
ಸೇಡಂ: ‘ಕಾಯಕದ ಮೂಲಕ ಬದ್ಧತೆಯ ಜೀವನ ನಡೆಸುತ್ತಿರುವ ಬಂಜಾರ ಸಮಾಜದ ಏಳಿಗೆಗೆ ಸರ್ಕಾರ ಬದ್ಧವಾಗಿದೆ’ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ತಾಲ್ಲೂಕಿನ ಮುಧೋಳ ಗ್ರಾಮದಲ್ಲಿ ಶನಿವಾರ ನಡೆದ ಸಂತ ಸೇವಾಲಾಲ ಮಹಾರಾಜರ 287ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
‘ಮೀಸಲಾತಿಯನ್ನು ಸರ್ಕಾರ ಪರಿಶೀಲಿಸುತ್ತಿದ್ದು, ಎಲ್ಲ ಸಮುದಾಯವನ್ನು ತೆಗೆದುಕೊಂಡು ಹೋಗುವ ನಿರ್ಧಾರವನ್ನು ಸರ್ಕಾರ ಮಾಡುತ್ತಿದೆ. ಸರ್ಕಾರದಿಂದ ಯಾವ ಸಮಾಜಕ್ಕೂ ಅನ್ಯಾಯವಾಗದಂತೆ ಕಾಳಜಿ ವಹಿಸುತ್ತಿದೆ. ಬಂಜಾರ ಸಮಾಜದ ಏಳಿಗೆಗೆ ಸರ್ಕಾರ ವಿಶೇಷ ಕಾಳಜಿ ವಹಿಸಲಿದೆ’ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ ಮಾತನಾಡಿ, ‘ಅರಣ್ಯ ಪ್ರದೇಶದಲ್ಲಿನ ಬಂಜಾರರಿಗೆ ಕಾನೂನಿಂದ ತೊಂದರೆಯಾಗುತ್ತಿದ್ದು, ಸಮಾಜದ ಧ್ವನಿಗೆ ಸರ್ಕಾರ ಸ್ಪಂದಿಸುವ ಅವಶ್ಯಕತೆ ಇದೆ’ ಎಂದು ಹೇಳಿದರು.
ಹುದ್ದೆಗಳ ನೇಮಕಾತಿಯಲ್ಲಿ ಬಂಜಾರರಿಗೆ ಅನ್ಯಾಯ:
‘ರಾಜ್ಯದ ವಿವಿಧ ಕಡೆಗಳಲ್ಲಿ ಸರ್ಕಾರದಿಂದ ನೇಮಿಸಲಾಗುತ್ತಿರುವ ಹುದ್ದೆಗಳಲ್ಲಿ ಬಂಜಾರ ಸಮಾಜಕ್ಕೆ ಅನ್ಯಾಯವಾಗುತ್ತಿದೆ. ಮೀಸಲಾತಿಯ ಅನುಷ್ಠಾನದಲ್ಲಿ ಬಂಜಾರರಿಗೆ ನ್ಯಾಯ ಸಿಗುತ್ತಿಲ್ಲ. ಇದನ್ನು ಸರ್ಕಾರ ಇತ್ಯರ್ಥಪಡಿಸಬೇಕಿದೆ’ ಎಂದು ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಸುಭಾಷ ರಾಠೋಡ ಮನವಿ ಮಾಡಿದರು.
ರಾಷ್ಟ್ರೀಯ ಗೋರಸೇನಾ ಅಧ್ಯಕ್ಷ ಬಾಳಾ ಸಾಹೇಬ ದೇಘಾವತ, ಬಳಿರಾಮ ಮಹಾರಾಜ, ರಾಮಚೈತನ್ಯ ಮಹಾರಾಜ, ನೆಹರು ಜಾಟೋತ್ ಮಾತನಾಡಿದರು.
ಮುಧೋಳ ಗ್ರಾಮದ ಹನುಮಾನದ ದೇವಾಲಯದಿಂದ ಎಸ್ಎಲ್ವಿ ಫಂಕ್ಷನ್ ಹಾಲ್ವರೆಗೆ ಸೇವಾಲಾಲ ಮಹಾರಾಜರ ಮೆರವಣಿಗೆ ನಡೆಯಿತು. ಮೆರವಣಿಗೆಯುದ್ದಕ್ಕೂ ಬಂಜಾರ ಸಂಸ್ಕೃತಿಯ ಅನಾವಣರಗೊಂಡಿತು. ಯುವಕರು ನೃತ್ಯಕ್ಕೆ ಹೆಜ್ಜೆ ಹಾಕಿದರು.
ಕಾರ್ಯಕ್ರಮದಲ್ಲಿ ಮುಧೋಳ ಗ್ರಾ.ಪಂ ಅಧ್ಯಕ್ಷೆ ಮಂಗಿಬಾಯಿ ಮೋತ್ಯಾ ನಾಯಕ, ಸತೀಶರೆಡ್ಡಿ ಪಾಟೀಲ, ರವಿ ರಾಠೋಡ ಕಾರಬಾರಿ, ಸುಭಾಷ ರಾಠೋಡ ಕಮಲಾಪುರ, ರಾಜು ರಾಠೋಡ, ನರಸಿಂಗ ನಾಯಕ, ಅಶೋಕ ಪವಾರ, ರಮೇಶ ರಾಠೋಡ ಸೇರಿದಂತೆ ಇತರರು ಹಾಜರಿದ್ದರು. ವೆಂಕಟೇಶ ಚವ್ಹಾಣ ಸ್ವಾಗತಿಸಿ, ನಿರೂಪಿಸಿದರು.
ಸೇಡಂ ವಿಧಾನಸಭಾ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶದಲ್ಲಿ ವಾಸಿಸುವ ಬಂಜಾರರಿಗೆ ಅಧಿಕಾರಿಗಳು ಯಾವುದೇ ಕಾರಣಕ್ಕೂ ತೊಂದರೆ ಕೊಡುವಂತಿಲ್ಲ ಸಮಸ್ಯೆಗಳಿದ್ದಲ್ಲಿ ನನ್ನ ಗಮನಕ್ಕೆ ತನ್ನಿ- ಡಾ.ಶರಣಪ್ರಕಾಶ ಪಾಟೀಲ, ಸಚಿವ
ಬಂಜಾರರಿಗೆ ನ್ಯಾಯ ಕೊಡಿಸಿ: ಡಾ.ಜಾಧವ ಮನವಿ
‘ಮೀಸಲಾತಿ ವರದಿ ಜಾರಿಯಿಂದ ಬಂಜಾರ ಸಮಾಜದವರಿಗೆ ಅನ್ಯಾಯವಾಗುತ್ತಿದೆ. ವರದಿಯನ್ನು ಪರಿಶೀಲಿಸಿ ಬಂಜಾರ ಸಮಾಜಕ್ಕೆ ನ್ಯಾಯ ಕೊಡಿಸಬೇಕು. ಬಂಜಾರ ಸಮಾಜಕ್ಕೆ ಸೇಡಂ ನಗರದಲ್ಲಿ ಎರಡು ಎಕರೆ ಈ ಹಿಂದೆ ಸರ್ಕಾರ ಮಂಜೂರು ಮಾಡಿದೆ. ಆದರೆ ಕೆಲ ಸಮಾಜದವರು ತಕರಾರು ಮಾಡುತ್ತಿದ್ದಾರೆ. ಸರ್ಕಾರಿ ಜಮೀನಿನ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು. ಜೊತೆಗೆ ಅರಣ್ಯದಲ್ಲಿ ಭೂಮಿ ಸಾಗುವಳಿ ಮಾಡಿ ಉಪಜೀವನ ನಡೆಸುವವರಿಗೆ ಕಾನೂನಿಂದ ತೊಂದರೆಯಾಗದಂತೆ ಸಚಿವ ಈಶ್ವರ ಖಂಡ್ರೆ ಅವರಿಗೆ ಸೂಚಿಸಬೇಕು’ ಎಂದು ಮಾಜಿ ಸಂಸದ ಡಾ.ಉಮೇಶ ಜಾಧವ ಅವರು ಮನವಿ ಸಚಿವ ಡಾ.ಶರಣಪ್ರಕಾಶ ಪಾಟೀಲರಿಗೆ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.