ಆಳಂದ: ‘ಮಠಾಧೀಶರಾಗಿ ಧಾರ್ಮಿಕ ಕಾರ್ಯ, ವ್ಯವಹಾರ ಮಾತ್ರ ನೋಡದೆ ಪಾರ್ಶ್ವವಾಯುರೋಗದಿಂದ ಬಳಲುತ್ತಿದ್ದ ಸಾವಿರಾರು ಜನರಿಗೆ ಚಿಕಿತ್ಸೆ ನೀಡಿ ಗುಣಮುಖಗೊಳಿಸಿದ ಮಹಾಂತ ಸ್ವಾಮೀಜಿ ಸೇವೆ ಸದಾ ಸ್ಮರಣೀಯವಾಗಿದೆ’ ಎಂದು ನಂದಗಾಂವ ಮಠದ ಪೀಠಾಧಿಪತಿ ರಾಜಶೇಖರ ಸ್ವಾಮಿಗಳು ಹೇಳಿದರು.
ತಾಲ್ಲೂಕಿನ ಗಡಿಯ ಸಮೀಪದ ಅಕ್ಕಲಕೋಟ ತಾಲ್ಲೂಕಿನ ಇಬ್ರಾಹಿಪುರದಲ್ಲಿ ಲಿಂಗೈಕ್ಯರಾದ ಇಬ್ರಾಹಿಂಪುರ ಮಠದ ಮಹಾಂತ ಸ್ವಾಮಿಗಳ ಅಂತ್ಯಕ್ರಿಯೆ ಸಮಯದಲ್ಲಿ ಶನಿವಾರ ನಡೆದ ನುಡಿನಮನ ಸಲ್ಲಿಸಿ ಮಾತನಾಡಿದರು.
ಮಹಾಂತ ಸ್ವಾಮೀಜಿ ಅವರ ಸೇವೆ ಗುರುತಿಸಿ ಅನೇಕ ಮಾಧ್ಯಮದವರು ಬಂದರೆ ನಯವಾಗಿ ಹೊಗಳಿಕೆ, ತೆಗಳಿಕೆ ಬೇಡವೇ ಬೇಡ ಎಂದು ತಿರುಗಿ ಕಳಿಸಿದರು. ಸ್ವತಃ ಪತ್ರಿಕೆಯ ನಡೆಸುತ್ತಿದ್ದ ಅವರು ತಮ್ಮ ಪತ್ರಿಕೆಯಲ್ಲಿಯೂ ಅವರ ಬಗ್ಗೆ ಬರೆಯಲಿಲ್ಲ. ಸಾಮಾಜಿಕ ಧಾರ್ಮಿಕ ಕಾರ್ಯ ಮಾಡುತ್ತ ಪರಮಾತ್ಮನಲ್ಲಿ ಲೀನವಾಗಿದ್ದಾರೆ ಎಂದರು.
ನರೋಣದ ಗುರುಮಹಾಂತ ಸ್ವಾಮೀಜಿ, ಚಿಣಮಗೇರಾ ವೀರಮಹಾಂತ ಸ್ವಾಮೀಜಿ, ಮಾದನಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ ಮಾತನಾಡಿ,ಹಿರಿಯರಾದ ಮಹಾಂತ ಸ್ವಾಮೀಜಿ ನಮಗೆ ಮಾರ್ಗದರ್ಶಕರಾಗಿದ್ದರು, ಅವರು ಭಕ್ತರ ಹೃದಯದಲ್ಲಿ ನೆಲಸಿದ್ದಾರೆ, ಗಡಿಭಾಗದಲ್ಲಿ ಮಠವನ್ನು ಬೆಳೆಸಿದ ಕಾರ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಮಹಾಂತ ಸ್ವಾಮೀಜಿ ಪಾರ್ಥೀವ ಶರೀರದ ಮೆರವಣಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಮಠದಲ್ಲಿ ಒಂದು ಗಂಟೆಗೆ ಪೂಜೆ ವಿಧಿವಿಧಾನಗಳ ಮೂಲಕ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಿತು.
ಅಕ್ಕಲಕೋಟದ ಬಸವಲಿಂಗ ಸ್ವಾಮೀಜಿ, ದುಧನಿಯ ಶಾಂತಲಿಂಗ ಸ್ವಾಮೀಜಿ, ಹತ್ತಿಕಣಬಸದ ಪ್ರಭುಶಾಂತಲಿಂಗ ಸ್ವಾಮೀಜಿ, ಮಾಡಿಯಾಳದ ಒಪ್ಪತ್ತೇಶ್ವರಮಠದ ಮರುಳಸಿದ್ದ ಸ್ವಾಮೀಜಿ, ಚಲಗೇರಾದ ಶಾಂತವೀರ ಶಿವಾಚಾರ್ಯರು, ಮೈಂದರಗಿ ನೀಲಕಂಠ ಶಿವಾಚಾರ್ಯರು, ಶಾಣಮ್ಮ ತಾಯಿ, ಶಿವದೇವಿ ಮಾತಾಜಿ, ಖೀರಮ್ಮ ತಾಯಿ ಸೇರಿದಂತೆ ವಿವಿಧೆಡೆಯಿಂದ ಮಠಾಧೀಶರು ಹಾಗೂ ರಾಜಕೀಯ ಗಣ್ಯರು ಹಾಗೂ ಭಕ್ತರು ಅಂತ್ಯಕ್ರಿಯೆಲ್ಲಿ ಭಾಗಿಗಳಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.