ಅಫಜಲಪುರ: ಕುಸಿಯುತ್ತಿರುವ ತೊಗರಿ ಬೆಲೆಯಿಂದ ಕಂಗೆಟ್ಟ ರೈತರು ಕಬ್ಬು ಮತ್ತು ಹತ್ತಿಯನ್ನು ಹೆಚ್ಚಿನ ಕ್ಷೇತ್ರಗಳಲ್ಲಿ ಬಿತ್ತನೆ ಮಾಡಲು ಆರಂಭಿಸಿದ್ದಾರೆ. ಹೀಗಾಗಿ ಈ ಬಾರಿ ತೊಗರಿ ಕ್ಷೇತ್ರ ಕಡಿಮೆ ಆಗುವ ಸಂಭವವಿದೆ.
ಕಳೆದ ಎರಡು ವರ್ಷಗಳಿಂದ ಮುಕ್ತ ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಏರಿಕೆಯಾಗದ ಕಾರಣ ಮತ್ತು ಸರ್ಕಾರ ಆರಂಭಿಸಿರುವ ತೊಗರಿ ಖರೀದಿ ಕೇಂದ್ರಗಳಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೇ ಸಕಾಲಕ್ಕೆ ದುಡ್ಡು ಬಾರದ್ದಕ್ಕೆ ರೈತರು ಬೇಸರಗೊಂಡಿದ್ದಾರೆ.
ತಾಲ್ಲೂಕಿನಲ್ಲಿ ಹತ್ತಿ ಖರೀದಿ ಮಾಡುವ ಕಂಪನಿಗಳು ಸಾಕಷ್ಟು ಸ್ಥಾಪನೆಯಾಗಿದ್ದರಿಂದ ರೈತರಿಗೆ ಹತ್ತಿಯನ್ನು ಮಾರಲು ಅನುಕೂಲವಾಗಿದೆ. ಇನ್ನೊಂದೆಡೆ ವಿವಿಧ ನಮೂನೆಯ ಹೈಬ್ರೀಡ್ ಹತ್ತಿ ಬೀಜಗಳು ಮಾರುಕಟ್ಟೆಯಲ್ಲಿ ಬಂದಿರುವುದರಿಂದ ಮತ್ತು ಹತ್ತಿ ಬೆಳೆಗೆ ರೋಗ ಬರದೇ ಇರುವುದರಿಂದ ರೈತರು ಹತ್ತಿ ಬೆಳೆಯಲು ಮುಂದೆ ಬರುತ್ತಿದ್ದಾರೆ.
ತೊಗರಿಗಿಂತಲೂ ಹತ್ತಿ ಬೆಳೆ ಬೇಗನೆ ರೈತರ ಕೈಗೆ ಬರುತ್ತದೆ. ಬಳಿಕ ನೀರಾವರಿಯಲ್ಲಿ ಗೋಧಿ ಬೆಳೆಯಲು ಅನುಕೂಲವಾಗುತ್ತದೆ. ಹೀಗಾಗಿ ರೈತರು ಈ ಬಾರಿ ಹೆಚ್ಚು ಕ್ಷೇತ್ರದಲ್ಲಿ ಹತ್ತಿ ಬೆಳೆಯಲು ಮುಂದಾಗಿದ್ದಾರೆ.
ಅಲ್ಲದೇ ಈ ಬಾರಿ ಮುಂಗಾರು ಅವಧಿಗೂ ಮೊದಲೇ ಅತಿ ಹೆಚ್ಚು ಮಳೆಯಾಗಿದ್ದರಿಂದ ತಾಲ್ಲೂಕಿನಲ್ಲಿ ತೆರೆದ ಬಾವಿ, ಕೊಳವೆ ಬಾವಿಗೆ ಅಂತರ್ಜಲ ಮಟ್ಟ ಅಧಿಕವಾಗುತ್ತಿದೆ. ಅದಕ್ಕಾಗಿ ರೈತರು ಕಬ್ಬು ಬೆಳೆಯಲು ಆರಂಭಿಸಿದ್ದಾರೆ’ ಎನ್ನುತ್ತಾರೆ ಕೃಷಿ ಸಮಾಜದ ತಾಲ್ಲೂಕು ಅಧ್ಯಕ್ಷ ಮಳೆಂದ್ರ ಡಾಂಗೆ.
ತಾಲ್ಲೂಕು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಆನಂದ್ ಅವರಾದ ಮಾಹಿತಿ ನೀಡಿ, ‘ತಾಲ್ಲೂಕಿನಲ್ಲಿ ಮುಂಗಾರು ಬಿತ್ತನೆಗೆ ಹದವಾದ ಮಳೆಯಾಗಿದೆ. ಆದರೆ ರೈತರು ತೊಗರಿ ಬೀಜ ಖರೀದಿ ಮಾಡಲು ನಮ್ಮ ರೈತ ಸಂಪರ್ಕ ಕೇಂದ್ರಕ್ಕೆ ಬರುತ್ತಿಲ್ಲ. ಕಳೆದ ವರ್ಷ ರೈತರು ಸರತಿಯಲ್ಲಿ ನಿಂತು ತೊಗರಿ ಬಿತ್ತನೆ ಬೀಜ ಖರೀದಿ ಮಾಡಿದ್ದರು. ರೈತ ಸಂಪರ್ಕ ಕೇಂದ್ರಗಳಲ್ಲಿ ತೊಗರಿ, ಉದ್ದು, ಹೆಸರು ಮತ್ತು ಸಿರಿಧಾನ್ಯ ಬಿತ್ತನೆ ಬೀಜಗಳು ದೊರಕುತ್ತಿದ್ದು, ರೈತರು ಬಿತ್ತನೆ ಮಾಡುವಾಗ ಕಡ್ಡಾಯವಾಗಿ ಬೀಜೋಪಚಾರ ಮಾಡಬೇಕು’ ಎಂದು ತಿಳಿಸಿದರು.
‘ತಾಲ್ಲೂಕಿನಲ್ಲಿ ಈ ವರ್ಷ 20 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಮಳೆಯಾಗಿದೆ. ಅಂತರ್ಜಲ ಹೆಚ್ಚಿದೆ. ಹೀಗಾಗಿ ಕಬ್ಬು ಬೆಳೆಯಲು ಮುಂದಾಗಿದ್ದೇವೆ. ಜಮಖಂಡಿಯಿಂದ ಪ್ರತಿ ಟನ್ನಿಗೆ 6,000 ದಂತೆ ಬೀಜ ತಂದು ನಾಟಿ ಮಾಡುತ್ತಿದ್ದೇವೆ. ನಾಟಿ ಕೂಲಿ ಎಲ್ಲಾ ಸೇರಿದರೆ ಒಂದು ಎಕರೆಗೆ ₹10 ಸಾವಿರ ಖರ್ಚು ಬರುತ್ತಿದೆ. ಅದಕ್ಕಾಗಿ ಸರ್ಕಾರ ಕಬ್ಬಿನ ಬೆಲೆ ಪ್ರತಿ ಟನ್ಗೆ ₹3 ಸಾವಿರ ಮಾಡಬೇಕು’ ಎಂದು ರೈತ ಮುಖಂಡರಾದ ಲಕ್ಷ್ಮಣ್ ಕಟ್ಟಿಮನಿ ಹಾಗೂ ರಮೇಶ್ ಪಾಟೀಲ್ ಬಳ್ಳೂರಗಿ ತಿಳಿಸಿದರು.
ತಾಲ್ಲೂಕಿನಲ್ಲಿ ಈ ವರ್ಷ ಹದವಾದ ಮಳೆಯಾಗಿದ್ದರಿಂದ ರೈತರು ಲಘು ವಾಣಿಜ್ಯ ಬೆಳೆಗಳನ್ನು ಬೆಳೆಯಬೇಕು. ಇದರಿಂದ ಅನುಕೂಲವಾಗುತ್ತದೆ. ಕೃಷಿ ಇಲಾಖೆಯವರು ಈ ಬಗ್ಗೆ ಮಾಹಿತಿ ನೀಡಬೇಕುಮಳೆಂದ್ರ ಡಾಂಗೆ ಕೃಷಿ ಸಮಾಜದ ತಾಲ್ಲೂಕು ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.