಬಿಪಿಎಲ್ ಕುಟುಂಬದ ಪ್ರತಿ ಸದಸ್ಯನಿಗೆ ವರ್ಷಕ್ಕೆ ₹ 5 ಲಕ್ಷದರೆಗೆ ಹಾಗೂ ಎಪಿಎಲ್ ಕುಟಂಬದ ಪ್ರತಿ ಸದಸ್ಯನಿಗೆ ₹ 1.5 ಲಕ್ಷದವರೆಗೆ ನಿಗದಿತ ಆಸ್ಪತ್ರೆಗಳಲ್ಲಿ ಉಚಿತವಾಗಿ ಆರೋಗ್ಯ ಸೇವೆ ಇದರಲ್ಲಿ ನೀಡಲಾಗುತ್ತಿದೆ’ ಎಂದರು.
ಜಿಲ್ಲೆಯಲ್ಲಿ 289 ಸಾಮಾನ್ಯ ಸೇವಾ ಸಿಂಧು ಕೇಂದ್ರಗಳಿವೆ. ಅಫಜಲಪುರದಲ್ಲಿ– 37, ಆಳಂದ-30, ಚಿಂಚೋಳಿ- 30, ಚಿತ್ತಾಪುರ-41, ಜೇವರ್ಗಿ-18, ಕಲಬುರ್ಗಿ– 113, ಸೇಡಂ– 20 ಕೇಂದ್ರ ತೆರೆಯಲಾಗಿದೆ. ಜಿಲ್ಲಾಸ್ಪತ್ರೆ ಹಾಗೂ ಎಲ್ಲ ತಾಲ್ಲೂಕು ಆಸ್ಪತ್ರೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡು, ಫಲಾನುಭವಿಗಳಿಗೆ ಆರೋಗ್ಯ ಕಾರ್ಡ್ಗಳನ್ನು ನೀಡಲಾಗುತ್ತಿದೆ. ಕಾರ್ಡ್ ಪಡೆಯಲು ಬರುವ ಸಾರ್ವಜಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದಕೊಳ್ಳಬೇಕು. ಬಯೋಮೆಟ್ರಿಕ್ ಪರೀಕ್ಷೆ ಮುನ್ನ ಮತ್ತು ನಂತರ ಸ್ಯಾನಿಟೈಸರ್ದಿಂದ ಕೈಗಳನ್ನು ಶುಚಿತ್ವಗೊಳಿಸುವುದು ಕಡ್ಡಾಯವಾಗಿದೆ ಎಂದು ಅವರು ಮಾಹಿತಿ ನೀಡಿದರು.
ಈ ಯೋಜನೆಯಡಿ ಕೋವಿಡ್ ಅಲ್ಲದ ರೋಗಿಗಳಿಗೆ 1,650 ನಮೂನೆಯ ಕಾಯಿಲೆಗಳಿಗೆ ಚಿಕಿತ್ಸೆ ಲಭ್ಯವಿದೆ. ಅದರಲ್ಲಿ ಸಾಮಾನ್ಯ ದ್ವಿತೀಯ ಹಂತದ 291, ಕ್ಲಿಷ್ಟಕರ ದ್ವಿತೀಯ ಹಂತದ 254 ಚಿಕಿತ್ಸಾ ವಿಧಾನಗಳು, ತೃತೀಯ ಹಂತದ 900 ಚಿಕಿತ್ಸಾ ವಿಧಾನಗಳು ಹಾಗೂ 169 ತುರ್ತು ಚಿಕಿತ್ಸಾ ವಿಧಾನಗಳನ್ನು ನೀಡಲಾಗಿದೆ. 169 ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫೆರಲ್ ಚೀಟಿ ಇಲ್ಲದೇ ನೇರವಾಗಿ ನೊಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದರು.
ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸೇವಾ ಸಿಂಧು ಜಿಲ್ಲಾ ಯೋಜನಾ ವ್ಯವಸ್ಥಾಪಕ ಅರವಿಂದ ಬಾಡಗಿ ಹಾಗೂ ಸಾಮಾನ್ಯ ಸೇವಾ ಕೇಂದ್ರದ ಸಿಬ್ಬಂದಿ ದಿನೇಶ ಕಟ್ಟಿಮನಿ ಅವರು ಇದ್ದರು.
(ಹೆಚ್ಚಿನ ಮಾಹಿತಿಗಾಗಿ 9379049999) ಸಂಪರ್ಕಿಸಬಹುದು)
ಬಾಕ್ಸ್–1
ಪಟ್ಟಿ
ಜಿಲ್ಲೆಯಲ್ಲಿ ವಿತರಿಸಿದ ಕಾರ್ಡ್ಗಳು
ಅಫಜಲಪುರ;22467
ಆಳಂದ;16289
ಚಿಂಚೋಳಿ;19895
ಚಿತ್ತಾಪುರ;20426
ಜೇವರ್ಗಿ;4410
ಕಲಬುರ್ಗಿ;67763
ಸೇಡಂ;10185
ಒಟ್ಟು;1,61,435
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.