ಕಲಬುರಗಿ: ತಾಲ್ಲೂಕಿನ ಇಟಗಾ(ಕೆ) ಗ್ರಾಮದಲ್ಲಿರುವ ಸಾಧು ಶಿವಲಿಂಗೇಶ್ವರರ 63ನೇ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಡಿ. 8ರಂದು ರಾತ್ರಿ 8ಕ್ಕೆ ನೆರವೇರಲಿದೆ.
ಅದೇ ದಿನ ಬೆಳಿಗ್ಗೆ 6 ಗಂಟೆಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಕಳಸಾರೋಹಣ, ಮಧ್ಯಾಹ್ನ 2.30ಕ್ಕೆ ದೇವಸ್ಥಾನ ಆವರಣದಲ್ಲಿ ಪುರಾಣ ಮಂಗಲ, ಧರ್ಮಸಭೆ ನಡೆಯಲಿದೆ. ಶಾಕಾಪುರದ ವಿಶ್ವಾರಾಧ್ಯ ತಪೋವನದ ಡಾ.ಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪಾಳಾದ ಡಾ.ಗುರುಮೂರ್ತಿ ಶಿವಾಚಾರ್ಯರು ಅಧ್ಯಕ್ಷತೆ ವಹಿಸುವರು. ಓಂಕಾರ ಬೇನೂರಿನ ಮಹಾಲಿಂಗೇಶ್ವರ ಸಂಸ್ಥಾನದ ಸಿದ್ಧರೇಣುಕ ಶಿವಾಚಾರ್ಯರು ನೇತೃತ್ವ ವಹಿಸಲಿದ್ದಾರೆ.
ಸಂಜೆ 6ಕ್ಕೆ ಕಲ್ಯಾಣರಾವ್ ರಾಣೋಜಪ್ಪ ಪೊಲೀಸ್ ಪಾಟೀಲ ಮತ್ತು ಬಸವಂತರಾಯ ಪೊಲೀಸ್ ಪಾಟೀಲ ಅವರಿಂದ ನಂದಿಕೋಲ ಪಲ್ಲಕ್ಕಿ ಬರಮಾಡಿಕೊಳ್ಳುವ ಸಂಪ್ರದಾಯ ನೆರವೇರಲಿದೆ. 7 ಗಂಟೆಗೆ ಗ್ರಾಮದ ಗಣ್ಯವ್ಯಕ್ತಿಗಳ ಮನೆಯಿಂದ ಪಲ್ಲಕ್ಕಿ, ನಂದಿಕೋಲ, ಮಿಣಿ ತರುವ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಸ್ಥಾನದ ಭಕ್ತ ಮಂಡಳಿ ತಿಳಿಸಿದೆ.
ಜಾತ್ರೆಗೆ ಹೋಗುವವರಿಗಾಗಿ ಕಲಬುರಗಿಯ ಸೂಪರ್ ಮಾರ್ಕೆಟ್ನಿಂದ ಇಟಗಾ ಗ್ರಾಮದವರೆಗೆ ಬಸ್ ಸೌಕರ್ಯ ಕಲ್ಪಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.