ಕಲಬುರ್ಗಿ: ಯುವಕ ಪೀಡಿಸುತ್ತಿದ್ದರಿಂದ ಮನನೊಂದು ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಜನ ಆರೋಪಿಗಳನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಭೀಮಾಶಂಕರ ಹಕ್ಕಿ, ಇವರ ಸಹೋದರರಾದ ರಾಕೇಶ ಹಕ್ಕಿ, ಕಲ್ಯಾಣಿ ಹಕ್ಕಿ, ಭೀಮಾಶಂಕರ ತಂದೆ ದಶರಥ ಹಕ್ಕಿ, ತಾಯಿ ಶಿವಲಿಂಗಮ್ಮ ಹಕ್ಕಿ ಬಂಧಿತರು. ‘ಪ್ರಮುಖ ಆರೋಪಿ ಭೀಮಾಶಂಕರ ಬಾಲಕಿಯನ್ನು ಎರಡು ವರ್ಷದಿಂದ ಚುಡಾಯಿಸುತ್ತಿದ್ದ. ಅವಳನ್ನು ತನ್ನ ಜತೆ ಮದುವೆ ಮಾಡಿಕೊಡದಿದ್ದರೆ ಬಲವಂತವಾಗಿ ಓಡಿಸಿಕೊಂಡು ಹೋಗಿ ಮದುವೆ ಆಗುವುದಾಗಿ ಬೆದರಿಕೆ ಹಾಕಿದ್ದ. ಆತನ ಸಹೋದರರು ಮತ್ತೆ ತಂದೆ-ತಾಯಿ ಕೃತ್ಯಕ್ಕೆ ಸಹಕಾರ ನೀಡಿದ್ದಾರೆ. ಹೀಗಾಗಿ ಐದೂ ಜನರನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಬಾಲಕಿ ಶಾಲೆಗೆ ಹೋಗುತ್ತಿದ್ದಾಗಲೂ ಈತ ಪೀಡಿಸುತ್ತಿದ್ದ. ಇದರಿಂದ ನೊಂದ ಪಾಲಕರು ಶಾಲೆ ಬಿಡಿಸಿ, ಮನೆಯಲ್ಲೇ ಇಟ್ಟುಕೊಂಡಿದ್ದರು. ಪದೇ ಪದೇ ಮನೆಗೆ ನುಗ್ಗಿ ಮದುವೆ ಮಾಡಿಕೊಡುವಂತೆ ಒತ್ತಾಯಿಸುತ್ತಿದ್ದ. ಆಕೆಗೆ ಮದುವೆ ವಯಸ್ಸು ಆಗಿಲ್ಲ, 18 ವರ್ಷ ಪೂರ್ಣಗೊಂಡ ಬಳಿಕ ಮದುವೆ ಮಾಡಿಕೊಡುತ್ತೇವೆ, ಅಲ್ಲಿಯವರೆಗೆ ಕಾಯಬೇಕು ಎಂದು ಬಾಲಕಿಯ ಪಾಲಕರು ತಿಳಿಹೇಳಿದ್ದರು. ಆದಾಗ್ಯೂ ಈತ ಬೆದರಿಕೆ ಹಾಕುತ್ತಿದ್ದ. ಇದರಿಂದ ನೊಂದ ಆಕೆ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಹೇಳಿದರು.
ಮೃತ ಬಾಲಕಿಯ ಪಾಲಕರು ಮಾತನಾಡಿ, ‘ನಮಗೆ ಐದು ಹೆಣ್ಣು, ಒಂದು ಗಂಡು ಸೇರಿ ಒಟ್ಟು ಆರು ಜನ ಮಕ್ಕಳು. ಮೊದಲ ಐದು ಜನ ಹೆಣ್ಣು ಮಕ್ಕಳು. ಈ ಪೈಕಿ ಒಂದನೆಯವಳು ಹಾಗೂ ಎರಡನೆಯವಳ ಮದುವೆ ಆಗಿದೆ. ಆತ್ಮಹತ್ಯೆ ಮಾಡಿಕೊಂಡವಳು ಮೂರನೆಯವಳು. ಹಕ್ಕಿ ಕುಟುಂಬದಿಂದ ನಮಗೆ ಬೆದರಿಕೆ ಇದ್ದು, ಪೊಲೀಸರು ರಕ್ಷಣೆ ನೀಡಬೇಕು’ ಎಂದು ಮನವಿ ಮಾಡಿದರು.
ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಬಿ.ಜೆ., ಇನ್ಸ್ಪೆಕ್ಟರ್ ಪಿ.ಶಾಂತಿನಾಥ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.