ADVERTISEMENT

ಚಿಂಚೋಳಿಯ ಕೋವಿಡ್‌ ಕೇಂದ್ರದಲ್ಲಿದ್ದಾರೆ ಒಬ್ಬರೇ ವ್ಯಕ್ತಿ

‌ಆರೈಕೆ ಕೇಂದ್ರ ಸೇರುವಂತೆ ಮನೆಗೆ ತೆರಳಿ ಮನವಿ ಮಾಡಿದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 21 ಮೇ 2021, 5:53 IST
Last Updated 21 ಮೇ 2021, 5:53 IST
ಚಿಂಚೋಳಿಯಲ್ಲಿ ಶುಕ್ರವಾರ ಹಲವು ಸೋಂಕಿತರ ಮನೆಗೆ ಭೇಟಿ ನೀಡಿದ ತಹಶೀಲ್ದಾರ್‌ ನೇತೃತ್ವದ ಅಧಿಕಾರಿಗಳ ತಂಡವು; ಕೋವಿಡ್‌ ಕೇರ್‌ ಕೇಂದ್ರಕ್ಕೆ ಬಂದು ಸೇರುವಂತೆ ಸೋಂಕಿತರಲ್ಲಿ ಮನವಿ ಮಾಡಿತು.
ಚಿಂಚೋಳಿಯಲ್ಲಿ ಶುಕ್ರವಾರ ಹಲವು ಸೋಂಕಿತರ ಮನೆಗೆ ಭೇಟಿ ನೀಡಿದ ತಹಶೀಲ್ದಾರ್‌ ನೇತೃತ್ವದ ಅಧಿಕಾರಿಗಳ ತಂಡವು; ಕೋವಿಡ್‌ ಕೇರ್‌ ಕೇಂದ್ರಕ್ಕೆ ಬಂದು ಸೇರುವಂತೆ ಸೋಂಕಿತರಲ್ಲಿ ಮನವಿ ಮಾಡಿತು.   

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಪೋಲಕಪಳ್ಳಿಯ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಬಾಲಕಿಯರ ವಸತಿ ನಿಲಯದಲ್ಲಿ ತೆರೆದ ಕೋವಿಡ್ ಆರೈಕೆ ಕೇಂದ್ರದಲ್ಲಿ ಕೇವಲ ಒಬ್ಬ ವ್ಯಕ್ತಿ ಮಾತ್ರ ದಾಖಲಾಗಿರುವುದು ಗುರುವಾರ ಬೆಳಕಿಗೆ ಬಂದಿದೆ.

ತಾಲ್ಲೂಕಿನಲ್ಲಿ ಕೋವಿಡ್ ಪೀಡಿತರ ಸಂಖ್ಯೆ ಸಾಕಷ್ಟಿದೆ. ಆದರೆ, ಆರೈಕೆ ಕೇಂದ್ರಕ್ಕೆ ಬಂದು ದಾಖಲಾಗಲು ಯಾರೂ ಮುಂದೆ ಬರುತ್ತಿಲ್ಲ. ಇದರಿಂದ ತಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮಹಮದ್ ಗಫಾರ, ಪುರಸಭೆ ಮುಖ್ಯಾಧಿಕಾರಿ ಚಂದ್ರಕಾಂತ ಪಾಟೀಲ, ಡಾ. ಲತೀಫ್ ಪರಿಸರ ಎಂಜಿನಿಯರ್ ಸಂಗಮೇಶ ಶೆಟ್ಟಿ ಅವರು ಸೇರಿಕೊಂಡು ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಸಂಚರಿಸಿ, ಕೋವಿಡ್ ಕೇರ್‌ ಸೆಂಟರ್‌ಗೆ ಬರುವಂತೆ ಸೋಂಕಿತರ ಮನೆಗೇ ತೆರಳು ಮನವಿ ಮಾಡಿದರು.

ಈ ಸಂದರ್ಭ ಹಲವು ಸೋಂಕಿತರಿಗೆ ಪ್ರತ್ಯೇಕ ಕೋಣೆ ವ್ಯವಸ್ಥೆ ಇರಲಿಲ್ಲ. ಕೋಣೆ ಇದ್ದರೂ ಪ್ರತ್ಯೇಕ ಶೌಚಾಲಯ ಇರಲಿಲ್ಲ. ಅವರೆಲ್ಲ ಮನೆಯ ಇತರ ಸದಸ್ಯರೊಂದಿಗೇ ಒಡನಾಡಿಕೊಂಡಿದ್ದು ಕಂಡುಬಂತು.

ADVERTISEMENT

‘ಸೋಂಕಿತರ ಕುಟುಂಬದ ಸದಸ್ಯರಿಂದ ವ್ಯಕ್ತಿಗತ ಅಂತರ ಕಾಪಾಡಲು ಮತ್ತು ವೈದ್ಯರ ನಿಗಾದಲ್ಲಿ ಇರಲು ಆರೈಕೆ ಕೇಂದ್ರಕ್ಕೆ ಬನ್ನಿ. ನಿಮಗೆ ಊಟ, ವಸತಿ, ಔಷಧಿ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲಾಗುವುದು. ನಿಮ್ಮ ಆರೋಗ್ಯದ ಕಾಳಜಿ ವಹಿಸಲು ವೈದ್ಯರನ್ನು ನಿಯೋಜಿಸಲಾಗಿದೆ’ ಎಂದೂ ಕೋರಿದರು.‌

ಅಧಿಕಾರಿಗಳು ಮನವಿ ಮಾಡಿಕೊಂಡ ಮೇಲೂ ಸೋಂಕಿತರಾಗಲೀ, ಅವರ ಕುಟುಂಬದವರಾಗಲೀ ಕೋವಿಡ್‌ ಕೇರ್‌ ಕೇಂದ್ರಕ್ಕೆ ಹೋಗಲು ಬಯಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.