ಚಿತ್ತಾಪುರ: ತಾಲ್ಲೂಕಿನ ಅಲ್ಲೂರ್(ಬಿ) ಗ್ರಾಮದ ರೈತರೊಬ್ಬರು ಒಂದು ಎಕೆರೆ ಜಮೀನಿನಲ್ಲಿ ಗಾಂಜಾ ಗಿಡಗಳನ್ನು ಬೆಳೆದಿರುವುದು ಭಾನುವಾರ ಪತ್ತೆಯಾಗಿದೆ.
ಅಲ್ಲೂರ್(ಬಿ) ಮತ್ತು ಅಲ್ಲೂರ್(ಕೆ) ಗ್ರಾಮದ ಇಬ್ಬರು ಕಾರಿನಲ್ಲಿ ಎರಡು ಚೀಲಗಳಲ್ಲಿ 60 ಕೆಜಿ ಗಾಂಜಾ ಮಾರಾಟಕ್ಕೆಂದು ಒಯ್ಯುತ್ತಿದ್ದ ವೇಳೆ ಬೆಳಗಾವಿ ಜಿಲ್ಲೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಇಬ್ಬರಿಂದಲೂ ಸಿಕ್ಕ ಮಾಹಿತಿಯನ್ನು ಆಧರಿಸಿ ಚಿತ್ತಾಪುರ ಮತ್ತು ವಾಡಿ ಠಾಣೆ ಪೊಲೀಸರು ಅಲ್ಲೂರ್ (ಬಿ) ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದರು.
ಗಾಂಜಾ ಗಿಡಗಳನ್ನು ಕಿತ್ತು ತರಲು ಪೊಲೀಸರಿಗೆ ಕಷ್ಟವಾಗುತ್ತಿದೆ. ಗುಡ್ಡದ ರಸ್ತೆ ಮತ್ತು ಮಳೆ ಬಂದಿದ್ದರಿಂದ ರಸ್ತೆ ಕೆಸರಾಗಿ ಯಾವ ವಾಹನವೂ ಅಲ್ಲಿಗೆ ಹೋಗಲು ಆಗುತ್ತಿಲ್ಲ. ಟಂಟಂ ಸಹಾಯ ಮಾಡಲು ಪೊಲೀಸರು ಗ್ರಾಮಸ್ಥರಿಗೆ ಕೋರಿದ್ದಾರೆ.
‘ಶಹಾಬಾದ್ ಡಿವೈಎಸ್ಪಿ ವಿ.ಎನ್.ಪಾಟೀಲ ಅವರು ಚಿತ್ತಾಪುರ ಸರ್ಕಲ್ ಇನ್ಸ್ಪೆಕ್ಟರ್ ಕೃಷ್ಣಪ್ಪ ಕಲ್ಲದೇವರ್ ಹಾಗೂ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಬರಿಗಾಲಿನಲ್ಲಿ ಕೆಸರಿನಲ್ಲಿ ಗಾಂಜಾ ಬೆಳೆದ ಹೊಲಕ್ಕೆ ಹೋಗಲು ಕಷ್ಟವಾಗಿದೆ’ ಎಂದು ಡಿವೈಎಸ್ಪಿ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
***
ಬೆಳಗಾವಿ ಜಿಲ್ಲೆಯಲ್ಲಿ ಗಾಂಜಾ ಮಾರಾಟ ಮಾಡುವಾಗ ಇಬ್ಬರು ಸಿಕ್ಕಿಬಿದ್ದಿದ್ದಾರೆ. ಅವರು ನೀಡಿರುವ ಮಾಹಿತಿ ಆಧರಿಸಿ ಕಾರ್ಯಾಚರಣೆ, ತನಿಖೆ ನಡೆಯುತ್ತಿದೆ.
–ವಿ.ಎನ್ ಪಾಟೀಲ್, ಡಿವೈಎಸ್ಪಿ, ಶಹಾಬಾದ್ ಉಪ ವಿಭಾಗ
***
ಗಾಂಜಾ ಬೆಳೆದ ಜಮೀನಿಗೆ ಭೇಟಿ ನೀಡಿ ಕಂದಾಯ ಇಲಾಖೆ ನಿಯಮಗಳ ಪ್ರಕಾರ ಪಂಚನಾಮೆ ಮಾಡಿ ಪೊಲೀಸರಿಗೆ ಸಮಗ್ರ ಮಾಹಿತಿ ಒದಗಿಸುತ್ತೇವೆ.
– ಉಮಾಕಾಂತ ಹಳ್ಳೆ, ತಹಶೀಲ್ದಾರ್, ಚಿತ್ತಾಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.