ಕಲಬುರ್ಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸ್ಥಾಪನೆಯಾದ ಏಳು ವರ್ಷಗಳ ಅವಧಿಯಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಕಾರ್ಯಗಳಿಗೆ ₹ 5,279 ಕೋಟಿ ಅನುದಾನ ವೆಚ್ಚವಾಗಿದ್ದು, ಶೇ 100ರಷ್ಟು ಪ್ರಗತಿ ಸಾಧಿಸಲಾಗಿದೆ. ಕೋವಿಡ್ ಕಡಿಮೆಯಾಗಿರುವುದರಿಂದ ಇನ್ನಷ್ಟು ಕಾರ್ಯಗಳು ಮುಂದುವರಿಯಲಿವೆ ಎಂದು ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಭರವಸೆ ನೀಡಿದರು.
ಗಣರಾಜ್ಯೋತ್ಸವದ ಅಂಗವಾಗಿ ಇಲ್ಲಿನ ಡಿಎಆರ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಜಿಲ್ಲೆಯಲ್ಲಿ ಕೈಗೊಂಡ ವಿವಿಧ ಕಾರ್ಯಗಳನ್ನು ಪ್ರಸ್ತಾಪಿಸಿದರು.
2013–14ನೇ ಸಾಲಿನಿಂದ ಡಿಸೆಂಬರ್–2020ರ ಅಂತ್ಯಕ್ಕೆ ಒಟ್ಟು 21,203 ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ. ಈ ಪೈಕಿ 18,466 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. 2020–21ನೇ ಸಾಲಿನಲ್ಲಿ ಸರ್ಕಾರವು ಮಂಡಳಿಗೆ ₹ 1,132 ಕೋಟಿ ಅನುದಾನ ನಿಗದಿಪಡಿಸಿ, ಇದೇ ಜನವರಿ 2ರಂದು ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿಗೆ ನೀಡುವ ಕೋವಿಡ್ ಲಸಿಕೆ ಕಾರ್ಯ ಮುಂದುವರಿದಿದೆ. ಜನವರಿ 16ರಿಂದ 25ರವರೆಗೆ ತಾಲ್ಲೂಕು ಆಸ್ಪತ್ರೆಗಳು ಸೇರಿ 108 ಕೇಂದ್ರಗಳಲ್ಲಿ 9,489 ಆರೋಗ್ಯ ಸಿಬ್ಬಂದಿ ಪೈಕಿ 5,350 ಫಲಾನುಭವಿಗಳಿಗೆ ಕೋವಿಡ್ ಲಸಿಕೆ ಹಾಕುವ ಮೂಲಕ ಶೇ 56ರಷ್ಟು ಗುರಿ ಸಾಧಿಸಲಾಗಿದೆ ಎಂದರು.
ಪೆರೇಡ್ ಕಮಾಂಡರ್ ಆರ್.ಪಿ.ಐ. ಡಿ.ಎ.ಆರ್. ಹನುಮಂತ ನಾಯಕ ಹಾಗೂ ಸಹಾಯಕ ಪೆರೇಡ್ ಕಮಾಂಡರ್ ಆರ್.ಎಸ್.ಐ., ಕೆ.ಎಸ್.ಆರ್.ಪಿ. ನಾಗೇಂದ್ರ ಕುಂಬಾರ ನೇತೃತ್ವದ ತುಕಡಿಗಳಿಂದ ಸಚಿವರು ಪೆರೇಡ್ ಗೌರವ ವಂದನೆ ಸ್ವೀಕರಿಸಿದರು.
ಸ್ವಾತಂತ್ರ್ಯ ಹೋರಾಟಗಾರರಾದ ವಿಠ್ಠಲ ಬೀರಣ್ಣ ಪೂಜಾರಿ, ವಿಜಯಕುಮಾರ ಪ್ರಭುರಾವ್ ತಡಕಲ್, ಶಂಕರೆಪ್ಪ ರಾಮಶೆಟ್ಟಪ್ಪ ಹುಗ್ಗಿ, ಶಿವಲಿಂಗಪ್ಪ ಬಸಲಿಂಗಪ್ಪ ಪಾಟೀಲ ಹಾಗೂ ವೆಂಕಟರಾವ ಅರ್ಜುನ ಶಿಂಧೆ ಅವರನ್ನು ಸನ್ಮಾನಿಸಲಾಯಿತು.
ಪತ್ರಕರ್ತರಾದ ಜಯತೀರ್ಥ ಪಾಟೀಲ, ಸಂಜಯ ಚಿಕ್ಕಮಠ, ಕ್ಯಾಮರಾಮನ್ ವಿಜಯಕುಮಾರ ಗಾಜರೆ ಹಾಗೂ ಛಾಯಾಗ್ರಾಹಕ ಅರುಣಕುಮಾರ ಕುಲಕರ್ಣಿ ಅವರನ್ನು ಮಾಧ್ಯಮ ಕ್ಷೇತ್ರದಲ್ಲಿನ ಸೇವೆಗಾಗಿ ಸನ್ಮಾನಿಸಲಾಯಿತು.
ಆಯುಷ್ಮಾನ್ ಭಾರತ–ಆರೋಗ್ಯ ಕರ್ನಾಟಕ ಯೋಜನೆಯಡಿ ಅತ್ಯುತ್ತಮ ಸೇವೆ ಸಲ್ಲಿಸಿದ ವೈದ್ಯಾಧಿಕಾರಿಗಳಾದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಅಂಬಾರಾಯ ರುದ್ರವಾಡಿ, ಡಾ. ರವೀಂದ್ರ ಪಾಟೀಲ, ಡಾ. ಗುರುರಾಜ ದೊಡ್ಡಮನಿ, ಡಾ. ಗೀತಾ ಪಾಟೀಲ, ಡಾ. ಚಂದ್ರಕಾಂತ ನರಬೋಳಿ, ರೇವಣ್ಣ ಸಿದ್ದಪ್ಪ ಬೋಸಗಿ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೂರು ವಿದ್ಯಾರ್ಥಿಗಳಿಗೆ ತಲಾ ₹ 1 ಲಕ್ಷದ ಚೆಕ್ ವಿತರಿಸಲಾಯಿತು.
ಜಿ.ಪಂ ಅಧ್ಯಕ್ಷೆ ಸುವರ್ಣಾ ಮಲಾಜಿ, ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರ, ಸಂಸದ ಡಾ. ಉಮೇಶ ಜಾಧವ, ಶಾಸಕರಾದ ಬಸವರಾಜ ಮತ್ತಿಮೂಡ, ಸುನೀಲ್ ವಲ್ಲ್ಯಾಪುರೆ, ಶಶೀಲ ನಮೋಶಿ, ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಚಂದು ಪಾಟೀಲ, ಜಿ.ಪಂ. ಉಪಾಧ್ಯಕ್ಷೆ ಶೋಭಾ ಸಿರಸಗಿ, ಪ್ರಾದೇಶಿಕ ಆಯುಕ್ತ ಡಾ. ಎನ್.ವಿ. ಪ್ರಸಾದ, ಐಜಿಪಿ ಮನೀಷ್ ಖರ್ಬಿಕರ್ ಇದ್ದರು.
ಸಾಂಸ್ಕೃತಿಕ ಕಾರ್ಯಕ್ರಮ ಇಲ್ಲದೇ ಕಳಾಹೀನ
ಪ್ರತಿವರ್ಷ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನಗರದ ವಿವಿಧ ಶಾಲೆಗಳ ಮಕ್ಕಳಿದ ದೇಶಭಕ್ತಿ, ಸ್ವಾತಂತ್ರ್ಯ ಹೋರಾಟಗಾರರ ಶೌರ್ಯವನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ ಇರುತ್ತಿತ್ತು. ಆದರೆ ಈ ಬಾರಿ ಕೊರೊನಾ ಹಾವಳಿಯಿಂದಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನೇ ರದ್ದುಗೊಳಿಸಲಾಗಿತ್ತು. ಇದರಿಂದ ಗಣರಾಜ್ಯೋತ್ಸವ ಭಾಷಣ, ಪೆರೇಡ್ಗಷ್ಟೇ ಸೀಮಿತವಾಗುವ ಮೂಲಕ ತನ್ನ ಎಂದಿನ ಕಳೆಯನ್ನು ಕಳೆದುಕೊಂಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.