ADVERTISEMENT

ಜೇವರ್ಗಿ | ಕಟ್ಟಿಸಂಗಾವಿಯ ಎರಡೂ ಸೇತುವೆಗಳು ಜಲಾವೃತ

ಬೀದರ-ಬೆಂಗಳೂರು ಹೆದ್ದಾರಿ ಬಂದ್ - ರಾತ್ರಿಯಿಡಿ ರಸ್ತೆ ಮೇಲೆ ಮಲಗಿದ ಚಾಲಕರು

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 3:06 IST
Last Updated 29 ಸೆಪ್ಟೆಂಬರ್ 2025, 3:06 IST
ಜೇವರ್ಗಿ ತಾಲ್ಲೂಕಿನ ಕಟ್ಟಿಸಂಗಾವಿ ಬಳಿ ಹೊಸ ಸೇತುವೆ ಜಲಾವೃತಗೊಂಡಿರುವುದು.
ಜೇವರ್ಗಿ ತಾಲ್ಲೂಕಿನ ಕಟ್ಟಿಸಂಗಾವಿ ಬಳಿ ಹೊಸ ಸೇತುವೆ ಜಲಾವೃತಗೊಂಡಿರುವುದು.   

ಜೇವರ್ಗಿ: ತಾಲ್ಲೂಕಿನ ಕಟ್ಟಿಸಂಗಾವಿ ಹತ್ತಿರದ ಬೀದರ್-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲಿರುವ ಹೊಸ ಸೇತುವೆ ಭೀಮಾನದಿಯ ಪ್ರವಾಹದಿಂದ ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಗಿದೆ.

ಶನಿವಾರ ಹಳೆಯ ಸೇತುವೆ ಮೇಲೆ ನೀರು ಬಂದ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಎರಡೂ ಸೇತುವೆ ಮೇಲೆ ವಾಹನ ಸಂಚಾರಕ್ಕೆ ನಿಷೇಧ ಹೇರಿದ್ದರು. ಸಂಜೆಯಾದರೂ ನೀರಿನ ಪ್ರಮಾಣ ಕಡಿಮೆಯಾಗದೇ ಇದ್ದಾಗ ಜನ ಸಂಚಾರಕ್ಕೂ‌‌ ನಿರ್ಬಂಧ ಹೇರಲಾಯಿತು. ಇದರಿಂದ 5 ಕಿ.ಮೀ ವರೆಗೆ ಸಾಲುಗಟ್ಟಿ ನಿಂತಿರುವ ವಾಹನ ಸವಾರರು ಕುಡಿಯಲು ನೀರು, ಊಟ, ಉಪಹಾರವಿಲ್ಲದೇ ಸಾಕಷ್ಟು ತೊಂದರೆ ಅನುಭವಿಸಿದರು.

ಪೊಲೀಸರು ರೇವನೂರ ಕ್ರಾಸ್‌ನಿಂದ  ಶನಿವಾರ ಜನಿವಾರ, ಕೂಡಿ ದರ್ಗಾ, ಕೋನಾಹಿಪ್ಪರಗಾ ಮಾರ್ಗವಾಗಿ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಿದ್ದರು. ಆದರೆ ಲಾರಿಯೊಂದು ಗೌನಳ್ಳಿ ಕ್ರಾಸ್ ಹತ್ತಿರ ಕೆಸರಲ್ಲಿ ಸಿಲುಕಿಕೊಂಡ ಪರಿಣಾಮ 10 ಕಿ.ಮೀ ವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಭಾನುವಾರ ಈ ರಸ್ತೆ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಯಿತು.

ADVERTISEMENT

ಕಟ್ಟಿಸಂಗಾವಿ ಹತ್ತಿರ ಭೀಕರ ಪ್ರವಾಹದಿಂದ ಜಾಕ್‌ವೆಲ್ ಪಂಪ್ ಹೌಸ್ ಮುಳುಗಿರುವ ಪರಿಣಾಮ ಜೇವರ್ಗಿ ಪಟ್ಟಣಕ್ಕೆ ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಸೇತುವೆ ಪಕ್ಕದ ದೇವಸ್ಥಾನಗಳು, ಶಾಲೆ ಮುಳುಗಡೆಯಾಗಿದೆ.

ಕಟ್ಟಿಸಂಗಾವಿ ಗ್ರಾಮ ಸುತ್ತಲೂ ಪ್ರವಾಹ ಸುತ್ತುವರೆದು ನಡುಗಡ್ಡೆಯಾದಂತಾಗಿದೆ. ಕಟ್ಟಿಸಂಗಾವಿಯ ಎರಡೂ ಸೇತುವೆಗಳು ಮುಳುಗಿರುವ ಸುದ್ದಿ ಕೇಳಿ ಪಟ್ಟಣದ ಜನತೆ ತಮ್ಮ ಸ್ವಂತ ವಾಹನಗಳಲ್ಲಿ ಕುಟುಂಬ ಸಮೇತರಾಗಿ ತೆರಳಿ ಧುಮ್ಮಿಕ್ಕಿ ಹರಿಯುತ್ತಿರುವ ನೀರನ್ನು ನೋಡಿ ಸಂಭ್ರಮಿಸುತ್ತಿದ್ದಾರೆ. ಪ್ರವಾಹದಿಂದ ಸಂಪರ್ಕ ಕಡಿತಗೊಂಡು ವಾಹನ ಸವಾರರು, ವಿದ್ಯಾರ್ಥಿಗಳು, ಜಿಲ್ಲಾಸ್ಪತ್ರೆಗೆ ತೆರಳುವ ಜನ ಪರದಾಡಿದರು.

ತಾಲ್ಲೂಕಿನ ಹರವಾಳ, ಮಾಹೂರ, ಬಳ್ಳುಂಡಗಿ, ಹೊನ್ನಾಳ, ಹೋತಿನಮಡು, ರಾಂಪೂರ, ಹಂದನೂರ, ರಾಸಣಗಿ ಸೇರಿದಂತೆ ಹಲವಾರು ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿದ್ದು ಜನಜೀವನ ಕಷ್ಟಕರವಾಗಿದೆ. ಪ್ರವಾಹ ಕಡಿಮೆಯಾಗಬಹುದು ಅಂದುಕೊಂಡು ಗ್ರಾಮದಲ್ಲಿಯೇ ಉಳಿದ ಜನರನ್ನು ತಾಲ್ಲೂಕು ಆಡಳಿತ ಒತ್ತಾಯ ಪೂರ್ವಕವಾಗಿ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಿದೆ. ಆದರೆ, ಊಟ, ಉಪಹಾರ ಬಿಟ್ಟು ಬೇರೆ ಯಾವುದೇ ಸೌಲಭ್ಯ ನಿಡದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಭೀಮಾನದಿಯ ಪ್ರವಾಹದಿಂದ ಕಟ್ಟಿಸಂಗಾವಿ ಗ್ರಾಮಕ್ಕೆ ತೆರಳುವ ದಾರಿ, ಕಟ್ಟಿಸಂಗಾವಿ ಗ್ರಾಮದಿಂದ ಮದರಿ ಗ್ರಾಮಕ್ಕೆ ತೆರಳುವ ರಸ್ತೆ, ಮದರಿ ಗ್ರಾಮ ದಿಂದ ಯನಗುಂಟಿ ಹೋಗುವ ರಸ್ತೆ, ನೆಲೋಗಿಯಿಂದ ಕಲ್ಲೂರ.ಕೆ, ಹೊನ್ನಾಳ ಗ್ರಾಮದಿಂದ ಬಿರಾಳ, ಬಳ್ಳುಂಡಗಿ ಯಿಂದ ಕಲ್ಲೂರ.ಕೆ, ಮತ್ತು ಬಿಲ್ಲಾಡ, ಮಾಹೂರ.ಕೆ ಯಿಂದ ಮಾಹೂರ.ಬಿ ಗ್ರಾಮಕ್ಕೆ ತೆರಳುವ ರಸ್ತೆಗಳ ಸಂಪರ್ಕ ಕಡಿತಗೊಂಡಿದೆ.

ಉಪಹಾರ-ಹಣ್ಣು ವಿತರಣೆ: ಕಟ್ಟಿಸಂಗಾವಿ ಹತ್ತಿರ ಐದಾರು ಕಿ.ಮಿ ವರೆಗೆ ಹೆದ್ದಾರಿ ಮೇಲೆ ನಿಂತಿರುವ ಲಾರಿ ಚಾಲಕರಿಗೆ ಹಾಗೂ ಕ್ಲೀನರ್‌ಗಳಿಗೆ ಟಿಪ್ಪು ಸುಲ್ತಾನ್ ಕಮಿಟಿ ಅಧ್ಯಕ್ಷ ಮೋಹಿಯುದ್ದೀನ್ ಇನಾಮದಾರ ನೇತೃತ್ವದಲ್ಲಿ ಯುವಕರು ಪಲಾವ ಪಾಕೇಟ್, ಹಣ್ಣು, ನೀರಿನ ಬಾಟಲ್‌ಗಳನ್ನು ವಿತರಣೆ ಮಾಡಿದರು.

ಐದಾರು ಕಿ.ಮೀ ಹೆದ್ದಾರಿ ಮೇಲೆ ಸಾಲುಗಟ್ಟಿ ನಿಂತಿರುವ ಲಾರಿಗಳು
ಕಟ್ಟಿಸಂಗಾವಿ ಪ್ರಭು ಬಸಯ್ಯ ತಾತನವರ ದೇವಸ್ಥಾನ ಮುಳುಗಡೆಯಾಗಿರುವುದು.
ಕೋಬಾಳ ಗ್ರಾಮದ ಸರಕಾರಿ ಶಾಲೆ ಜಲಾವೃತಗೊಂಡಿರುವುದು.
ಟಿಪ್ಪು ಸುಲ್ತಾನ್ ಕಮಿಟಿ ಯುವಕರು ಲಾರಿ ಚಾಲಕರಿಗೆ ಪಲಾವ ಹಣ್ಣು ನೀರಿನ ಬಾಟಲ್ ವಿತರಣೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.