ADVERTISEMENT

ಕಲಬುರಗಿ| ವರದಕ್ಷಿಣೆ ಕಿರುಕುಳ ನಂತರ ಕೊಲೆ: ಮೃತ ಗೃಹಣಿಯ ತಂದೆ ಆರೋಪ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2023, 5:53 IST
Last Updated 6 ಏಪ್ರಿಲ್ 2023, 5:53 IST

ಕಲಬುರಗಿ: ವರದಕ್ಷಿಣೆಯ ಚಿನ್ನಾಭರಣ ತರುವಂತೆ ಪೀಡಿಸಿ, ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಕೊನೆಗೆ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮೃತ ಮಹಿಳೆ ತಂದೆ ಸಿದ್ದರಾಮ ಬಾಬುರಾಯ ಬುಕ್ಕಾ ಅವರು ಫರ್ಹತಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

‘ತಾಲ್ಲೂಕಿನ ಹೊನ್ನಕಿರಣಗಿ ನಿವಾಸಿ ಮಹಾನಂದಾ ಅಟ್ಟದಮನಿ (22) ಮೃತರು. ಮಹಾನಂದಾ ಪತಿ ರಾಜು ಮಲ್ಲಣ್ಣ ಅಟ್ಟದಮನಿ, ಮಾವ ಮಲ್ಲಣ್ಣ ಅಟ್ಟದಮನಿ, ಭಾವಂದಿರಾದ ಸಂತೋಷ ಮಲ್ಲಣ್ಣ, ಹಣಮಂತ ಮಲ್ಲಣ್ಣ, ನೇಗಣಿಯರಾದ ಚಂದ್ರಕಲಾ ಸಂತೋಷ ಮತ್ತು ಕಾವೇರಿ ಮಲ್ಲಣ್ಣ ಅವರ ವಿರುದ್ಧ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಪತಿಯ ಮನೆಯವರು ವರದಕ್ಷಿಣೆ ಹಣ ಮತ್ತು ಚಿನ್ನ ತರುವಂತೆ ಆಗಾಗ ಕಿರುಕುಳ ಕೊಡುತ್ತಿದ್ದರು. ಈ ಬಗ್ಗೆ ತಿಳಿ ಹೇಳಲು ಮನೆಗೆ ಹೋದಾಗ ಬೆದರಿಸಿದ್ದರು. ಮಂಗಳವಾರ ಬೆಳಿಗ್ಗೆ ನನಗೆ ಕರೆ ಮಾಡಿದ ಅಳಿಯ ರಾಜು. ‘ಮಹಾನಂದಾ ಕ್ರಿಮಿನಾಶಕ ಔಷಧಿ ಕುಡಿದಿದ್ದಾಳೆ. ಕಲಬುರಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೇವೆ’ ಎಂದು ಹೇಳಿದ. ಕೆಲ ಹೊತ್ತಿನ ಬಳಿಕ ಕಲಬುರಗಿಗೆ ಬರುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾಗಿ ತಿಳಿಸಿದ’ ಎಂದು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ರಾಜು ನನ್ನು ಪ್ರಶ್ನಿಸಿದ್ದಕ್ಕೆ ಅಲ್ಲಿಂ ಓಡಿ ಹೋದ’ ಎಂದು ಸಿದ್ದರಾಮ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT