ADVERTISEMENT

ಕಲಬುರಗಿ | ಕುಂದು–ಕೊರತೆ ನಿವಾರಣಾ ಪ್ರಾಧಿಕಾರ: 133 ಆರೋಪ ಸಾಬೀತು

ಮಲ್ಲಿಕಾರ್ಜುನ ನಾಲವಾರ
Published 20 ಆಗಸ್ಟ್ 2024, 4:44 IST
Last Updated 20 ಆಗಸ್ಟ್ 2024, 4:44 IST
ಕಲಬುರಗಿಯಲ್ಲಿನ ಕುಂದು–ಕೊರತೆ ನಿವಾರಣಾ ಪ್ರಾಧಿಕಾರದ ಕಚೇರಿ ನಾಮಫಲಕ
ಕಲಬುರಗಿಯಲ್ಲಿನ ಕುಂದು–ಕೊರತೆ ನಿವಾರಣಾ ಪ್ರಾಧಿಕಾರದ ಕಚೇರಿ ನಾಮಫಲಕ   

ಕಲಬುರಗಿ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರದ ಅರೆ ನ್ಯಾಯಿಕ ಸಂಸ್ಥೆಯಾದ ಕುಂದು–ಕೊರತೆ ನಿವಾರಣಾ ಪ್ರಾಧಿಕಾರ ಕಲಬುರಗಿ ವಿಭಾಗಕ್ಕೆ 365 ಅರ್ಜಿಗಳು ಸಲ್ಲಿಕೆಯಾಗಿದ್ದು, 133 ಆರೋಪಗಳು ಸಾಬೀತಾಗಿವೆ. ಆದರೆ, ದಂಡ ವಸೂಲಾತಿ ಮತ್ತು ಶಿಸ್ತು ಕ್ರಮದ ಶಿಫಾರಸುಗಳು ಅನುಷ್ಠಾನಕ್ಕೆ ಬರುತ್ತಿಲ್ಲ.

ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ನೀರು ಪೂರೈಕೆ, ರಸ್ತೆ, ಆರೋಗ್ಯ, ಬೀದಿ ದೀಪ, ನೈರ್ಮಲ್ಯೀಕರಣ ನಿರ್ವಹಣೆ, ವಿವಿಧ ಯೋಜನೆಗಳಡಿ ಫಲಾನುಭವಿಗಳನ್ನು ಗುರುತಿಸುವಲ್ಲಿ ಮತ್ತು ಹಂಚಿಕೆಯಲ್ಲಿ ಆಗುವ ಅನ್ಯಾಯ, ದಾಖಲೆ ಅಥವಾ ಪ್ರಮಾಣಪತ್ರ ನೀಡುವಲ್ಲಿ ಆಗುವ ತಾರತಮ್ಯಗಳ ಸಂಬಂಧ ಸಾರ್ವಜನಿಕರಿಂದ ಕುಂದು–ಕೊರತೆ ನಿವಾರಣಾ ಪ್ರಾಧಿಕಾರ ದೂರುಗಳನ್ನು ಸ್ವೀಕರಿಸುತ್ತದೆ.

ಏಳು ಜಿಲ್ಲೆಗಳನ್ನು ಒಳಗೊಂಡ ಕಲಬುರಗಿ ವಿಭಾಗದ ಪ್ರಾಧಿಕಾರವು ಜುಲೈ ಅಂತ್ಯದವರೆಗೆ 365 ದೂರುಗಳನ್ನು ಸ್ವೀಕರಿಸಿದೆ. ರಾಯಚೂರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಂದೂ ಅರ್ಜಿ ಬಂದಿಲ್ಲ. ಕಲಬುರಗಿಯಲ್ಲಿ ಅತ್ಯಧಿಕ 308 ದೂರುಗಳು ಸಲ್ಲಿಕೆಯಾಗಿವೆ. ನಂತರದ ಸ್ಥಾನದಲ್ಲಿ ಯಾದಗಿರಿ 32, ಬೀದರ್ 24 ಹಾಗೂ ಕೊಪ್ಪಳದಲ್ಲಿ ಒಂದು ಅರ್ಜಿ ಸ್ವೀಕೃತವಾಗಿವೆ.

ADVERTISEMENT

365 ದೂರುಗಳ ಪೈಕಿ 230 ದೂರುಗಳ ಆರೋಪ ಹುಸಿಯಾಗಿವೆ. ಪ್ರಾಧಿಕಾರದ ವಿಚಾರಣೆಯಿಂದ ಸಾಬೀತಾಗಿರುವ 133 ದೂರುಗಳಲ್ಲಿ ಕಲಬುರಗಿಯದ್ದೇ 117 ಪ್ರಕರಣಗಳಿವೆ. ನಾಲ್ಕು ಪ್ರಕರಣಗಳಲ್ಲಿ ₹1 ಲಕ್ಷ ದಂಡ ವಸೂಲಿ ಹಾಗೂ ಗ್ರಾ.ಪಂ. 111 ಹಾಗೂ ತಾ.ಪಂ. 6 ಸೇರಿ 117 ಪ್ರಕರಣಗಳಲ್ಲಿ ಸಂಬಂಧಿಸಿದ ಪಿಡಿಒಗಳು ಹಾಗೂ ಇಒಗಳ ವಿರುದ್ಧ ಶಿಸ್ತು ಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಶಿಫಾರಸು ಮಾಡಲಾಗಿದೆ. ಇದುವರೆಗೂ ಎಷ್ಟು ಪ್ರಕರಣಗಳಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದರ ಸ್ಪಷ್ಟ ಮಾಹಿತಿ ಪ್ರಾಧಿಕಾರ ಹಾಗೂ ದೂರುದಾರರಿಗೆ ಸಿಕ್ಕಿಲ್ಲ.

ಸ್ಥಳೀಯ ಸಂಸ್ಥೆಗಳಲ್ಲಿ ಸರ್ಕಾರದ ಅನುದಾನ ಮತ್ತು ಯೋಜನೆಯ ಲಾಭ ಅರ್ಹರಿಗೆ ತಲುಪುತ್ತಿಲ್ಲ. ಸ್ಥಳೀಯ ಅಧಿಕಾರಿಗಳು ಮತ್ತು ಸದಸ್ಯರ ನಿರ್ಲಕ್ಷ್ಯದಿಂದ ಅರ್ಹರಿಗೆ ಸೌಲಭ್ಯ ತಲುಪುವಲ್ಲಿ ದೋಷಗಳಾಗುತ್ತಿವೆ ಎನ್ನುವ ದೂರುಗಳು ಸಾಮಾನ್ಯವಾಗಿವೆ. ಇದಕ್ಕೆ ಕಡಿವಾಣ ಹಾಕಬೇಕು ಮತ್ತು ಪಿಡಿಒಗಳು ಲೋಕಾಯುಕ್ತ ತನಿಖಾ ಸಂಸ್ಥೆಗಳಿಗೆ ಅಲೆಯುವುದನ್ನು ತಪ್ಪಿಸಲು ಈ ಪ್ರಾಧಿಕಾರ ಸ್ಥಾಪಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಡಾ.ಟಿ.ಶ್ರೀನಿವಾಸ ರೆಡ್ಡಿ
‘ದೂರುದಾರರಿಗೆ ಭ್ರಮ ನಿರಸನ’
‘ದೂರುಗಳ ವಿಚಾರಣೆ ಸಹಿತ ಆದೇಶ ಪ್ರತಿಯನ್ನು ತಾ.ಪಂ. ಇಒ ಜಿ.ಪಂ. ಸಿಇಒ ಹಾಗೂ ಆರ್‌ಡಿಪಿಆರ್‌ ಇಲಾಖೆಗೂ ಕಳುಹಿಸುತ್ತೇವೆ. ಎಷ್ಟು ಆದೇಶಗಳಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ಸರಿಯಾಗಿ ಕೊಡುತ್ತಿಲ್ಲ. ಕಲಬುರಗಿಯ 111 ಪಿಡಿಒಗಳ ಮೇಲೆ ಶಿಸ್ತು ಕ್ರಮಕ್ಕೆ ಆದೇಶಿಸಿದ್ದೇವೆ. ಪ್ರಾಧಿಕಾರಕ್ಕಾಗಲಿ ಅಥವಾ ದೂರುದಾರರಿಗೆ ಶಿಸ್ತು ಕ್ರಮದ ಮಾಹಿತಿಯೇ ಇಲ್ಲ. ಇದು ಹೀಗೆ ಮುಂದುವರಿದರೆ ದೂರುದಾರರಿಗೆ ಭ್ರಮ ನಿರಸನ ಆಗುತ್ತದೆ’ ಎನ್ನುತ್ತಾರೆ ಕಲಬುರಗಿ ವಿಭಾಗದ ಕುಂದು–ಕೊರತೆ ನಿವಾರಣಾ ಪ್ರಾಧಿಕಾರದ ಅಧಿಕಾರಿ ಡಾ. ಟಿ.ಶ್ರೀನಿವಾಸ ರೆಡ್ಡಿ. ‘ವಿಚಾರಣೆಯ ಬಳಿಕ ಆದೇಶದ ತೀರ್ಪು ಕೊಟ್ಟ ಮೂರು ತಿಂಗಳ ಒಳಗಾಗಿ ಸಂಬಂಧಿಸಿದ ಅಧಿಕಾರಿ ಮೇಲ್ಮನವಿ ಸಲ್ಲಿಸಬೇಕು. ಆದರೆ ಇದುವರೆಗೂ ಒಬ್ಬರು ಮೇಲ್ಮನವಿಗೆ ಹೋಗಿಲ್ಲ. ಹೀಗಾಗಿ ಅವರು ತಪ್ಪು ಒಪ್ಪಿಕೊಂಡಂತೆ ಆಗುತ್ತದೆ. ಸಂಬಂಧಿಸಿದ ಮೇಲಧಿಕಾರಿಗಳು ಅವರ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಅಮಾನತು ವಿಚಾರಣೆಯ ಆದೇಶ ಅಥವಾ ಕನಿಷ್ಠ ಚಾರ್ಜ್‌ ಶೀಟ್‌ ಸಹ ಹಾಕುತ್ತಿಲ್ಲ’ ಎಂದು ಬೇಸರದಿಂದ ನುಡಿದರು. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಜಿ.ಪಂ. ಸಿಇಒ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಸಂಪರ್ಕಕ್ಕೆ ಸಿಗಲಿಲ್ಲ.
ದೂರು ಸಲ್ಲಿಕೆ ಹೇಗೆ?
ದೂರುದಾರರು ಗ್ರಾ.ಪಂ. ನಲ್ಲಿ ನಿಗದಿತ ನಮೂನೆಯ ಅರ್ಜಿ ಪಡೆದು ಅಲ್ಲಿ ಕೇಳಲಾದ ಮಾಹಿತಿ ಭರ್ತಿ ಮಾಡಬೇಕು. ದೂರುದಾರರ ವಿಳಾಸ ಪಂಚಾಯಿತಿ ಹೆಸರು ಮತ್ತು ಅಧಿಕಾರಿ/ಅಧ್ಯಕ್ಷ/ ನೌಕರರ ಹೆಸರು ದೋಷದ ಸ್ವರೂಪ ಪೂರಕ ದಾಖಲೆಗಳನ್ನು ನೀಡಬೇಕು. ₹10 ಮೌಲ್ಯದ ಪೋಸ್ಟಲ್ ಆರ್ಡರ್ ಹಾಗೂ ಸ್ವಯಂ ದೃಢೀಕರಣ ಮಾಡಿ ಜಿ.ಪಂ. ಕಚೇರಿಯಲ್ಲಿನ ಕುಂದು–ಕೊರತೆ ನಿವಾರಣಾ ಪ್ರಾಧಿಕಾರಕ್ಕೆ ಸಲ್ಲಿಸಬೇಕು.

ಕುಂದುಕೊರತೆ ನಿವಾರಣಾ ಪ್ರಾಧಿಕಾರಕ್ಕೆ ಸಲ್ಲಿಕೆಯಾದ ದೂರುಗಳು

ಜಿಲ್ಲೆಗಳು; ದೂರು ಸಲ್ಲಿಕೆ; ಸಾಬೀತು; ಸಾಬೀತಾಗದ ದೂರು; ಶಿಸ್ತು ಕ್ರಮಕ್ಕೆ ಶಿಫಾರಸು

ಕಲಬುರಗಿ; 308; 117; 189; 117

ಬೀದರ್; 24; 3; 21; 3

ಯಾದಗಿರಿ; 32; 13; 19

ಕೊಪ್ಪಳ;1; 0; 1; 0;

ಒಟ್ಟು; 365; 133; 230; 133

ರಾಯಚೂರು ಬಳ್ಳಾರಿ ಮತ್ತು ವಿಜಯನಗರದಲ್ಲಿ ಶೂನ್ಯ ದೂರು ದಾಖಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.