ಕಲಬುರ್ಗಿ: ಬೀದರ್ ಜಿಲ್ಲೆಯ ಬಸವ ಕಲ್ಯಾಣದ ಬಸವ ಮಹಾಮನೆ ಆವರಣದಲ್ಲಿ ಜನವರಿ 23 ರಿಂದ ಮೂರು ದಿನಗಳವರೆಗೆ ಏಕತಾ ಸಮಾವೇಶ ಹಾಗೂ ಸಿದ್ಧರಾಮ ಬೆಲ್ದಾಳ ಶರಣರ 71ನೇ ಜನ್ಮದಿನಾಚರಣೆ ಅಂಗವಾಗಿ ಬಸವ ಬೆಳಗು ಅಭಿನಂದನಾ ಗ್ರಂಥ ಲೋಕಾರ್ಪಣೆ ಹಮ್ಮಿಕೊಳ್ಳಲಾಗಿದೆ ಎಂದು ಸಿದ್ಧರಾಮ ಬೆಲ್ದಾಳ ಶರಣರು ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜನವರಿ 23ರಂದು ಬೆಳಿಗ್ಗೆ 10.30ಕ್ಕೆ ಬಸವ ಶಿವಯೋಗ ಉದ್ಘಾಟನಾ ಸಮಾರಂಭ ನಡೆಯಲಿದೆ. ಚಿತ್ತರಗಿ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು. ಕೂಡಲ ಸಂಗಮದ ತಂಗಡಗಿಯ ಬಸವಪ್ರಿಯ ಅನ್ನದಾನಿ ಅಪ್ಪಣ್ಣ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಜೆ 6ಕ್ಕೆ ಬಸವೇಶ್ವರ ಭಜನಾ ಮಂಡಳಿ ವತಿಯಿಂದ ಭಜನೆ ಹಾಗೂ ಭಕ್ತಿಗೀತೆ ಕಾರ್ಯಕ್ರಮ ಜರುಗಲಿದೆ.
24ರಂದು ಬೆಳಿಗ್ಗೆ 11ಕ್ಕೆ ಸಮಾನತಾ ಏಕತಾ ಸಮಾವೇಶ ಹಾಗೂ ಬಸವ ಬೆಳಗು ಅಭಿನಂದನಾ ಗ್ರಂಥ ಲೋಕಾರ್ಪಣೆಯನ್ನು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಉದ್ಘಾಟಿಸುವರು. ಶಾಸಕ ಎಂ.ಬಿ.ಪಾಟೀಲ ವಚನಗಳ ಡಿಜೀಟಲಿಕರಣಕ್ಕೆ ಚಾಲನೆ ನೀಡುವರು. ಶಾಸಕ ಜಿ.ಪರಮೇಶ್ವರ ಕಲ್ಯಾಣ ಏಕತಾ ಪರಿಷತ್ಗೆ ಚಾಲನೆ ನೀಡುವರು. ಶಾಸಕ ಬಿ.ನಾರಾಯಣರಾವ್ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭದಲ್ಲಿ ಬಸವಣ್ಣನವರ ವಂಶಸ್ಥ ಅರವಿಂದ ಕುಲಕರ್ಣಿ, ಡಾ.ರಾಜರತ್ನ ಅಂಬೇಡ್ಕರ್ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 71 ಸಾಧಕರನ್ನು ಸನ್ಮಾನಿಸಲಾಗುತ್ತದೆ ಎಂದರು.
25ರಂದು ಬೆಳಿಗ್ಗೆ7ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಹಾರಕೂಡ ಹಿರೇಮಠ ಸಂಸ್ಥಾನದ ಡಾ.ಚನ್ನವೀರ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಬೀದರಿನ್ ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಹಾಗೂ ಡಾ.ಗಂಗಾಬಿಕಾ ಅಕ್ಕ ಆಶಯ ನುಡಿ ಆಡುವರು ಎಂದರು.
ಬಸವ ಬೆಳಗು ಮಹಾಗ್ರಂಥದ ಸಂಪಾದಕ ಡಾ.ಗಾಂಧೀಜಿ ಸಿ.ಮೋಳಕೇರೆ, ರವೀಂದ್ರ ಶಾಬಾದಿ, ಡಾ.ಮಾಜೀದ ದಾಗಿ, ಲಕ್ಷ್ಮಣ ದಸ್ತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.