ADVERTISEMENT

ಕಲಬುರಗಿ: ‘ಫುಟ್‌ಪಾತ್’ ವ್ಯಾಪಾರದ ರಹದಾರಿ

ಮಲ್ಲಿಕಾರ್ಜುನ ನಾಲವಾರ
Published 1 ಡಿಸೆಂಬರ್ 2022, 4:24 IST
Last Updated 1 ಡಿಸೆಂಬರ್ 2022, 4:24 IST
ಕಲಬುರಗಿ ನಗರದ ಸಾರ್ವಜನಿಕ ಉದ್ಯಾನ ಮುಂಭಾಗದ ಪಾದಚಾರಿ ಮಾರ್ಗದ ಅವ್ಯವಸ್ಥೆ, ದ್ವಿಚಕ್ರ ವಾಹನಗಳ ನಿಲುಗಡೆ
ಕಲಬುರಗಿ ನಗರದ ಸಾರ್ವಜನಿಕ ಉದ್ಯಾನ ಮುಂಭಾಗದ ಪಾದಚಾರಿ ಮಾರ್ಗದ ಅವ್ಯವಸ್ಥೆ, ದ್ವಿಚಕ್ರ ವಾಹನಗಳ ನಿಲುಗಡೆ   

ಕಲಬುರಗಿ: ನಗರದ ಜನನಿಬಿಡ ರಸ್ತೆಗಳ ಬದಿಯ ಫುಟ್‌ಪಾತ್‌ಗಳು (ಪಾದಚಾರಿ ಮಾರ್ಗಗಳು) ವ್ಯಾಪಾರದ ಕೇಂದ್ರ ಮತ್ತು ವಾಹನ ನಿಲ್ದಾಣಗಳ ತಾಣಗಳಾಗಿ ಮಾರ್ಪಟ್ಟಿವೆ. ಇದು ಪಾದಚಾರಿಗಳ ಸುಗಮ ಓಡಾಟ ಮತ್ತು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.

ನಗರದ ವೇಗಕ್ಕೆ ಅನುಸಾರ ಸುಧಾರಿಸಬೇಕಿದ್ದ ಪಾದಚಾರಿ ಮಾರ್ಗಗಳು ಅವ್ಯವಸ್ಥೆಯ ಕೂಪಗಳು ಆಗಿವೆ.

ಇದರೆ ನಡುವೇ ರಸ್ತೆ ಬದಿಯ ಮಳಿಗೆಗಳು, ಬೀದಿ ಬದಿ ವ್ಯಾಪಾರಿಗಳು, ತಳ್ಳು ಗಾಡಿಗಳ ವರ್ತಕರು ಪಾದಚಾರಿ ಮಾರ್ಗಗಳಲ್ಲಿ ನಿಯಮಬಾಹಿರಗವಾಗಿ ವ್ಯಾಪಾರ ನಡೆಸಿದ್ದಾರೆ. ಇದಕ್ಕೆ ಪೂರ್ಣಪ್ರಮಾಣದ ಕಡಿವಾಣ ಬಿದ್ದಿಲ್ಲ.

ADVERTISEMENT

ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಿಂದ ಸಾಗುವ ಕೇಂದ್ರ ಬಸ್ ನಿಲ್ದಾಣ ಮಾರ್ಗ, ಸೂಪರ್ ಮಾರ್ಕೆಟ್‌ ಹಾಗೂ ಲಾಲಗೇರಿ ಕ್ರಾಸ್‌ ರಸ್ತೆಯು ವಾಹನ ಹಾಗೂ ಜನ
ದಟ್ಟಣೆಯ ಪ್ರಮುಖ ಮಾರ್ಗಗಳು. ಈ ರಸ್ತೆಗಳ ಬಹುತೇಕ ಪಾದಚಾರಿ ಮಾರ್ಗ ಒತ್ತುವರಿಯಾಗಿವೆ. ಭರ್ಜ
ರಿಯಾಗಿ ವ್ಯಾಪಾರ ನಡೆಯುತ್ತಿದೆ. ಅಲ್ಲಲ್ಲಿ ಪಾದಚಾರಿ ಮಾರ್ಗ ಹಾಳಾಗಿವೆ.

‘ಸಾರ್ವಜನಿಕರ ಓಡಾಟಕ್ಕೆ ಮೀಸಲಿರುವ ಪಾದಚಾರಿ ಮಾರ್ಗದಲ್ಲಿ ಹಣ್ಣು, ತರಕಾರಿ, ಪಾದರಕ್ಷೆ, ಎಲೆಕ್ಟ್ರಾನಿಕ್ ಉಪಕರಣಗಳ ಮಾರಾಟ ನಿರಾತಂಕವಾಗಿ ನಡೆದಿದೆ. ಕೆಲ ಮಳಿಗೆ, ಹೋಟೆಲ್‌ಗಳ ಮಾಲೀಕರು ತಮ್ಮ ಅಂಗಡಿಗಳ ನಾಮಫಲಕ, ಲಭ್ಯ ವಸ್ತುಗಳ ಬಿಲ್‌ ಬೋರ್ಡ್ ತಂದು ಇರಿಸಿದ್ದಾರೆ. ಇದರಿಂದ ಫುಟ್‌ಪಾತ್ ಬಿಟ್ಟು ರಸ್ತೆ ಪಕ್ಕದಲ್ಲಿ ಓಡಾಡುವ ಪರಿಸ್ಥಿತಿಯಿದೆ. ಇದು ವಾಹನ ಚಾಲಕರು ಹಾಗೂ ಪಾದಚಾರಿಗಳ ನಡುವೆ ಜಗಳಕ್ಕೆ ಹಾದಿ ಮಾಡಿಕೊಡುತ್ತಿದೆ’ ಎನ್ನುತ್ತಾರೆ ನಗರದ ನಿವಾಸಿ ವೀರೇಂದ್ರ ಬಿರಾದಾರ.

ಎಸ್‌ವಿಪಿ ವೃತ್ತದಿಂದ ಮಾರ್ಕೆಟ್ ರಸ್ತೆ, ಕೇಂದ್ರ ಬಸ್ ನಿಲ್ದಾಣ, ಶರಣಬಸವೇಶ್ವರ ದೇವಸ್ಥಾನ ರಸ್ತೆ,ಮಾರ್ಕೆಟ್‌ನಿಂದ ಹುಮ
ನಾಬಾದ್ ರಸ್ತೆ, ಲಾಲಗೇರಿ ಕ್ರಾಸ್‌ನಿಂದ ಶಹಾಬಜಾರ್ ನಾಕಾ– ಆಳಂದ ಚೆಕ್‌ಪೋಸ್ಟ್, ಹಳೆ ಜೇವರ್ಗಿ ಸೇರಿದಂತೆ ಹಲವು ಭಾಗದಲ್ಲಿಯೂ ಸರಿಯಾದ ಪಾದಚಾರಿ ಮಾರ್ಗಗಳೇ ಇಲ್ಲ. ರಸ್ತೆಗಳ ಎರಡು ಬದಿಯಲ್ಲಿರುವ ವಾಣಿಜ್ಯ ಮಳಿಗೆಗಳು ಚರಂಡಿಗಳ ಮೇಲಿನ ಪಾದಚಾರಿ ಹಾದಿಗಳನ್ನೇ ನುಂಗಿ ಹಾಕಿವೆ. ಸಂಬಂಧಪಟ್ಟವರು ಇತ್ತ ಗಮನ ಹರಿಸಿ, ಪಾದಚಾರಿ ಮಾರ್ಗ
ದಲ್ಲಿನ ಒತ್ತುವರಿ ತೆರವುಗೊಳಿಸಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

ಮಳಿಗೆ ಮುಂದೆ ನೆಲಹಾಸು ಕಬ್ಬಿಣದ ಸರಳು

ಜನನಿಬಿಡ ಪ್ರದೇಶಗಳ ವಾಣಿಜ್ಯ ಮಳಿಗೆಗಳ ಮುಂಭಾಗದಲ್ಲಿ ಗ್ರಾಹಕರ ಸುಲಭ ಓಡಾಟ ಹಾಗೂ ದ್ವಿಚಕ್ರ ವಾಹನಗಳ ನಿಲುಗಡೆ ತಡೆಗಾಗಿ ನೆಲಹಾಸು ಕಬ್ಬಿಣದ ಸರಳು ಹಾಕುವುದು ಕಾನೂನು ಬಾಹಿರವಾಗಿ ಅವ್ಯಾಹತವಾಗಿ
ನಡೆಯುತ್ತಿದೆ.

‘ನಮ್ಮ ಅಂಗಡಿಯ ಮುಂದೆ ನೆಲಹಾಸು ಕಬ್ಬಿಣದ ಸರಳು ಇರಿಸದೆ ಇದ್ದರೇ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತದೆ. ಗ್ರಾಹಕರು ನಮ್ಮ ಅಂಗಡಿಗಳಿಗೆ ಬಾರದೆ ಬೇರೊಂದು ಕಡೆ ತೆರಳುತ್ತಾರೆ’ ಎನ್ನುತ್ತಾರೆ ವರ್ತಕರು.

‘ರಸ್ತೆಗಳ ಎರಡೂ ಅಂಚಿನಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದ್ದು, ಸಾರ್ವಜನಿಕ ಓಡಾಟಕ್ಕೆ ಪಾದಚಾರಿ ಮಾರ್ಗ ಮತ್ತು ರಸ್ತೆ ಬದಿಯೂ ಇಲ್ಲದಂತೆ ಆಗಿದೆ. ವೇಗದಿಂದ ಸಾಗುವ ವಾಹನಗಳ ನಡುವೆ ಜೀವ ಬಿಗಿ ಹಿಡಿದು ನಡೆಯುವಂತಿದೆ. ಕೆಲವೊಮ್ಮೆ ಪಾದಚಾರಿ ಮಾರ್ಗಗಳಲ್ಲೇ ವಾಹನ ಸವಾರರು ಸಾಗುತ್ತಾರೆ’ ಎನ್ನುತ್ತಾರೆ ಪಾದಚಾರಿ ರಮೇಶಕುಮಾರ್.

*ರಾಮಮಂದಿರ ವೃತ್ತದಲ್ಲಿ ಒತ್ತುವರಿ ಕಾರ್ಯಾಚರಣೆ ನಡೆಸಲಾಗಿದೆ. ಉಳಿದ ರಸ್ತೆಗಳ ಪಾದಚಾರಿ ಒತ್ತುವರಿಗೆ ತೆರವಿಗೆ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಸಹ ಪಾಲಿಕೆಗೆ ಸಹಕರಿಸಬೇಕು ಭುವನೇಶ ಪಾಟೀಲ

–ಮಹಾನಗರ ಪಾಲಿಕೆ ಆಯುಕ್ತ

*ಪಾಲಿಕೆಯ ಅಧಿಕಾರಿಗಳ ಜತೆಗೂಡಿ ಪಾದಚಾರಿ ಮಾರ್ಗಗಳು ಒತ್ತುವರಿ ತೆರವು ಕಾರ್ಯಚರಣೆ ನಡೆಸಲಾಗುವುದು. ಒತ್ತುವರಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು

–ಶ್ರೀಕಾಂತ ಕಟ್ಟಿಮನಿ, ಡಿಸಿಪಿ (ಅಪರಾದ ಮತ್ತು ಸಂಚಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.