ADVERTISEMENT

ಕಲಬುರಗಿ: ಅನಕ್ಷರಸ್ಥರು ಉತ್ತಮ ಶಿಕ್ಷಣ ಪಡೆಯಿರಿ- ಕೆ.ಸುಬ್ರಹ್ಮಣ್ಯ

ಕೇಂದ್ರ ಕಾರಾಗೃಹದಲ್ಲಿ ಕಾಯಂ ಕಲಿಕಾ ಕೇಂದ್ರ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2021, 3:06 IST
Last Updated 3 ನವೆಂಬರ್ 2021, 3:06 IST
ಕಲಬುರಗಿ ಹೊರವಲಯದ ಕೇಂದ್ರ ಕಾರಾಗೃಹದ ಬಂದಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಡಾ. ದಿಲೀಷ್ ಶಶಿ ಅವರು ಕಲಿಕಾ ಕಿಟ್‌ ವಿತರಿಸಿದರು. ಪಿ.ಎಸ್‌. ರಮೇಶ, ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ. ಸುಬ್ರಹ್ಮಣ್ಯ, ಡಿಸಿಪಿ ಅಡ್ಡೂರು ಶ್ರೀನಿವಾಸಲು ಇದ್ದರು
ಕಲಬುರಗಿ ಹೊರವಲಯದ ಕೇಂದ್ರ ಕಾರಾಗೃಹದ ಬಂದಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಡಾ. ದಿಲೀಷ್ ಶಶಿ ಅವರು ಕಲಿಕಾ ಕಿಟ್‌ ವಿತರಿಸಿದರು. ಪಿ.ಎಸ್‌. ರಮೇಶ, ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ. ಸುಬ್ರಹ್ಮಣ್ಯ, ಡಿಸಿಪಿ ಅಡ್ಡೂರು ಶ್ರೀನಿವಾಸಲು ಇದ್ದರು   

ಕಲಬುರಗಿ: ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ನಗರದ ಹೊರವಲಯದ ಕೇಂದ್ರ ಕಾರಾಗೃಹದಲ್ಲಿ ಕಾಯಂ ಕಲಿಕಾ ಕೇಂದ್ರಗಳನ್ನು ಕಲಬುರಗಿ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಕೆ.ಸುಬ್ರಹ್ಮಣ್ಯ ಉದ್ಘಾಟಿಸಿದರು.

ಲೋಕ ಶಿಕ್ಷಣ ನಿರ್ದೇಶನಾಲಯ, ಕಾರಾಗೃಹ ಮತ್ತು ಸುಧಾರಣೆ ಸೇವೆ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಲೋಕ ಶಿಕ್ಷಣ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಶಿಕ್ಷಣ ವಂಚಿತ ಅನಕ್ಷರಸ್ಥರು ವಯಸ್ಕರ ಶಿಕ್ಷಣ ಪಡೆದು ಶಿಕ್ಷಿತರಾಗಬೇಕು‘ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಶಶಿ ಮಾತನಾಡಿ, ಸಾಕ್ಷರತಾ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ವತಿಯಿಂದ ಎಲ್ಲಾ ಸೌಲಭ್ಯ ನೀಡಲಾಗುವುದು. ಇದಲ್ಲದೇ ಕೇಂದ್ರ ಕಾರಾಗೃಹದಲ್ಲಿ ಸಸ್ಯತೋಟ ಮತ್ತು ಎರೆ ಹುಳು ಗೊಬ್ಬರ ತಯಾರಿಕೆ ಘಟಕ ಸ್ಥಾಪಿಸಲು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವುದಾಗಿ ಭರವಸೆ ನೀಡಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ಎಸ್.ರಮೇಶ, ‘ನಮ್ಮ ರಾಜ್ಯ ಭಾಷೆ ಕನ್ನಡವನ್ನು ಎಲ್ಲರೂ ಕಲಿಯಬೇಕು ಮತ್ತು ಎಲ್ಲರಿಗೂ ಈ ಭಾಷೆಯನ್ನು ಓದಲು ಬರಬೇಕು. ಕಾರಾಗೃಹದ ನಿವಾಸಿಗಳು ಈ ಪಡನಾ ಲಿಖನಾ ಸಾಕ್ಷರತಾ ಕಾರ್ಯಕ್ರಮದ ಸದುಪಯೋಗ ಪಡೆಯಬೇಕು‘ ಎಂದರು.

ಇದೇ ಸಂದರ್ಭದಲ್ಲಿ ಕೇಂದ್ರ ಕಾರಾಗೃಹ ನಿವಾಸಿಗಳಲ್ಲಿ 180 ಜನ ಪುರುಷ, 20 ಜನ ಅನಕ್ಷರಸ್ಥಮಹಿಳೆಯರು ಹಾಗೂ ಅರೆ ಅಕ್ಷರಸ್ಥ ಕಲಿಕಾರ್ಥಿಗಳನ್ನು ಗುರುತಿಸಿ ‘ಕಲಿಕೆಯಿಂದ ಬದಲಾವಣೆ‘ ಸಾಕ್ಷರತಾ ಕಾರ್ಯಕ್ರಮದಡಿ 10 ಜನ ಸ್ವಯಂ ಸೇವಕ ಬೋಧಕರಿಗೆ ಬೋಧನಾ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಲಾಯಿತು.

ಡಿಸಿಪಿ ಅಡ್ಡೂರು ಶ್ರೀನಿವಾಸಲು, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುಶಾಂತ ಎಂ. ಚೌಗಲೆ ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಹಣಮಂತಪ್ಪಾ ಎಸ್. ನಾಟೀಕಾರ ಇದ್ದರು.

ತಾಲ್ಲೂಕು ಸಂಯೋಜಕ ಮುರುಗೇಂದ್ರ ಮಸಳಿ, ಮಲ್ಲಯ್ಯ ಹಿರೇಮಠ, ಸುರೇಶ ಜಾಧವ, ಸಾಕ್ಷರತಾ ಶಿಕ್ಷಣ ಪ್ರೇಮಿ ಬಂಡಯ್ಯ ಪಿ.ಹಿರೇಮಠ ಸಾಕ್ಷರಗೀತೆ ಹಾಡಿದರು.

ಶಿವಾನಂದ ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರ ಕಾರಾಗೃಹದ ಪ್ರಭಾರ ಅಧೀಕ್ಷಕ ವಿ.ಕೃಷ್ಣಮೂರ್ತಿ ಸ್ವಾಗತಿಸಿದರು. ಕೇಂದ್ರ ಕಾರಾಗೃಹದ ಶಿಕ್ಷಕ ನಾಗರಾಜ ಮೂಲಗೆ ಕಾರ್ಯಕ್ರಮ ನಿರೂಪಿಸಿದರು. ತಾಲ್ಲೂಕು ಸಂಯೋಜಕ ಪ್ರಭು ಜಾಧವ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.