ಕಲಬುರ್ಗಿ: ಕೋಳಿ ಸಾಕಾಣಿಕೆ ಕೇಂದ್ರದ ‘ರಹಸ್ಯ ಗುಂಡಿ’ಯಲ್ಲಿ 1350 ಕೆ.ಜಿ. ಗಾಂಜಾ ಬಚ್ಚಿಟ್ಟಿದ್ದ ಕಾಳಗಿ ಸಮೀಪದ ಲಕ್ಷ್ಮಣ ನಾಯಕ ತಾಂಡಾದಆರೋಪಿಚಂದ್ರಕಾಂತ ಚವ್ಹಾಣ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು ಎಂಬುದು ಬಹಿರಂಗವಾಗಿದೆ.
ಚಂದ್ರಕಾಂತ ಬಿಜೆಪಿ ಚಿಹ್ನೆ ಇರುವ ಟೋಪಿ ಮತ್ತು ಶಾಲು ಧರಿಸಿ 2019ರ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು.
ಹೊಲದ ಸಮೀಪವೇ ಪೊಲೀಸ್ ಠಾಣೆ: ಗಾಂಜಾ ಸಿಕ್ಕ ಆರೋಪಿಯ ಹೊಲದ ಒಂದೂವರೆ ಕಿ.ಮೀ. ಅಂತರದಲ್ಲಿಯೇ ಕಾಳಗಿ ಪೊಲೀಸ್ ಠಾಣೆ ಇದೆ. ಚಂದ್ರಕಾಂತ ನಡೆಸುತ್ತಿದ್ದ ದಂಧೆ ಪೊಲೀಸರ ಗಮನಕ್ಕೆ ಬರದೇ ಇದ್ದುದು ಆಶ್ಚರ್ಯ ಮೂಡಿಸಿದೆ ಎನ್ನುತ್ತಾರೆ ತಾಂಡಾದ ಕೆಲ ನಿವಾಸಿಗಳು.
‘ಚಂದ್ರಕಾಂತ ಬಿಜೆಪಿ ಅಲ್ಲ’
ಬೆಂಗಳೂರು: ಮಾದಕ ದ್ರವ್ಯ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಕಲಗಿಯ ಚಂದ್ರಕಾಂತ ಚೌವ್ಹಾಣ್ಗೂ ಬಿಜೆಪಿಗೂ ಸಂಬಂಧವಿಲ್ಲ. ಆತ ಪಕ್ಷದ ಕಾರ್ಯಕರ್ತನಲ್ಲ ಎಂದು ಬಿಜೆಪಿ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.
2019 ರ ಉಪಚುನಾವಣೆ ವೇಳೆ ಈ ವ್ಯಕ್ತಿ ಸ್ವಯಂಪ್ರೇರಿತವಾಗಿ ಬಂದು ಪಕ್ಷದ ಚಿಹ್ನೆ ಇರುವ ಟೋಪಿ ಮತ್ತು ಶಾಲು ಧರಿಸಿ ಪ್ರಚಾರ ನಡೆಸಿದ್ದ. ಆತ ಮಾದಕ ದ್ರವ್ಯ ಜಾಲದ ಶಂಕಿತ ಆರೋಪಿ ಎಂದು ಹೇಳಲಾಗಿದೆ. ಆತನಿಂದ ಅಂತರ ಕಾಯ್ದುಕೊಳ್ಳುವಂತೆ ಪಕ್ಷದ ಸ್ಥಳೀಯ ಕಾರ್ಯಕರ್ತರಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.