ಚಿಂಚೋಳಿ: ತಾಲ್ಲೂಕಿನ ಶಾದಿಪುರ ಸುತ್ತಲಿನ ತಾಂಡಾಗಳಲ್ಲಿ ದೀಪಾವಳಿಯನ್ನು ದವಾಳಿಯಾಗಿ ಮಂಗಳವಾರ ಸಡಗರ ಸಂಭ್ರಮದಿಂದ ಆಚರಿಸಿದರು.
ಬರುವಾಗ ಅಮಾವಾಸ್ಯೆ- ಹೋಗುವಾಗ ಹುಣ್ಣಿಮೆ ಆಚರಿಸಬೇಕೆಂಬ ವಾಡಿಕೆಯಂತೆ ಮಂಗಳವಾರ ಬೆಳಗಿನಜಾವ ಕಾಳಿಮಾಸ ಆಚರಿಸಿ ತಾಂಡಾಗಳಲ್ಲಿ ಮೇರಾ ಸಮರ್ಪಣೆ ಸಂಪ್ರದಾಯದಂತೆ ನಡೆಯಿತು.
ಚಾಪ್ಲಾನಾಯಕ ತಾಂಡಾ, ಜವಾಹರನಗರ, ಸೇವುನಾಯಕ, ಧನಸಿಂಗ್, ಭಿಕ್ಕುನಾಯಕ ಮತ್ತು ಚಂದುನಾಯಕ ಹಾಗೂ ಜಿಲ್ವರ್ಷಾ, ಚಿಂದಾನೂರ ತಾಂಡಾಗಳಲ್ಲಿ ಮೇರಾ ಆಚರಿಸಿ ಮಂಗಳವಾರ ಬೆಳಿಗ್ಗೆ ಕಾಡಿಗೆ ಹೋಗಿ ಹೂವುಗಳು ತಂದ ಯುವತಿಯರು, ಸಂಜೆಗೆ ಗೋಧಣ ಪೂಜೆ ನಡೆಸಿ ಸೇವಾಲಾಲ ಮರಿಯಮ್ಮ ದೇವಾಲಯದ ಎದುರು ಸಾಂಪ್ರದಾಯಿಕ ನೃತ್ಯ ಮಾಡಿ ಸಂಭ್ರಮಿಸಿದರು.
ಕಾಡಿಗೆ ಹೋಗಿದ್ದ ಯುವತಿಯರು ಹೂವಿನ ಬುಟ್ಟಿಯಲ್ಲಿ ಹೂವು ತುಂಬಿಕೊಂಡು ತಾಂಡಾಕ್ಕೆ ಮರಳಿದಾಗ ತಾಂಡಾದಲ್ಲಿ ಹೆಣ್ಣು ಶಿಶುಗಳನ್ನು ಹೂವಿನ ಬುಟ್ಟಿಯಲ್ಲಿ ಕೂಡಿಸಿಕೊಂಡು ಮೆರವಣಿಗೆ ಮಾಡುವ ಮೂಲಕ ಹೆಣ್ಣು ಮಗು ಮನೆ ಲಕ್ಷ್ಮಿ ಎಂಬ ಸಂದೇಶ ಸಾರಿದರು.
ದೊಡ್ಡ ತಾಂಡಾ ಆಗಿರುವುದರಿಂದ ಸುಮಾರು 4 ಕಡೆ ಮೇಕೆಗಳನ್ನು ಬಲಿಕೊಟ್ಟು ಸಳೋಯಿ ತಯಾರಿಸಿ ಸವಿದರು. ತಾಲ್ಲೂಕಿನ ಕುಂಚಾವರಂ ಮತ್ತು ವೆಂಕಟಾಪುರ ಹಾಗೂ ಚಿಂಚೋಳಿ, ಚಿಮ್ಮನಚೋಡ, ಹರಸಗುಂಡಗಿ, ಐನಾಪುರ ಸುತ್ತಲೂ ಮಂಗಳವಾರ ಸಂಜೆಗೆ ಮೇರಾ ಆಚರಿಸಿ ಬುಧವಾರ ಹಬ್ಬ ಆಚರಿಸುತ್ತಿದ್ದಾರೆ.
ದವಾಳಿ ಉತ್ಸವದಲ್ಲಿ ವಿಜಯಕುಮಾರ ರಾಠೋಡ್, ಗೋಪಾಲ ನಾಯಕ, ಭಿಕ್ಕು ನಾಯಕ, ಚಂದರ ಕಾರಭಾರಿ, ವಿಠಲ ಕಾರಭಾರಿ, ಭಜನಸಿಂಗ್, ಹರಿಸಿಂಗ್, ಖೂಬಾಸಿಂಗ್, ರೆಡ್ಡಿ ಜಾಧವ, ಹರಿಶ್ಚಂದ್ರ ಪವಾರ, ಚಂದರ್ ರಾಠೋಡ್, ದೇವಿದಾಸ ಚಿನ್ನಾ ರಾಠೋಡ್, ಓಂಸಿಂಗ್ ರಾಠೋಡ್, ನಾರಾಯಣ ರಾಠೋಡ್, ವಾಲೋಜಿ ಚವ್ಹಾಣ, ಸುಭಾಷ ಪವಾರ, ಗ್ರಾ.ಪಂ. ಭಾರತಿರಾಜ್ ಪವಾರ, ಅನಿತಾ ಭಜನಸಿಂಗ್, ವಿಕ್ರಮ ಚವ್ಹಾಣ ಮೊದಲಾದವರು ಇದ್ದರು.
ದೇಶದ ತುಂಬಾ ನೆಲೆಸಿರುವ ಬಂಜಾರಾ ಜನರ ಭಾಷೆ ಹಾಗೂ ವೇಷಭೂಷಣ ಒಂದೇ ಆಗಿರುವಂತೆ ದೀಪಾವಳಿಯ ಕಾಳಿಮಾಸನಲ್ಲಿ ಸಳೋಯಿ ವಿಶೇಷ ಖಾದ್ಯ ಎನಿಸಿದೆಪಾರ್ವತಿ ಭೀಮರಾವ್ ರಾಠೋಡ್ ಅಂಗನವಾಡಿ ಕಾರ್ಯಕರ್ತೆ ಗಂಗೂನಾಯಕ ತಾಂಡಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.