ADVERTISEMENT

ಕಲಬುರಗಿ| ‘ಸರ್ಕಾರ ರಾಷ್ಟ್ರಕೂಟ ಉತ್ಸವ ಆಚರಿಸಲಿ’

ಕಲ್ಯಾಣ ನಾಡು ವಿಕಾಸ ವೇದಿಕೆಯಿಂದ ರಾಷ್ಟ್ರಕೂಟ ಉತ್ಸವ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 11:03 IST
Last Updated 7 ಮಾರ್ಚ್ 2023, 11:03 IST
ಕಲ್ಯಾಣ ನಾಡು ವಿಕಾಸ ವೇದಿಕೆಯು ಹಮ್ಮಿಕೊಂಡಿದ್ದ ರಾಷ್ಟ್ರಕೂಟ ಉತ್ಸವ ಹಾಗೂ ಕಲ್ಯಾಣ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಲಕ್ಷ್ಮಣ ದಸ್ತಿ, ಸುನಿಲ ಕುಲಕರ್ಣಿ, ಭೀಮಾಶಂಕರ ಪಾಟೀಲ, ಮುತ್ತಣ್ಣ ನಡಗೇರಿ ಇತರರು ಇದ್ದರು
ಕಲ್ಯಾಣ ನಾಡು ವಿಕಾಸ ವೇದಿಕೆಯು ಹಮ್ಮಿಕೊಂಡಿದ್ದ ರಾಷ್ಟ್ರಕೂಟ ಉತ್ಸವ ಹಾಗೂ ಕಲ್ಯಾಣ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಲಕ್ಷ್ಮಣ ದಸ್ತಿ, ಸುನಿಲ ಕುಲಕರ್ಣಿ, ಭೀಮಾಶಂಕರ ಪಾಟೀಲ, ಮುತ್ತಣ್ಣ ನಡಗೇರಿ ಇತರರು ಇದ್ದರು   

ಕಲಬುರಗಿ: ‘ಹಂಪಿ ಉತ್ಸವ, ಬನವಾಸಿ ಉತ್ಸವ, ಲಕ್ಕುಂಡಿ ಉತ್ಸವ, ಚಾಲುಕ್ಯ ಉತ್ಸವ, ಮೈಸೂರು ದಸರಾ ಉತ್ಸವದಂತೆ ಕಲಬುರಗಿಯಲ್ಲಿ ಪ್ರತಿ ವರ್ಷ ರಾಷ್ಟ್ರಕೂಟ ಉತ್ಸವ ಆಚರಿಸಬೇಕು’ ಎಂದು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಒತ್ತಾಯಿಸಿದರು.

ಕಲ್ಯಾಣ ನಾಡು ವಿಕಾಸ ವೇದಿಕೆಯು ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರಕೂಟ ಉತ್ಸವ ಹಾಗೂ ಕಲ್ಯಾಣ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕನ್ನಡಕ್ಕೆ ಮೊಟ್ಟ ಮೊದಲ ಘನತೆ ನೀಡಿದ ಹೆಗ್ಗಳಿಕೆ ಕಲ್ಯಾಣ ನಾಡಿಗೆ ಸಲ್ಲುತ್ತದೆ. ಈ ನೆಲದ ಸಾಂಸ್ಕೃತಿಕ, ಸಾಮರಸ್ಯವನ್ನು ಜಗತ್ತಿಗೆ ಪರಿಚಯಿಸುವ ಕೆಲಸವಾಗಬೇಕಾಗಿದೆ’ ಎಂದರು.

ADVERTISEMENT

ಸಾಮಾಜಿಕ ಹೋರಾಟಗಾರ ಸುನೀಲ ಕುಲಕರ್ಣಿ ಮಾತನಾಡಿ, ರಾಷ್ಟ್ರಕೂಟರ ಸಾಮ್ರಾಜ್ಯವು ನರ್ಮದಾ ನದಿಯಿಂದ ಕಾವೇರಿ ನದಿಯವರೆಗೆ ಹಬ್ಬಿದ್ದು ಅಜಂತಾ–ಎಲ್ಲೋರಾ ಹಾಗೂ ಎಲಿಫೆಂಟಾ ಎಂಬ ಸ್ಥಳಗಳಲ್ಲಿ ನಿರ್ಮಿಸಿರುವ ಸ್ಮಾರಕಗಳು ಯುನೆಸ್ಕೊ ಪಟ್ಟಿಯಲ್ಲಿದ್ದು, ಅವುಗಳನ್ನು ರಾಷ್ಟ್ರಕೂಟರೇ ನಿರ್ಮಿಸಿದ್ದಾರೆ ಎಂದು ಹೇಳಿದರು.

ಕರ್ನಾಟಕ ನವ ನಿರ್ಮಾಣ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಭೀಮಾಶಂಕರ ಪಾಟೀಲ ಮಾತನಾಡಿದರು.

ಕಲ್ಯಾಣ ನಾಡು ವಿಕಾಸ ವೇದಿಕೆಯ ಅಧ್ಯಕ್ಷ ಮುತ್ತಣ್ಣ ಎಸ್. ನಡಗೇರಿ ಮಾತನಾಡಿ, ‘ಜಗತ್ತಿನ ನಾಲ್ಕು ಮಹಾನ್ ಸಾಮ್ರಾಜ್ಯಗಳಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯವೂ ಒಂದು. ಭಾರತ ದೇಶದ ಅರ್ಧ ಭೂಭಾಗವನ್ನು ಆಳ್ವಿಕೆ ಮಾಡಿದ್ದ ಮಹಾನ್ ದೊರೆಗಳು ರಾಷ್ಟ್ರಕೂಟರಾಗಿದ್ದಾರೆ’ ಎಂದರು.

ಪತ್ರಕರ್ತರಾದ ರಾಮಕೃಷ್ಣ ಬಡಶೇಷಿ, ಪ್ರಭುಲಿಂಗ ನೀಲೂರೆ, ವಿವಿಧ ಕ್ಷೇತ್ರದ ಗಣ್ಯರಾದ ಭೀಮಶೇಟ್ಟಿ ಮುಕ್ಕಾ, ಮನೀಷ್ ಜಾಜು, ಆದಿನಾಥ ಹೀರಾ, ಲಿಂಗರಾಜ ಸಿರಗಾಪೂರ, ಡಾ. ಎ.ಎಸ್. ಭದ್ರಶೆಟ್ಟಿ ಹಾಗೂ ಎಂ.ಸಿ. ಕೋರಶೇಟ್ಟಿ ಅವರಿಗೆ ಕಲ್ಯಾಣ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಾಜಿ ಸಚಿವ ರೇವುನಾಯಕ ಬೆಳಮಗಿ, ವಿಧಾನಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಮಾಜಿ ಮಹಾಪೌರರಾದ ಶರಣು ಮೋದಿ, ಹಾಗೂ ಕಲ್ಯಾಣ ನಾಡು ವಿಕಾಸ ವೇದಿಕೆಯ ಸಂಘಟಕರಾದ ಬಾಬು ಮದನಕರ, ಉದಯಕುಮಾರ ಖಣಗೆ, ಸೂರ್ಯಪ್ರಕಾಶ ಚಾಳಿ, ಜೈಭೀಮ ಮಾಳಗೆ, ಅವಿನಾಶ ಕಪನೂರ, ಮಹೇಶ ಮಾನೆ, ವಿಜಯಕುಮಾರ ಕಂಬಾರ, ಪಂಡಿತ ಮದಗುಣಕಿ, ಸಿದ್ದಲಿಂಗ ಉಪ್ಪಾರ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.