ಚಿಂಚೋಳಿ: ದಕ್ಷಿಣ ಭಾರತದ ಏಕೈಕ ಶುಷ್ಕ ವಲಯ ವನ್ಯಜೀವಿಧಾಮ ಖ್ಯಾತಿಯ ಕುಂಚಾವರಂ ಅರಣ್ಯದಲ್ಲಿ ಗುಲಬರ್ಗಾ ವಿವಿಯ ಸಸ್ಯಶಾಸ್ತ್ರ ವಿಭಾಗದ 78 ಸ್ನಾತಕೋತ್ತರ ವಿದ್ಯಾರ್ಥಿಗಳು ಭಾನುವಾರ ಒಂದು ದಿನದ ಅಧ್ಯಯನ ನಡೆಸಿದರು.
ವಿದ್ಯಾರ್ಥಿಗಳು ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿದ್ಯಾಸಾಗರ ಜಿ.ಎಂ ನೇತೃತ್ವದಲ್ಲಿ ಸಹಾಯಕ ಪ್ರಾಧ್ಯಾಪಕ ಡಾ.ರಾಜಾಸಮರಸೇನ ಮೋದಿ, ಡಾ.ವೆಂಕಟ ಸಿಂಧೆ ಅವರೊಂದಿಗೆ ಕಾಡಿನಲ್ಲಿ 5 ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಿ ಅಧ್ಯಯನ ನಡೆಸಿದರು.
ವಿದ್ಯಾರ್ಥಿಗಳಿಗೆ ಡಾ.ರಾಜಾ ಸಮರಸೇನ್ ಮೋದಿ ಅವರು ಬಗೆಬಗೆಯ ಸಸ್ಯಗಳ ಹೆಸರು, ಅದರ ಜಾತಿ ಮತ್ತು ಕುಟುಂಬ ತಿಳಿಸಿದರೆ, ಅವುಗಳ ಔಷಧೀಯ ಗುಣಗಳನ್ನು ಡಾ. ವಿದ್ಯಾಸಾಗರ ವಿವರಿಸಿದರು. ಅವುಗಳನ್ನು ವಿದ್ಯಾರ್ಥಿಗಳು ನೋಟ್ಬುಕ್ನಲ್ಲಿ ದಾಖಲಿಸಿಕೊಳ್ಳುತ್ತಿದ್ದರು.
ತಾಲ್ಲೂಕಿನ ಚಿಕ್ಕಲಿಂಗದಳ್ಳಿಯ ಬಳಿಯ ನವಿಲುಗುಡ್ಡದ ಮಂಡಿಬಸವಣ್ಣ ಕ್ಯಾಂಪ್ ಬಳಿಯ ವೀಕ್ಷಣಾ ಗೋಪುರ ಹತ್ತಿ ಅಲ್ಲಿಂದ ಇಡೀ ಕಾಡನ್ನು ಕಣ್ತುಂಬಿಕೊಂಡರು. ಅಲ್ಲಿಂದ ಶಾದಿಪುರ ಸಂಗಿರ್ಲಾ ಮೂಲಕ ಹಾಥಿ ಪಗಡಿ, ಶೇರಿಭಿಕನಳ್ಳಿವರೆಗೆ ಕಾಡಿನಲ್ಲಿ ಹೆಜ್ಜೆ ಹಾಕಿದರು. ಇವರಿಗೆ ವನ್ಯಜೀವಿಧಾಮದ ಉಪ ವಲಯ ಅರಣ್ಯಾಧಿಕಾರಿ ಗಜಾನಂದ, ಅರಣ್ಯ ರಕ್ಷಕ ಸಿದ್ಧಾರೂಡ, ಶರಣಬಸಪ್ಪ ಮೊದಲಾದವರು ಸಾಥ್ ನೀಡಿದರು.
ಶೇರಿಭಿಕನಳ್ಳಿ ಅರಣ್ಯದ ಕಳ್ಳಬೇಟೆ ತಡೆ ಶಿಬಿರದಲ್ಲಿ ಊಟ ಮಾಡಿ ಧರ್ಮಾಸಾಗರ ಮಾರ್ಗವಾಗಿ ಎತ್ತಿಪೋತೆ ಜಲಪಾತಕ್ಕೆ ಭೇಟಿ ನೀಡಿದರು. ಸಂಜೆ 6 ಗಂಟೆಗೆ ಇಲ್ಲಿಂದ ಕಲಬುರ್ಗಿಗೆ ತೆರಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.