ADVERTISEMENT

ಅಫಜಲಪುರ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಮಳೆ, ಪ್ರವಾಹದಿಂದ 1.50 ಲಕ್ಷ ಹೆಕ್ಟೇರ್ ಬೆಳೆ ನಾಶ

ಶಿವಾನಂದ ಹಸರಗುಂಡಗಿ
Published 26 ನವೆಂಬರ್ 2020, 5:04 IST
Last Updated 26 ನವೆಂಬರ್ 2020, 5:04 IST
ಎಂ.ವೈ.ಪಾಟೀಲ ಶಾಸಕರು
ಎಂ.ವೈ.ಪಾಟೀಲ ಶಾಸಕರು   

ಅಫಜಲಪುರ: ತಾಲ್ಲೂಕಿನ ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿ ಅನುಭವಿಸಿದ ರೈತರಿಗೆ ಇನ್ನೂ ಸರ್ಕಾರಿದಂದ ಪರಿಹಾರ ತಲುಪಿಲ್ಲ.

ತಾಲ್ಲೂಕಿನಲ್ಲಿ 1.50 ಲಕ್ಷ ಎಕರೆ ಬೆಳೆನಾಶವಾಗಿದೆ ಮತ್ತು 3,329 ಕುಟುಂಬಗಳ ಮನೆಗಳಿಗೆ ಹಾನಿಯಾಗಿದೆ. ಇನ್ನೂ ಕೆಲವು ಕಡೆ ರೈತರ ಜಮೀನು ಕಿತ್ತುಕೊಂಡು ಹೋಗಿದೆ. ತಾಲ್ಲೂಕು ಆಡಳಿತ ₹ 56 ಕೋಟಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ. ಆದರೆ ಪರಿಹಾರ ಇದುವರೆಗೂ ಬಿಡುಗಡೆಯಾಗಿಲ್ಲ.

ಜುಲೈನಿಂದ ಅಕ್ಟೋಬರ್ ವರೆಗೆ ತಾಲ್ಲೂಕಿನಲ್ಲಿ ಮಳೆ ಹಾಗೂ ಭೀಮಾ ಪ್ರವಾಹದಿಂದ 22,925 ಹೆಕ್ಟೇರ್ ತೊಗರಿ,13,220 ಹೆಕ್ಟೇರ್ ಹತ್ತಿ, 8,040 ಹೆಕ್ಟೇರ್ ಕಬ್ಬು ಮತ್ತು 44,269 ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶವಾಗಿದೆ. ರೈತರು ಬೆಳೆ ಪರಿಹಾರಕ್ಕಾಗಿ ಕಾದು ಬೇಸತ್ತು ಕೊನೆಗೆ ಸಾಲ ಮಾಡಿ ಹಿಂಗಾರು ಬೆಳೆ ಬಿತ್ತನೆ ಮಾಡಿದ್ದಾರೆ.

ADVERTISEMENT

ಮುಂಗಾರು ಬೆಳೆಗಳಾದ ಸೂರ್ಯಕಾಂತಿ, ಶೇಂಗಾ, ಉದ್ದು, ಮೆಕ್ಕೆಜೋಳ ಬೆಳೆಗಳು ಸಹ ಮಳೆಯಿಂದ ಹಾಳಾಗಿದ್ದು, ಇಳುವರಿ ಕಡಿಮೆಯಾಗಿದೆ ಎನ್ನುತ್ತಾರೆ ರೈತ ಮುಖಂಡರಾದ ಚಂದ್ರಶೇಖರ ಕರಜಗಿ, ಬಡದಾಳ ವ್ಯವಸಾಯ ಸಹಕಾರ ಸಂಘದ ಸದಸ್ಯರಾದ ರಮೇಶ ಪಾಟೀಲ ಬಳೂರ್ಗಿ.

ಬೆಳೆಹಾನಿ ಕುರಿತು ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಗಡಗಿಮನಿ ಮಾಹಿತಿ ನೀಡಿ, ಬೆಳೆ ಹಾನಿ ಬಗ್ಗೆ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಕಳುಹಿಸಿದ್ದೇವೆ. ಇನ್ನೂ ವರದಿ ಬಂದಿಲ್ಲಾ. ಕಂದಾಯ ಇಲಾಖೆ ಮುಖಾಂತರವೇ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಾರೆ. ಅಲ್ಲದೇ ಅತಿಯಾದ ಮಳೆ ಮತ್ತು ಭೀಮಾ ಪ್ರವಾಹದಿಂದ ಸಾವಿರಾರು ಎಕರೆ ಭೂಮಿಯ ಫಲವತ್ತತೆ ನಾಶವಾಗಿದೆ ಎಂದು ಅವರು ತಿಳಿಸಿದರು.

ಪರಿಹಾರ ನೀಡಿ: ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ರೈತರಿಗೆ ಬೆಳೆ ಪರಿಹಾರ ನೀಡಬೇಕು ಎಂದು ಸಿದ್ದರಾಮ ದಣ್ಣೂರ ಗುಡ್ಡೇವಾಡಿ ಒತ್ತಾಯಿಸಿದ್ದಾರೆ.

ಬೆಳೆ ಹಾನಿ ಸಮೀಕ್ಷೆ ಮಾಡಿ ತಿಂಗಳು ಕಳೆಯುತ್ತಾ ಬಂದರೂ ಇನ್ನೂ ಪರಿಹಾರ ಬಂದಿಲ್ಲ. ಮಳೆ ಕಳೆದುಕೊಂಡವರಿಗೆ ₹ 10 ಸಾವಿರ ಪರಿಹಾರ ನೀಡಲಾಗಿದೆ. ಅದು ಸಹ ಅನೇಕರಿಗೆ ತಲುಪಿಲ್ಲ. ಪ್ರವಾಹಕ್ಕೆ ಹಾಳಾಗಿರುವ ವಿದ್ಯುತ್ ಕಂಬಗಳ ಜೋಡಣೆ ಕಾರ್ಯ ತೀವ್ರಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

* ರಾಜ್ಯ ಸರ್ಕಾರ ವಾರದಲ್ಲಿ ಬೆಳೆ ಪರಿಹಾರ ಬಿಡುಗಡೆ ಮಾಡಬೇಕು. ರೈತರು ಕಷ್ಟದಲ್ಲಿದ್ದಾರೆ, ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಪರಿಹಾರ ಜಮಾ ಆಗುವ ವ್ಯವಸ್ಥೆ ಮಾಡಬೇಕು.
– ಎಂ.ವೈ.ಪಾಟೀಲ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.