ADVERTISEMENT

ಕಲಬುರಗಿ | ‘ಶಿಕ್ಷಣ, ಸಮಯ ಶ್ರೇಷ್ಠ ಸಂಪತ್ತು’

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ: ಕಮಿಷನರ್‌ ಶರಣಪ್ಪ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 5:23 IST
Last Updated 8 ಸೆಪ್ಟೆಂಬರ್ 2025, 5:23 IST
ಕಲಬುರಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಪೊಲೀಸ್‌ ಕಮಿಷನರ್‌ ಶರಣಪ್ಪ ಎಸ್‌.ಡಿ., ಎಚ್‌ಕೆಇ ಸೊಸೈಟಿ ಅಧ್ಯಕ್ಷ ಶಶೀಲ್‌ ಜಿ. ನಮೋಶಿ, ಸಿದ್ಧಲಿಂಗ ಸ್ವಾಮೀಜಿ, ಗಣಪತಿ ಸಿನ್ನೂರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು ಪ್ರಜಾವಾಣಿ ಚಿತ್ರ
ಕಲಬುರಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಪೊಲೀಸ್‌ ಕಮಿಷನರ್‌ ಶರಣಪ್ಪ ಎಸ್‌.ಡಿ., ಎಚ್‌ಕೆಇ ಸೊಸೈಟಿ ಅಧ್ಯಕ್ಷ ಶಶೀಲ್‌ ಜಿ. ನಮೋಶಿ, ಸಿದ್ಧಲಿಂಗ ಸ್ವಾಮೀಜಿ, ಗಣಪತಿ ಸಿನ್ನೂರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು ಪ್ರಜಾವಾಣಿ ಚಿತ್ರ    

ಕಲಬುರಗಿ: ‘ಶಿಕ್ಷಣವು ಹಲವರ ಬದುಕು, ಕುಟುಂಬಗಳು, ಸಮಾಜಗಳು ಹಾಗೂ ರಾಷ್ಟ್ರಗಳನ್ನು ಬದಲಿಸಿದೆ. ಶಿಕ್ಷಣ ಹಾಗೂ ಗುಣಮಟ್ಟದ ಸಮಯ ನಾವು ಮಕ್ಕಳಿಗೆ ಕೊಡಬಹುದಾದ ಶ್ರೇಷ್ಠ ಸಂಪತ್ತಾಗಿವೆ’ ಎಂದು ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್‌.ಡಿ. ಹೇಳಿದರು.

ನಗರದ ಎಂಆರ್‌ಎಂಸಿ ಸ್ಯಾಕ್‌ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ ಬೆಂಗಳೂರು ಹಾಗೂ ಕಲಬುರಗಿ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪ್ರಸಕ್ತ ಸಮಾಜದಲ್ಲಿ ಮಕ್ಕಳು ಹಲವು ಬಗೆಗೆ ಚಿತ್ತಭಂಗಗಳನ್ನು ಎದುರಿಸುತ್ತಿದ್ದಾರೆ. ಮೊಬೈಲ್‌ ಫೋನ್‌, ಗೆಳೆಯರ ಒತ್ತಡ, ಪಾಲಕರ ಒತ್ತಡ, ಶಿಕ್ಷಣ ಸಂಸ್ಥೆಗಳ ಒತ್ತಡ ಹಾಗೂ ಪಾಲಕರು–ಶೈಕ್ಷಣಿಕ ಸಂಸ್ಥೆಗಳ ಎಂದೂ ಮುಗಿಯದ ಬೇಡಿಕೆ–ನಿರೀಕ್ಷೆಗಳ ವರ್ತುಲದಲ್ಲಿ ಸಿಲುಕಿದ್ದಾರೆ. ಅಂಕಗಳು ಹಾಗೂ ಪದವಿಗಳು ಯಾರೊಬ್ಬರ ನಿರ್ಧರಿತ ಭವಿಷ್ಯ ರೂಪಿಸಲಾರವು. ಶಿಕ್ಷಣ ಅಂದರೆ ಬರೀ ಅಂಕಗಳಲ್ಲ. ಅದು ವ್ಯಕ್ತಿಯೊಬ್ಬರ ಸಮಗ್ರ ಅಭಿವೃದ್ಧಿಯಾಗಿದೆ. ಒಬ್ಬರಲ್ಲಿ ಧೈರ್ಯ ಬೆಳೆಸಿ, ಆತ್ಮವಿಶ್ವಾಸ ವೃದ್ಧಿಸಿ, ವ್ಯಕ್ತಿತ್ವ ನಿರ್ಮಿಸಿ ಸಮಾಜಕ್ಕಾಗಿ ಅವರನ್ನು ಸಜ್ಜುಗೊಳಿಸುವುದೇ ಶಿಕ್ಷಣವಾಗಿದೆ. ಶಿಸ್ತು ಹಾಗೂ ಪ್ರಾಮಾಣಿಕತೆ ಯಶಸ್ಸು ತಂದುಕೊಡಬಲ್ಲ ಸಾಧನಗಳು’ ಎಂದು ಪ್ರತಿಪಾದಿಸಿದರು.

ADVERTISEMENT

‘ಬಿ.ಆರ್‌.ಅಂಬೇಡ್ಕರ್‌ ಆಗಲಿ, ಎಪಿಜೆ ಅಬ್ದುಲ್‌ ಕಲಾಂ ಅವರಾಗಲಿ ನಮ್ಮನಿಮ್ಮಂತೆಯೇ ಬದುಕಿದವರು. ಆದರೆ, ಶಿಕ್ಷಣ ಅವರನ್ನು ಅಮರರನ್ನಾಗಿಸಿದೆ. ಸಮಾಜಕ್ಕೆ ಸತ್ಪ್ರಜೆಗಳನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದದ್ದು. ಪ್ರತಿಯೊಬ್ಬರು ಶಿಕ್ಷಕರೂ ನಡೆ–ನುಡಿ, ಬೋಧನೆ–ಜ್ಞಾನದ ಮೂಲಕ ಮಕ್ಕಳ ಮೇಲೆ ಶಾಶ್ವತವಾದ ಪ್ರಭಾವ ಬೀರುತ್ತಾರೆ’ ಎಂದರು.

‘ಹಲವು ವರ್ಷ ಗಳಿಂದ  ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಕೊನೆಯ ಸ್ಥಾನಗಳಲ್ಲೇ ಇರುತ್ತವೆ. ಅದನ್ನು ಯಾರು ಬದಲಿಸಬೇಕು? ಶಿಕ್ಷಕರು, ಶಿಕ್ಷಣ ಸಂಸ್ಥೆಗಳು, ಪಾಲಕರು ಹಾಗೂ ವಿದ್ಯಾರ್ಥಿಗಳು... ಎಲ್ಲರೂ ಸೇರಿ ಕೈಜೋಡಿಸಿದಾಗ ಫಲಿತಾಂಶ ಬದಲಿಸುವುದು ಅಸಾಧ್ಯವಲ್ಲ’ ಎಂದರು. 

ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್‌ ಸದಸ್ಯ ಶಶೀಲ್‌ ನಮೋಶಿ ಮಾತನಾಡಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಯಡ್ರಾಮಿಯ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಎಬಿಎಆರ್‌ಎಸ್‌ಎಂ ಸಿಯುಕೆ ಘಟಕದ ಅಧ್ಯಕ್ಷ ಪ್ರೊ. ಚನ್ನವೀರ ಆರ್‌.ಎಂ., ಕರ್ನಾಟಕ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಕಾರ್ಯದರ್ಶಿ ಮಹೇಶ ಬಸರಕೋಡ, ಕಲಬುರಗಿ ವಿಭಾಗೀಯ ಪ್ರಮುಖ ಚಂದ್ರಶೇಖರ ಪಾಟೀಲ, ಸಂಘದ ಜಿಲ್ಲಾಧ್ಯಕ್ಷ ಸಂಜೀವಕುಮಾರ ಪಾಟೀಲ ವೇದಿಕೆಯಲ್ಲಿದ್ದರು.

‘ಶಾರ್ಟ್‌ಕಟ್ ಎಂದಿಗೂ ಪತನದ ಪಥ’

‘ವಿದ್ಯಾರ್ಥಿಗಳು ಅಂಕದ ಬೆನ್ನು ಹತ್ತದೇ ಜ್ಞಾನದ ಬೆನ್ನು ಹತ್ತಬೇಕು’ ಎಂದು ಕರ್ನಾಟಕ ಕೇಂದ್ರೀಯ ವಿ.ವಿ ಸಹಪ್ರಾಧ್ಯಾಪಕ ಗಣಪತಿ ಸಿನ್ನೂರ ಹೇಳಿದರು. ಉಪನ್ಯಾಸ ನೀಡಿದ ಅವರು ‘ದೊಡ್ಡ ಕಂಪನಿಯಲ್ಲಿ ಸಿಗುವ ಉದ್ಯೋಗವನ್ನು ಯಶಸ್ವಿಯಾಗಿ ನಿಭಾಯಿಸಲು ಮಕ್ಕಳು ಬಹುಆಯಾಮದಲ್ಲಿ ಬೆಳೆಯಬೇಕಿದೆ’ ಎಂದು ಹೇಳಿದರು. ‘ಅಂಕಗಳೊಂದಿಗೆ ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಬೇಕಿದೆ. ಸಾಧಿಸುವ ಛಲದಲ್ಲಿ ಶಾರ್ಟ್‌ಕಟ್‌ (ಅಡ್ಡದಾರಿ) ಬಳಸಿದರೆ ಅದು ಪತನಕ್ಕೆ ಕಾರಣವಾಗುತ್ತದೆ. ಉದ್ಯೋಗ ಆಧಾರಿತ ಶಿಕ್ಷಣಕ್ಕಿಂತಲೂ ವ್ಯಕ್ತಿತ್ವ ರೂಪಿಸುವಂಥ ಶಿಕ್ಷಣಬೇಕಿದೆ. ಬದುಕಿನಲ್ಲಿ ಎದುರಾಗುವ ಸಮಸ್ಯೆ–ಸವಾಲುಗಳನ್ನು ಮೆಟ್ಟಿನಿಲ್ಲುವಂಥ ವ್ಯಕ್ತಿತ್ವವನ್ನು ಮಕ್ಕಳಲ್ಲಿ ಬೆಳೆಸಬೇಕಿದೆ. ಪ್ರತಿಭಾನ್ವಿತ್ವ ವಿದ್ಯಾರ್ಥಿಗಳು ಬೆಳೆದು ಮೆಡಿಷಿನ್‌ ಕ್ಷೇತ್ರದಲ್ಲಿ ಭಾರತಕ್ಕೆ ನೊಬಲ್‌ ಪ್ರಶಸ್ತಿ ತರಲಿ’ ಎಂದು ಆಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.