ADVERTISEMENT

50 ಸಾವಿರ ಬಡವರ ಮನೆಗಳಿಗೆ ವಿದ್ಯುತ್ ಸಂಪರ್ಕ

ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜೆಸ್ಕಾಂ ಎಂ.ಡಿ. ರಾಗಪ್ರಿಯಾ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 9:48 IST
Last Updated 16 ಆಗಸ್ಟ್ 2019, 9:48 IST
ಜೆಸ್ಕಾಂ ವ್ಯಾಪ್ತಿಯಲ್ಲಿ ಕಳೆದ ಸಾಲಿನಲ್ಲಿ ಉತ್ತಮ ಕೆಲಸ ಮಾಡಿದ ಕಿರಿಯ ಪವರ್‌ ಮ್ಯಾನ್, ಸಹಾಯಕ ಪವರ್‌ ಮ್ಯಾನ್, ಪವರ್‌ ಮ್ಯಾನ್, ಮೆಕ್ಯಾನಿಕ್ ದರ್ಜೆ 2 ಮತ್ತು ಮಾಪಕ ಓದುಗ, ಶಾಖಾಧಿಕಾರಿಗಳಿಗೆ ಕಂಪನಿ ವ್ಯವಸ್ಥಾಪಕ ನಿರ್ದೇಶಕಿ ಡಾ.ಆರ್‌.ರಾಗಪ್ರಿಯಾ ಸನ್ಮಾನಿಸಿದರು
ಜೆಸ್ಕಾಂ ವ್ಯಾಪ್ತಿಯಲ್ಲಿ ಕಳೆದ ಸಾಲಿನಲ್ಲಿ ಉತ್ತಮ ಕೆಲಸ ಮಾಡಿದ ಕಿರಿಯ ಪವರ್‌ ಮ್ಯಾನ್, ಸಹಾಯಕ ಪವರ್‌ ಮ್ಯಾನ್, ಪವರ್‌ ಮ್ಯಾನ್, ಮೆಕ್ಯಾನಿಕ್ ದರ್ಜೆ 2 ಮತ್ತು ಮಾಪಕ ಓದುಗ, ಶಾಖಾಧಿಕಾರಿಗಳಿಗೆ ಕಂಪನಿ ವ್ಯವಸ್ಥಾಪಕ ನಿರ್ದೇಶಕಿ ಡಾ.ಆರ್‌.ರಾಗಪ್ರಿಯಾ ಸನ್ಮಾನಿಸಿದರು   

ಕಲಬುರ್ಗಿ:ಕೇಂದ್ರ ಸರಕಾರದ ಯೋಜನೆಗಳಾದ ಸೌಭಾಗ್ಯ ಯೋಜನೆಯಡಿ ಗ್ರಾಮೀಣ ಪ್ರದೇಶದ ಬಡತನ ರೇಖೆಗಿಂತ ಕೆಳಗಿರುವ ಮತ್ತು ಬಡಜನರ ಸುಮಾರು 50 ಸಾವಿರ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದೆ ಎಂದು ಗುಲಬರ್ಗಾ ವಿದ್ಯುತ್‌ ಸರಬರಾಜು ಕಂಪನಿ ವ್ಯವಸ್ಥಾಪ ನಿರ್ದೇಶಕಿ ಡಾ.ಆರ್‌.ರಾಗಪ್ರಿಯಾ ಹೇಳಿದರು.

ಜೆಸ್ಕಾಂನ ಕಾರ್ಪೊರೇಟ್ ಕಚೇರಿ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಐಪಿಡಿಎಸ್ ಯೋಜನೆಯಡಿ ಶೇ 90ರಷ್ಟು ಮತ್ತು ಡಿಡಿಯುಜಿಜೆವೈ ಯೋಜನೆಯಡಿ ಶೇಕಡಾ 70ರಷ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು, ಸೆಪ್ಟೆಂಬರ್‌ ಒಳಗಾಗಿ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ. ಅಲ್ಲದೆ 2019-20ನೇ ಸಾಲಿನಲ್ಲಿ 7 ಹೊಸ 33 ಕೆವಿ ವಿದ್ಯುತ್ ವಿತರಣಾ ಕೇಂದ್ರಗಳನ್ನೂ ಕೂಡ ಸ್ಥಾಪಿಸಲಾಗಿದೆ ಎಂದರು.

ADVERTISEMENT

ಜೆಸ್ಕಾಂನ ಎಲ್ಲಾ ನೌಕರರ ಪ್ರಾಮಾಣಿಕ ಪ್ರಯತ್ನ ಮತ್ತು ಕಠಿಣ ಪರಿಶ್ರಮದಿಂದಾಗಿ 2018–19ನೇ ಸಾಲಿನಲ್ಲಿ ಜೆಸ್ಕಾಂಗೆ ₹ 348 ಕೋಟಿ ವರಮಾನ ಬಂದಿದೆ. ಇದು ಅಬ್ದುಲ್ ಕಲಾಂ ಅವರು ಹೇಳಿದ ಹಾಗೆ ನಾವು ಯಾವುದೇ ಒಂದು ಗುರಿಯನ್ನು ಹೊಂದಿ ಕಾರ್ಯಪ್ರವೃತ್ತರಾದರೆ, ಗುರಿಯನ್ನು ಸಾಧಿಸುವುದು ಅಸಾಧ್ಯವೇನಿಲ್ಲ ಎಂದರು.

ಮೇ 2019ರಲ್ಲಿಊರ್ಜಾ ಮಿತ್ರ ಆ್ಯಪ್‍ನ ಸಫಲ ಬಳಕೆಗಾಗಿ ರಾಷ್ಟ್ರ ಮಟ್ಟದಲ್ಲಿರುವ 48 ವಿದ್ಯುತ್‌ ಸರಬರಾಜು ಕಂಪನಿಗಳ ಪೈಕಿಜೆಸ್ಕಾಂಗೆ 8ನೇ ಅತ್ಯುತ್ತಮ ಕಂಪನಿ ಎಂದುಘೋಷಿಸಲಾಗಿದೆ. ರಾಜ್ಯದ ಇತರ ಯಾವ ಕಂಪನಿಯೂ ಇದರಲ್ಲಿ ಸ್ಥಾನ ಪಡೆದಿಲ್ಲ. ಇದಕ್ಕೆ ಜೆಸ್ಕಾಂನ ಪ್ರತಿಯೊಬ್ಬ ಅಧಿಕಾರಿ ಮತ್ತು ನೌಕರರ ಪರಿಶ್ರಮ ಕಾರಣ ಎಂದು ಹೇಳಿದರು.

ವಿದ್ಯುತ್ ಸುರಕ್ಷತೆ ಮತ್ತು ವಿದ್ಯುತ್ ಉಳಿತಾಯ ಕುರಿತು ಏರ್ಪಡಿಸಿದ ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಐದು ಶಾಲಾ–ಕಾಲೇಜುಗಳ ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗೆ ಮತ್ತು ನೌಕರರ ಮಕ್ಕಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವನ್ನು ವಿತರಿಸಿದರಲ್ಲದೆ, 2018–19ನೇ ಸಾಲಿನಲ್ಲಿ ಅತ್ಯುತ್ತಮ ಕಿರಿಯ ಪವರ್‌ ಮ್ಯಾನ್, ಸಹಾಯಕ ಪವರ್‌ ಮ್ಯಾನ್, ಪವರ್‌ ಮ್ಯಾನ್, ಮೆಕ್ಯಾನಿಕ್ ದರ್ಜೆ 2 ಮತ್ತು ಮಾಪಕ ಓದುಗ, ಶಾಖಾಧಿಕಾರಿ, ಸಕಾನಿಇಂ (ವಿ) ಮತ್ತು ಕಾನಿಇಂ (ವಿ) ಅವರಿಗೆ ಪ್ರಮಾಣಪತ್ರ ನೀಡಿ ಸನ್ಮಾನಿಸಿದರು.

ತಾಂತ್ರಿಕ ನಿರ್ದೇಶಕ ಆರ್. ಜಯಕುಮಾರ ಪ್ರಶಸ್ತಿ ವಿತರಿಸಿದರು. ಪ್ರಧಾನ ವ್ಯವಸ್ಥಾಪಕ ಎಂ.ಕೆ. ಪ್ರಮೀಳಾ, ಮುಖ್ಯ ಆರ್ಥಿಕ ಅಧಿಕಾರಿ ಅಬ್ದುಲ್ ವಾಜೀದ್, ಮುಖ್ಯ ಎಂಜಿನಿಯರ್ ಲಕ್ಷ್ಮಣ ಚವ್ಹಾಣ, ಆರ್.ಡಿ. ಚಂದ್ರಶೇಖರ, ಅಧೀಕ್ಷಕ ಎಂಜಿನಿಯರ್ ಮೋಹನ ಕುಮಾರ, ಸಿದ್ರಾಮ ಪಾಟೀಲ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.