ಕಲಬುರ್ಗಿ: ಇಲ್ಲಿನರಾಜಾಪುರ ಸಮೀಪದ ಶಹಾಬಾದ್ ರಸ್ತೆಯಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರನ್ನು ವಿಶ್ವವಿದ್ಯಾಲಯ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಗುಂಪಿನಲ್ಲಿದ್ದ 17 ವರ್ಷದ ಬಾಲಕನನ್ನು ಕೂಡ ರಕ್ಷಿಸಿದ್ದಾರೆ.
ಆಕಾಶ ರಾಯಕೋಡ (22), ರೇವಣಸಿದ್ಧಪ್ಪ ಸರಡಗಿ (22), ಹಣಮಂತ ಮಲ್ಲಪ್ಪ (19) ಮತ್ತು ಸಚಿನ ಹೊನ್ನಪ್ಪ ಕಟ್ಟಿ (18) ಬಂಧಿತರು. ಇವರೊಂದಿಗೆ, ಕಾನೂನು ಸಂಘರ್ಷಕ್ಕೆ ಒಳಗಾದ 17 ವರ್ಷದ ಬಾಲಕನ್ನು ಬಾಲ ನ್ಯಾಯ ಮಂಡಳಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಲಬುರ್ಗಿ– ಶಹಾಬಾದ್ ರಸ್ತೆಯಲ್ಲಿರುವ ಜ್ಯೋತಿ ನಗರದ ಬಳಿ ಶನಿವಾರ ನಸುಕಿನಲ್ಲಿ ಆರೋಪಿಗಳು ದೋರೆಡೆಗೆ ಹೊಂಚು ಹಾಕಿ ಕುಳಿತಿದ್ದರು. ಮುಖಕ್ಕೆ ಬಟ್ಟೆ ಕಟ್ಟಿಕೊಂಡು, ಜಂಬೆ, ಬಡಿಗೆ ಹಿಡಿದುಕೊಂಡು ಕಾಯುತ್ತಿದ್ದರು. ಈ ಭಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸ್ ಆಯುಕ್ತ ಎನ್.ಸತೀಶಕುಮಾರ, ಡಿಸಿಪಿಗಳಾದ ಕಿಶೋರಬಾಬು, ಶ್ರೀಕಾಂತ ಕಟ್ಟಿಮನಿ, ಸಿ ಉಪ ವಿಭಾಗದ ಎಸಿಪಿ ಜೆ.ಎಚ್.ಇನಾಮದಾರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಶಿವಾನಂದ ಗಾಣಿಗೇರ ಮತ್ತು ಸಿಬ್ಬಂದಿ ದಾಳಿ ನಡೆಸಿದರು.
ದಾಳಿಯ ವೇಳೆ ಈ ಗುಂಪಿನ ಮುಖ್ಯಸ್ಥನಾದ ರಾಹುಲ ಅಶೋಕ ಹೊನ್ನಳ್ಳಿ ಎಂಬಾತ ಪರಾರಿಯಾಗಿದ್ದಾನೆ. ಉಳಿದವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಯಲ್ಲಿ ಇನ್ಸ್ಪೆಕ್ಟರ್ ಶಿವಾನಂದ ಜತೆಗೆ ಸಿಬ್ಬಂದಿ ರಾಜು, ವಿಶ್ವನಾಥ, ಅರವಿಂದ , ಸುಲ್ತಾನ್, ಶಶಿಕಾಂತ, ಸಿರಾಜ್ ಪಟೇಲ್, ಮಂಜುನಾಥ ದಾಳಿಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.