ಕಲಬುರ್ಗಿ: 'ದೇಶದಲ್ಲಿ ಇನ್ನೂ ಒಂದೂವರೆ ತಿಂಗಳಿಗೆ ಸಾಲುವಷ್ಟು ಗೊಬ್ಬರ ದಾಸ್ತಾನು ಇದೆ. ಇದಕ್ಕೆ ಹೊಸ ದರ ಅನ್ವಯಿಸದೇ ಹಳೆ ದರದಲ್ಲೇ ರೈತರಿಗೆ ವಿತರಣೆ ಮಾಡಲಾಗುತ್ತದೆ' ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದರು.
ದೇಶದ ಬಂದರು ಮತ್ತು ವಿವಿಧ ಕಂಪನಿಗಳ ಗೋದಾಮಿನಲ್ಲಿ ಗೊಬ್ಬರ ದಾಸ್ತಾನು ಮಾಡಲಾಗಿದೆ. ಬೆಲೆ ಏರಿಕೆ ಸಂಬಂಧ ಈಗಾಗಲೇ ಒಮ್ಮೆ ಸಭೆ ನಡೆಸಲಾಗಿದೆ. ಸೋಮವಾರ ಮತ್ತೊಮ್ಮೆ ಸಭೆ ನಡೆಸಲಾಗುತ್ತದೆ. ಸಭೆ ಬಳಿಕ ರೈತರಿಗೆ ನಿರ್ದಿಷ್ಟ ಭರವಸೆ ನೀಡಲಾಗುವುದು ಎಂದು ಅವರು ನಗರದಲ್ಲಿ ಭಾನುವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ನಾವು ಶೇ.90ರಷ್ಟು ಗೊಬ್ಬರವನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತೇವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗೊಬ್ಬರ ಬೆಲೆ ಏರಿಕೆಯಾಗಿದೆ. ಡಿಎಪಿ ದರದಲ್ಲೇ ಶೇ.200-220ರಷ್ಟು ಹೆಚ್ಚಳವಾಗಿದೆ. ಇದು ನಮ್ಮ ದೇಶದಲ್ಲಿ ಬೆಲೆ ಏರಿಕೆಗೂ ಕಾರಣವಾಗಿದೆ ಎಂದರು.
ರೈತರಿಗೆ ಅನುಕೂಲವಾಗುವಂತೆ ದೇಶದಲ್ಲಿ ದಾಸ್ತಾನು ಇರುವ ಗೊಬ್ಬರವನ್ನು ಹಳೆ ದರದಲ್ಲಿ ನೀಡಲಾಗುವುದು. ಅಮೆರಿಕ ಮತ್ತು ಯುರೋಪ್ ದೇಶಗಳಲ್ಲಿ ಈಗಾಗಲೇ ಕೃಷಿ ಚಟುವಟಿಕೆಗಳು ಮುಗಿದಿವೆ. ಅಲ್ಲಿ ಬೇಡಿಕೆ ಕಡಿಮೆ ಆಗುವ ನಿರೀಕ್ಷೆ ಇದೆ. ಹೀಗಾಗಿ ಕಡಿಮೆ ದರದಲ್ಲಿ ಸಿಗುವ ಗೊಬ್ಬರ ಆಮದು ಮಾಡಿಕೊಳ್ಳುವ ಬಗ್ಗೆಯೂ ಚರ್ಚಿಸಲಾಗುವುದು ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.