ಕಲಬುರಗಿ: ನಗರದ ಸರಾಫ್ ಬಜಾರದಲ್ಲಿನ ನವೀಕರಿಸಲಾದ ಗಣೇಶ ಮಂದಿರದ ಲೋಕಾರ್ಪಣೆ ಹಾಗೂ ಅಂಗಾರಕ ಸಂಕಷ್ಟಿ ಕಾರ್ಯಕ್ರಮದ ಅಂಗವಾಗಿ ಮಂಗಳವಾರ 501 ಮಹಿಳೆಯರಿಂದ ಪೂರ್ಣ ಕುಂಭ ಕಳಶ ಮೆರವಣಿಗೆ ನಡೆಸಲಾಯಿತು.
ಇಲ್ಲಿನಕೋಟೆ ರಸ್ತೆಯಲ್ಲಿರುವ ಮಾಯಿ ಮಂದಿರದಿಂದ ಆರಂಭವಾದ ಮೆರವಣಿಗೆಯು ಸಕಲ ಭಾಜಾ ಭಜಂತ್ರಿಗಳೊಂದಿಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಚೌಕ್ ಪೊಲೀಸ್ ಠಾಣೆಯ ಸರ್ಕಲ್,ಸೂಪರ್ ಮಾರ್ಕೆಟ್, ಕಿರಾಣಾ ಬಜಾರ್, ಕಪಡಾ ಬಜಾರ್ ಮಾರ್ಗ, ಸರಾಫ್ ಬಜಾರ್ನಲ್ಲಿ ಸುತ್ತಿ ಕೊನೆಗೆ ಗಣೇಶ ಮಂದಿರ ತಲುಪಿ ಸಮಾಪನಗೊಂಡಿತು.
ಇದಕ್ಕೂ ಮುನ್ನ ದೇವಸ್ಥಾನದಲ್ಲಿ ನಸುಕಿನ 5ರಿಂದಲೇ ಪೂಜಾ ಕೈಂಕರ್ಯಗಳು ನೆರವೇರಿದವು. ಬೆಳಿಗ್ಗೆ 6ಕ್ಕೆ ವಿವಿಧ ಹೋಮ, ಹವನಗಳನ್ನು ಆರಂಭಿಸಲಾಯಿತು. ಹಲವು ಭಕ್ತರು ಸಾಲಾಗಿ ಬಂದು ದೇವರಿಗೆ ಅಭಿಷೇಕ ನೆರವೇರಿಸಿದರು. ಹಣಮಂತ ಭಡಜಿ ಅವರ ನೇತೃತ್ವದಲ್ಲಿ ಅರ್ಚಕರ ತಂಡವು ಎಲ್ಲ ಪೂಜಾ ಕೈಂಕರ್ಯ ನೆರವೇರಿಸಿತು.
ಸಂಜೆ 6ರಿಂದ ಅಪಾರ ಸಂಖ್ಯೆ ಭಕ್ತರು ದೇವಸ್ಥಾನಕ್ಕೆ ಬಂದರು. ಮಂಗಳವಾರದ ದಿನ ಬಂದ ಅಂಗಾರಕ ಸಂಕಷ್ಟಿ ದಿನ ಪ್ರಾರ್ಥನೆಗಳೆಲ್ಲ ಈಡೇರುತ್ತವೆ ಎಂಬ ನಂಬಿಕೆಯ ಕಾರಣ, ಹೆಚ್ಚಿನ ಭಕ್ತರು ಹರಿದುಬಂದರು. ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಸಿ. ಪಾಟೀಲ ರೇವೂರ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಮಹಾಮಂಗಳಾರತಿಯಲ್ಲಿ ಪಾಲ್ಗೊಂಡರು.
ಸರಾಫ್ ಸಂಘದ ಅಧ್ಯಕ್ಷ ರಾಘವೇಂದ್ರ ಮೈಲಾಪುರ, ಉಪಾಧ್ಯಕ್ಷರಾದ ನಾಗೇಂದ್ರಪ್ಪ ಪಾಟೀಲ, ಕಾರ್ಯದರ್ಶಿ ಶಾಮ ಪವಸ್ಕರ, ಸಂಚಾಲಕರಾದ ವೆಂಕಟೇಶ ರಾಮಚಂದ್ರ ಅಮ್ಮಣ್ಣ, ಕೇಶವ ಹಾವಣಪ್ಪ ಸೀತನೂರ ಹಾಗೂ ಪದಾಧಿಕಾರಿಗಳು ಎಲ್ಲ ಕಾರ್ಯಕ್ರಮಗಳ ಮುಂದಾಳತ್ವ ವಹಿಸಿದ್ದರು.
ಬುಧವಾರ (ಏ. 20) ಈ ನವೀಕೃತ ದೇವಸ್ಥಾನದ ಕಳಸಾರೋಹಣ ಹಾಗೂ ಮಹಾಪ್ರಸಾದ ವಿತರಣೆ ನಡೆಯಲಿದೆ.1944ರಲ್ಲಿ ಈ ಗಣೇಶ ಮಂದಿರ ಕಟ್ಟಲಾಗಿತ್ತು.ಸರಾಫ್ ಬಜಾರ್ದ ಸುವರ್ಣ ವ್ಯಾಪಾರಿಗಳು ಸೇರಿಕೊಂಡು ಈ ಮಂದಿರವನ್ನು ನವೀಕರಣ ಮಾಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.