ADVERTISEMENT

ಚಿಂಚೋಳಿ | ಜನತಾ ದರ್ಶನ: ಅಹವಾಲುಗಳ ಸುರಿ‘ಮಳೆ’

ಜನಸ್ಪಂದನ ಕಾರ್ಯಕ್ರಮದಲ್ಲಿ 800ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ

ಮಲ್ಲಿಕಾರ್ಜುನ ನಾಲವಾರ
Published 26 ಸೆಪ್ಟೆಂಬರ್ 2023, 6:17 IST
Last Updated 26 ಸೆಪ್ಟೆಂಬರ್ 2023, 6:17 IST
ಚಿಂಚೋಳಿಯಲ್ಲಿ ಸೋಮವಾರ ನಡೆದ ಜನತಾ ದರ್ಶನದಲ್ಲಿ ಅಂಗವಿಕಲೆ ಮಹಾನಂದಾ ಅವರ ಅಹವಾಲು ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ. ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಶಾಸಕ ಡಾ. ಅವಿನಾಶ ಜಾಧವ ಇದ್ದರು
ಚಿಂಚೋಳಿಯಲ್ಲಿ ಸೋಮವಾರ ನಡೆದ ಜನತಾ ದರ್ಶನದಲ್ಲಿ ಅಂಗವಿಕಲೆ ಮಹಾನಂದಾ ಅವರ ಅಹವಾಲು ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ. ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಶಾಸಕ ಡಾ. ಅವಿನಾಶ ಜಾಧವ ಇದ್ದರು   

ಚಿಂಚೋಳಿ: ವಿವಿಧೆಡೆಯಿಂದ ಸಮಸ್ಯೆಗಳ ಮೂಟೆ ಹೊತ್ತು ಇಲ್ಲಿಗೆ ಬಂದವರು ಸಾಲಾಗಿ ವೇದಿಕೆ ಹತ್ತಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕೈಮುಗಿದು ತಮ್ಮ ಕಷ್ಟಕಾರ್ಪಣ್ಯಗಳನ್ನು ಹೇಳಿಕೊಂಡರು. ತಾಳ್ಮೆಯಿಂದ ಅವರ ಕಷ್ಟಗಳಿಗೆ ಕಿವಿಯಾಗಿ, ಮನವಿಯನ್ನು ಪರಿಶೀಲಿಸಿ ಅವರಿಗೆ ಸ್ಪಂದಿಸುವಂತೆ ತಮ್ಮ ಅಧಿಕಾರಿಗಳ ತಂಡಕ್ಕೆ ಸಚಿವರು ಸೂಚಿಸಿದರು.

ನ್ಯಾಯ ಸಿಗದೆ ಕಚೇರಿಗಳಿಗೆ ಅಲೆದಾಡಿದವರಿಗೆ ಸಚಿವರ ಭೇಟಿ ಆಶಾಕಿರಣ ಮೂಡಿಸಿತಾದರೂ, ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಸುರಿದ ಜೋರು ಮಳೆಯು ಬಂದವರ ನೆರವಿನ ಭರವಸೆಯನ್ನು ನೀರಲ್ಲಿ ಕೊಚ್ಚಿಕೊಂಡು ಹೋಗುವಂತೆ ಮಾಡಿತು.

ತಾಲ್ಲೂಕಿನ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ‘ಜನತಾ ದರ್ಶನ ಹಾಗೂ ಜನಸ್ಪಂದನಾ’ ಕಾರ್ಯಕ್ರಮ ಆಯೋಜಿಸಿತ್ತು. ಚಿಂಚೋಳಿ, ಸೇಡಂ, ಕಾಳಗಿ, ಚಿತ್ತಾಪುರ... ಹೀಗೆ ಹಲವು ತಾಲ್ಲೂಕುಗಳಿಂದ ಬಂದಿದ್ದ ಬಹಳಷ್ಟು ಮಂದಿ ಸಚಿವರಿಗೆ ಕೈಮುಗಿದು ನೆರವು ಕೇಳಿದರು.

ADVERTISEMENT

ಗ್ರಾಮ ಪಂಚಾಯಿತಿಯಿಂದ ನಾಲ್ಕು ತಿಂಗಳಿಂದ ವೇತನ ಸಿಗದೆ ಸ್ವಚ್ಛತೆ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರು ಕಣ್ಣಲ್ಲಿ ಕಣ್ಣೀರು ತುಂಬಿಕೊಂಡೇ ತಮ್ಮ ಕಷ್ಟವನ್ನು ಹೇಳಿಕೊಂಡರು. ಪಿಡಿಒ ಅವರನ್ನು ಕರೆದು ಕಾರಣ ಕೇಳಿದ ಸಚಿವರು, ‘ವಾರದೊಳಗೆ ಬಾಕಿ ಕೊಡದೆ ಇದ್ದರೆ ಅಮಾನತು ಮಾಡಿಸುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

ವಿಳಂಬ ಧೋರಣೆ ತೋರಿದ ಅಧಿಕಾರಿಗಳ ನಡೆಗೆ ಸಚಿವರು ಕೊಡುತ್ತಿದ್ದ ಖಡಕ್ ಸಂದೇಶ ಹಾಗೂ ನೊಂದವರನ್ನು ತಮ್ಮ ಮೃದುವಾದ ಮಾತುಗಳಿಂದ ಸಂತೈಸುತ್ತಿದ್ದ ಪರಿಗೆ ಸರತಿ ಸಾಲಿನಲ್ಲಿ ನಿಂತಿದ್ದವರ ಸುಸ್ತು ಮರೆಸುವಂತಿತ್ತು. ಆದರೆ, ವರುಣ ಇದೆಲ್ಲಕ್ಕೂ ತೆರೆ ಎಳೆದು, ಸಾರ್ವಜನಿಕರು ಹಾಗೂ ಅಧಿಕಾರಿಗಳನ್ನು ವೇದಿಕೆಯಿಂದಲೇ ಚದುರಿಸಿದ.

ಮಳೆಯ ನಡುವೆಯೂ ಸಚಿವರು ಕೆಲ ಹೊತ್ತ ಅಹವಾಲುಗಳನ್ನು ಸ್ವೀಕರಿಸಿದರು. ಕೆಲವು ಜನರು ಟೆಂಟ್‌ನಿಂದ ಓಡಿ ಹೋದರು. ಕಷ್ಟಗಳನ್ನು ಹೊತ್ತು ಬಂದಿದ್ದವರು ಕುಳಿತುಕೊಳ್ಳಲು ಹಾಕಿದ್ದ ಕುರ್ಚಿಗಳನ್ನೇ ಕೊಡೆಯನ್ನಾಗಿಸಿಕೊಂಡು ಮಳೆಯಲ್ಲೇ ನೆನೆಯುತ್ತಾ ನಿಂತರು. ಮಳೆ ಇನ್ನಷ್ಟು ಬಿರುಸು ಪಡೆಯುತ್ತಿದ್ದಂತೆ ವೇದಿಕೆಯಿಂದ ನಿರ್ಗಮಿಸಿದ ಸಚಿವರು ಮತ್ತು ಅಧಿಕಾರಿಗಳು, ಆದರ್ಶ ಶಾಲೆಯ ಮಕ್ಕಳೊಂದಿಗೆ ಊಟ ಮಾಡಿದರು. ಸಚಿವರ ಹಿಂದೆಯೇ ಶಾಲೆಗೂ ಹೋದ ಅರ್ಜಿದಾರರು, ಅಲ್ಲಿಯೇ ತಮ್ಮ ಮನವಿಗಳನ್ನು ಸಲ್ಲಿಸಿದರು.

ಅರ್ಜಿಗಳ ವಿಲೇವಾರಿ ವಿಳಂಬ, ವೇತನ ಬಾಕಿ, ನಿವೃತ್ತ ಸೈನಿಕರಿಗೆ ಜಮೀನು ಮಂಜೂರು, ಸಿದ್ಧಶ್ರೀ ಕಾರ್ಖಾನೆ ಜಮೀನು ಅತಿಕ್ರಮಣ, ಬಸ್ ಸೇವೆ ಆರಂಭ ಸೇರಿದಂತೆ ವಿವಿಧ ದೂರುಗಳಿಗೆ ಸಂಬಂಧಿಸಿದ ಅಧಿಕಾರಿಗಳನ್ನು ತಮ್ಮ ಬಳಿ ಕರೆಯಿಸಿಕೊಂಡರು. ಅವುಗಳ ಬಗ್ಗೆ ಕಾರಣ ತಿಳಿದುಕೊಂಡು, ನಿಗದಿತ ಅವಧಿಯಲ್ಲಿ ಸಮಸ್ಯೆಗಳನ್ನು ಇತ್ಯರ್ಥಪಡಿಸುವಂತೆ ತಾಕೀತು ಮಾಡಿದರು.

790 ಜನರಿಗೆ ಸರ್ಕಾರದ ವಿವಿಧ ಇಲಾಖೆಗಳ ಸೌಲಭ್ಯ ವಿತರಣೆ ಮಾಡಲಾಯಿತು. 800ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದು, ಆಧಾರ್ ಸಂಬಂಧಿತ 250ಕ್ಕೂ ಹೆಚ್ಚು ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಲಾಗಿದೆ. 895 ಜನರು ಆರೋಗ್ಯ ತಪಾಸಣೆಗೆ ಒಳಗಾದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಂಕಜ್ ಕುಮಾರ ಪಾಂಡೆ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ಎಸ್‌ಪಿ ಅಡ್ಡೂರು ಶ್ರೀನಿವಾಸಲು,‌ ಡಿಎಫ್ಒ ಸುಮಿತ್ ಕುಮಾರ್, ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತ‌ ಆಶಪ್ಪ ಪೂಜಾರಿ, ಚಿಂಚೋಳಿ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ತಾ.ಪಂ ಇಒ ಶಂಕರ್ ರಾಠೋಡ, ಡಿಇಒ ಹಣಮಂತ ರಾಠೋಡ ಇದ್ದರು.

ಚಿಂಚೋಳಿಯಲ್ಲಿ ಸೋಮವಾರ ನಡೆದ ಜನತಾ ದರ್ಶನದಲ್ಲಿ ತೆರೆಯಲಾದ ಮಳಿಗೆಗಳಲ್ಲಿ ಅರ್ಜಿಗಳನ್ನು ಸಲ್ಲಿಸಿದ ಸಾರ್ವಜನಿಕರು
ಚಿಂಚೋಳಿಯಲ್ಲಿ ಸೋಮವಾರ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮಳೆಯಿಂದ ಆಸರೆ ಪಡೆಯಲು ಕುರ್ಚಿಗಳನ್ನು ತಲೆಯ ಮೇಲೆ ಹಿಡಿದು ನಿಂತ ಜನರು
ಕಲಬುರಗಿ ಕನೆಕ್ಟ್‌ಗೆ ಬಂದ 560 ಅರ್ಜಿಗಳ ಪೈಕಿ 300 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. ಪೊಲೀಸ್‌ ಠಾಣೆಗಳ ಕ್ಯೂಆರ್ ಕೋಡ್‌ಗೂ 800ಕ್ಕೂ ಹೆಚ್ಚು ಅಭಿಪ್ರಾಯಗಳು ಬಂದಿವೆ
ಪ್ರಿಯಾಂಕ್ ಖರ್ಗೆ ಜಿಲ್ಲಾ ಉಸ್ತುವಾರಿ ಸಚಿವ
‘ಜನರ ಸಮಸ್ಯೆಗಳ ಇತ್ಯರ್ಥಕ್ಕೆ 24 ತಾಸು ಕೆಲಸ ಮಾಡಬೇಕು’
‘ತಿಂಗಳಿಗೆ ಒಮ್ಮೆ ಜನಸ್ಪಂದನೆ ಕಾರ್ಯಕ್ರಮ ಆಯೋಜಿಸಿದರೆ ಸಾಲದು. ಸರ್ಕಾರವೇ ಜನರ ಬಳಿಗೆ ಹೋಗಿ ಅವರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ನೀಡಲು 24 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಜನತಾ ದರ್ಶನ ಉದ್ಘಾಟಿಸಿ ಮಾತನಾಡಿದ ಅವರು ‘ಎಲ್ಲರಿಗೂ ಶಾಸಕರ ಸಚಿವರ ಮನೆ ಬಾಗಿಲಿಗೆ ಕಲಬುರಗಿ ಬೆಂಗಳೂರಿಗೆ ಹೋಗುವ ಶಕ್ತಿ ಇರುವುದಿಲ್ಲ. ಅಂತಹ ಜನರ ಬಳಿಗೆ ಸರ್ಕಾರವೇ ಹೋಗಬೇಕಾಗುತ್ತದೆ’ ಎಂದರು.‌ ‘ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗಾಗಿ ವಸತಿ ಸಹಿತ ನಾಗಾವಿ ಇನ್‌ಸ್ಟಿಟ್ಯೂಟ್ ಫಾರ್ ಕಾಂಪಿಟೇಟಿವ್ ಎಕ್ಸಾಮ್ಸ್‌(ನೈಸ್ ಅಕಾಡೆಮಿ) ಸ್ಥಾಪಿಸಲಾಗುವುದು. ಒಂದು ತಿಂಗಳಲ್ಲಿ ಮೇಲ್ದರ್ಜೆಗೆ ಏರಿಸಿದ 100 ಗ್ರಂಥಾಲಯಗಳನ್ನು ಸಹ ಉದ್ಘಾಟಿಸಲಾಗುವುದು’ ಎಂದು ಹೇಳಿದರು. ‘ಮಹಿಳೆಯರಿಗಾಗಿ 400 ಹೈಟೆಕ್‌ ಶೌಚಾಲಯಗಳನ್ನು ನಿರ್ಮಿಸಿ ಅವುಗಳ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿಗೆ ವಹಿಸಲಾಗುವುದು. ಸಾರ್ವಜನಿಕರು ಸಹ ಸರ್ಕಾರದ ಯೋಜನೆಗಳಿಗೆ ಬೆಂಬಲಿಸಿ ಕೈಜೋಡಿಸಿದ್ದೇಯಾದರೆ ಉತ್ತಮವಾದ ಆಡಳಿತ ಕೊಟ್ಟು ಪ್ರತಿಯೊಂದು ಯೋಜನೆಯನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತೇನೆ’ ಎಂದರು
ಪರಸ್ಪರ ಕಾಲೆಳೆದ ಕಮಕನೂರ– ಡಾ. ಅವಿನಾಶ
ಭಾಷಣದ ವೇಳೆ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಹಾಗೂ ಶಾಸಕ ಡಾ. ಅವಿನಾಶ ಜಾಧವ ಅವರು ಪರಸ್ಪರ ಕಾಲೆಳದು ಲೇವಡಿ ಮಾಡಿದರು. ‘ಸಿ.ಎಂ ಸಿದ್ದರಾಮಯ್ಯ ಅವರಂತೆ ನಮ್ಮ ಭಾಗದಲ್ಲಿ ಪ್ರಿಯಾಂಕ್ ಖರ್ಗೆ ಅವರ ಗಾಳಿ ಬೀಸುತ್ತಿದೆ. ಅವರಿಂದಾಗಿಯೇ ದಶಕದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿದೆ. ಏನಾದರು ಸಮಸ್ಯೆ ಇದ್ದರೆ ಶಾಸಕರು ಸಚಿವರ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬಹುದು’ ಎಂದು ತಿಪ್ಪಣ್ಣಪ್ಪ ಅವರು ವ್ಯಂಗ್ಯವಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ. ಅವಿನಾಶ ಜಾಧವ ಅವರು ‘ನಮ್ಮ ಸರ್ಕಾರದ ಅವಧಿಯಲ್ಲಿ ಚಿಂಚೋಳಿಗೆ ಅತಿ ಹೆಚ್ಚು ಅನುದಾನ ತಂದಿದ್ದೇನೆ. ಯಾವುದೇ ಸರ್ಕಾರ ಇದ್ದರೂ ಜನರ ಹಿತದೃಷ್ಟಿಯಿಂದ ನಡೆದುಕೊಳ್ಳಬೇಕು. ಇಂತಹ ಕಾರ್ಯಕ್ರಮಗಳ ಮೂಲಕ ಜನರಿಗೆ ಒಳ್ಳೆಯ ಸಂದೇಶ ಹೋಗಲಿ’ ಎಂದರು.
ಶಿಷ್ಟಾಚಾರ ಉಲ್ಲಂಘನೆ
ಜಿಲ್ಲಾಡಳಿತ ಆಯೋಜಿಸಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ಮುಖಂಡರು ವೇದಿಕೆಯ ಮೇಲೆ ಕುಳಿತಿದ್ದರು. ಕಾಂಗ್ರೆಸ್ ಮುಖಂಡರಾದ ಸುಭಾಷ ರಾಠೋಡ ರಾಜೇಶ ಗುತ್ತೇದಾರ ದೀಪಕ್ ನಾಗ್ ಪುಣ್ಯಶೆಟ್ಟಿ ಭೀಮರಾವ್ ಟಿ.ಟಿ ಬಸಯ್ಯ ಗುತ್ತೇದಾರ ಬಸವರಾಜ ಪಾಟೀಲ ಹೇರೂರು ಬಸವರಾಜ ಮಾಲಿ ಬಿಜೆಪಿ ಮುಖಂಡರಾದ ಗೌತಮ ಪಾಟೀಲ ಕೆ.ಎಂ.ಬಾರಿ ಸಂತೋಷ ಗಣಂತಿ ಅವರು ವೇದಿಕೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಿಷ್ಟಾಚಾರ ಉಲ್ಲಂಘಿಸಿದರು.
15ಕ್ಕೂ ಅಧಿಕ ಮಳಿಗೆ ಸ್ಥಾಪನೆ
ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಗ್ರಾಮೀಣಾಭಿವೃದ್ಧಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಅರಣ್ಯ ಜಿಲ್ಲಾ ಪೊಲೀಸ್ ಕೃಷಿ ಜಿಲ್ಲಾ ನಗರಾಭಿವೃದ್ಧಿ ಕೋಶ ಕಂದಾಯ ಮೀನುಗಾರಿಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿ 15ಕ್ಕೂ ಅಧಿಕ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ಪಡಿತರ ‌ಚೀಟಿ ತಿದ್ದುಪಡಿ ಆಧಾರ್ ಕೆವೈಸಿ ಮತದಾರರ ಗುರುತಿನ ಚೀಟಿ ಗೃಹಜ್ಯೋತಿ ಗೃಹಲಕ್ಷ್ಮಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಜೆಸ್ಕಾಂ ಬ್ಯಾಂಕ್ ಸಾಲ ಸೌಲಭ್ಯ ಸೇರಿದಂತೆ ಇನ್ನಿತರ ಯೋಜನೆಗಳ ತಾಂತ್ರಿಕ ಸಮಸ್ಯೆ ಬಗೆಹರಿಸಲು ಸಿಬ್ಬಂದಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಕೆಲವು ಅರ್ಜಿಗಳಿಗೆ ಸ್ಥಳದಲ್ಲೇ ಇತ್ಯರ್ಥಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.