ADVERTISEMENT

ಆಳಂದ: ರೈತ ದಿನಾಚರಣೆ ಹಾಗೂ ಧಾರ್ಮಿಕ ಸಭೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2021, 3:53 IST
Last Updated 24 ಡಿಸೆಂಬರ್ 2021, 3:53 IST
ಆಳಂದ ತಾಲ್ಲೂಕಿನ ತಡಕಲ ಗ್ರಾಮದಲ್ಲಿ ಏರ್ಪಡಿಸಿದ ರೈತ ದಿನಾಚರಣೆ ಸಮಾರಂಭವನ್ನು ಜಿಡಗಾದ ಡಾ.ಮುರುಘರಾಜೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಶಾಸಕ ಸುಭಾಷ ಗುತ್ತೇದಾರ, ರಾಜಶೇಖರ ಸ್ವಾಮಿಜಿ ಇದ್ದರು
ಆಳಂದ ತಾಲ್ಲೂಕಿನ ತಡಕಲ ಗ್ರಾಮದಲ್ಲಿ ಏರ್ಪಡಿಸಿದ ರೈತ ದಿನಾಚರಣೆ ಸಮಾರಂಭವನ್ನು ಜಿಡಗಾದ ಡಾ.ಮುರುಘರಾಜೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಶಾಸಕ ಸುಭಾಷ ಗುತ್ತೇದಾರ, ರಾಜಶೇಖರ ಸ್ವಾಮಿಜಿ ಇದ್ದರು   

ಆಳಂದ: ‘ರಸಾಯನಿಕಯುಕ್ತ ಆಹಾರ ಸೇವನೆ ಹೆಚ್ಚಿದಂತೆ ಮನುಷ್ಯನ ಆಯುಸ್ಸು ಕಡಿಮೆಯಾಗುತ್ತಿದೆ, ಅದಕ್ಕೆ ಸದೃಢ ಆರೋಗ್ಯ ಹೊಂದಲು ಸಿರಿಧಾನ್ಯಗಳ ಸೇವನೆ ಅಗತ್ಯವಾಗಿದೆ’ ಎಂದು ಮೈಸೂರಿನ ಕೃಷಿ ವಿಜ್ಞಾನಿ ಡಾ.ಖಾದರ್ ಅಭಿಮತಪಟ್ಟರು.

ತಾಲ್ಲೂಕಿನ ತಡಕಲ ಗ್ರಾಮದಲ್ಲಿ ಗುರುವಾರ ಸ್ವತಂತ್ರ ಹೋರಾಟಗಾರ ದಿ.ರುಕ್ಮಯ್ಯ ಗುತ್ತೇದಾರ ಅವರ 9ನೇ ಪುಣ್ಯಸ್ಮರಣೆ ನಿಮಿತ್ತ ಏರ್ಪಡಿಸಿದ 'ರೈತ ದಿನಾಚರಣೆ ಹಾಗೂ ಧಾರ್ಮಿಕ ಸಭೆ'ಯಲ್ಲಿ ದೇಶಿ ಆಹಾರ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.

ನಮ್ಮ ಸುತ್ತಲಿನ ವಾತಾವರಣದಷ್ಟೆ ನಮ್ಮ ಆಹಾರ ಸೇವನೆ ಕುರಿತು ಎಚ್ಚರವಹಿಸಬೇಕಿದೆ, ಜಗತ್ತು ಭಯಾನಕ ರೋಗಗಳ ತಾಣವಾಗುತ್ತಿದೆ. ಇಂತಹ ವಿಷಮಸ್ಥಿತಿಯಲ್ಲಿ ದೇಶಿ ಆಹಾರ ಧಾನ್ಯಗಳು ಬೆಳೆದು ಬಳಕೆ ಮಾಡಲು ತಿಳಿಸಿದರು.

ADVERTISEMENT

ಜಾಗತೀಕರಣದ ಪ್ರಭಾವದಿಂದ ನಮ್ಮ ಜೀವನಶೈಲಿಯಲ್ಲಿ ಬದಲಾವಣೆಯಾಗಿವೆ. ಕೃಷಿ ಕ್ಷೇತ್ರದಲ್ಲಿ ಆಗುವ ಪ್ರಗತಿಯು ರೈತರ ಹಕ್ಕು ಕಸಿದುಕೊಳ್ಳದಂತೆ ನಡೆಯಬೇಕಿದೆ. ಅದಕ್ಕೆ ರೈತರು ದೇಶಿತಳಿ ಧಾನ್ಯ, ಬೆಳೆಯುವಲ್ಲಿ ಸ್ವಾವಲಂಬನೆ ಸಾಧಿಸಲು ಕರೆ ನೀಡಿದರು.

ಜಿಡಗಾ-ಮುಗಳಕೋಡದ ಪೀಠಾಧಿಪತಿ ಡಾ.ಮುರುಘರಾಜೇಂದ್ರ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ‘ಜಿಡಗಾದ ಲಿಂ.ಸಿದ್ದರಾಮ ಶಿವಯೋಗಿಗಳು ಹಾಗೂ ರುಕ್ಕಯ್ಯ ಗುತ್ತೇದಾರ ನಡುವೆ ಆತ್ಮೀಯ ಸಂಬಂಧವಿತ್ತು, ಕಾಯಕ, ರಾಜಕಾರಣ ಜೊತೆಗೆ ಗುತ್ತೇದಾರ ಕುಟುಂಬ ನಿರಂತರವಾಗಿ ಸೇವಾ ಕಾರ್ಯ ಕೈಗೊಂಡು ಜನರ ಜತೆ ಇದ್ದಾರೆ’ ಎಂದರು.

ಶಾಸಕ ಸುಭಾಷ ಗುತ್ತೇದಾರ ಮಾತನಾಡಿ ದಿ.ರುಕ್ಮಯ್ಯ ಗುತ್ತೇದಾರ ಹಾಗೂ ಎಲ್ಲ ಗುರುಹಿರಿಯರ ಮಾರ್ಗದರ್ಶನದಲ್ಲಿ ತಾಲ್ಲೂಕಿನ ಅಭಿವೃದ್ಧಿ ಕೈಗೊಳ್ಳುವ ಅವಕಾಶ ಸದುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದರು.

ನಂದಗಾಂವನ ರಾಜಶೇಖರ ಸ್ವಾಮೀಜಿ, ಕಡಗಂಚಿಯ ವೀರಭದ್ರ ಸ್ವಾಮೀಜಿ, ಮಾಡಿಯಾಳದ ಮರುಳಸಿದ್ದ ಸ್ವಾಮೀಜಿ, ಖಜೂರಿಯ ಮುರುಘೇಂದ್ರ ಸ್ವಾಮೀಜಿ, ಮಾದನ ಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಚಿನ್ಮಯಗಿರಿಯ ವೀರಮಹಾಂತ ಸ್ವಾಮೀಜಿ, ಕೇಸರ ಜವಳಗಾದ ವೀರೇಂತೇಶ್ವರ ಸ್ವಾಮೀಜಿ, ಬಂಗರಗಾದ ಗುರುಲಿಂಗ ಸ್ವಾಮೀಜಿ, ಕಿಣಿಸುಲ್ತಾನದ ಶಿವಶಾಂತಲಿಂಗ ಸ್ವಾಮೀಜಿ, ಸಿದ್ದಮಲ್ಲ ಸ್ವಾಮೀಜಿ ಹಾಗೂ ಮಾಜಿ ಸಚಿವ ರೇವೂ ನಾಯಕ ಬೆಳಮಗಿ, ಜಿ. ಪಂ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ, ಕೆಎಂಎಫ್ ನಿರ್ದೇಶಕ ಸಂತೋಷ ಗುತ್ತೇದಾರ, ವೀರಣ್ಣಾ ಮಂಗಾಣೆ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ, ಆನಂದ ಪಾಟೀಲ, ಮುಖಂಡರಾದ ಮಲ್ಲಣ್ಣಾ ನಾಗೂರೆ, ಮಲ್ಲಿಕಾರ್ಜುನ ಕಂದಗೋಳೆ, ತಹಶೀಲ್ದಾರ್ ಯಲ್ಲಪ್ಪ ಸುಬೇದಾರ, ಸಿಪಿಐ ಮಂಜುನಾಥ ಇದ್ದರು.

6 ಜನ ಪ್ರಗತಿಪರ ರೈತರಿಗೆ ಸನ್ಮಾನಿಸಲಾಯಿತು. ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ₹11 ಸಾವಿರ ಬಹುಮಾನ ನೀಡಿ ಗೌರವಿಸಲಾಯಿತು. ಮಲ್ಲಯ್ಯ ಶಾಸ್ತ್ರಿ, ಗೌಡಗಾಂವನ ಶಿವರುದ್ರಯ್ಯ ಸ್ವಾಮಿ, ಶಿವಶರಣ ಪೂಜಾರಿ ಅವರಿಂದ ವಿವಿಧ ರೈತಗೀತೆ ,ಭಕ್ತಿಗೀತೆಗಳ ಗಾಯನ ಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.