ಕಲಬುರ್ಗಿ: ರಾಜ್ಯದ 20 ಲಕ್ಷ ಇರುವ ಹಡಪದ ಸಮಾಜಕ್ಕೆ ಈ ಬಾರಿಯ ಬಜೆಟ್ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪೂರ್ತಿ ಕಡೆಗಣಿಸಿದ್ದು, ನಯಾಪೈಸೆ ಅನುದಾನವನ್ನೂ ನೀಡಿಲ್ಲ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯರೂ ಆಗಿರುವ ಹಡಪದ ಸಮಾಜದ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ಈರಣ್ಣ ಸಿ. ಹಡಪದ ಸಣ್ಣೂರ ಟೀಕಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಡಪದ ಸಮಾಜವು ತಮಗೆ ಮತ ಹಾಕಲು ಬೇಕು. ತೆರಿಗೆ ಕಟ್ಟಲು ಬೇಕು. ಕ್ಷೌರ ಮಾಡಲು ಬೇಕು. ಬಜೆಟ್ನಲ್ಲಿ ನಮಗೆ ಪಾಲು ಇಲ್ಲವೇ ಹೇಳಿ. ನಮ್ಮ ಜನಾಂಗ ಎಷ್ಟು ನಂಬಿಕೆ, ಪ್ರೀತಿ, ವಿಶ್ವಾಸ ಇಟ್ಟುಕೊಂಡಿದ್ದರೂ ಅದನ್ನೆಲ್ಲ ಹುಸಿ ಮಾಡಿದ್ದೀರಿ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕ್ರಮವನ್ನು ಟೀಕಿಸಿದರು.
2017ರಲ್ಲಿ ಕಲಬುರ್ಗಿಯಲ್ಲಿ ನಡೆದ ಹಡಪದ ಸಮಾಜದ ಸಮಾವೇಶದಲ್ಲಿ ಮಾತನಾಡಿದಾಗ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಹಡಪದ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ, ಹಡಪದ ಸಮಾಜವನ್ನು ಪ್ರವರ್ಗ 1ಕ್ಕೆ ಸೇರಿಸುವುದು, ಹಜಾಮ ಪದ ಬಳಸಿದವರಿಗೆ ಜಾತಿ ನಿಂದನೆ ಕಾಯ್ದೆಯಡಿ ಪ್ರಕರಣ ದಾಖಲಿಸಲು ಅವಕಾಶ ನೀಡುವ ಭರವಸೆ ನೀಡಲಾಗಿತ್ತು. ಆದರೆ, ಈಗ ಹುಸಿಯಾಗಿದೆ. ಮುಂದಿನ ದಿನಗಳಲ್ಲಿ ಸಮಾಜಕ್ಕೆ ಅನುದಾನ ನೀಡಬೇಕು. ಇಲ್ಲದಿದ್ದರೆ ರಾಜ್ಯದಲ್ಲಿರುವ ಎಲ್ಲ ಕ್ಷೌರದ ಅಂಗಡಿಗಳನ್ನು ಬಂದ್ ಮಾಡಲಾಗುವುದು. ಅಂಗಡಿಯಲ್ಲಿ ಸಂಗ್ರಹವಾದ ಕೂದಲನ್ನು ಸಂಗ್ರಹಿಸಿ ವಿಧಾನಸೌಧದ ಎದುರು ಸುರುವಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಹಡಪದ ಸಮಾಜದ ಗೌರವ ಅಧ್ಯಕ್ಷ ಬಸವರಾಜ ಹಡಪದ ಸೂಗೂರ, ಕಾರ್ಯಾಧ್ಯಕ್ಷ ಭಗವಂತ ಹಡಪದ ಹೊನ್ನಕಿರಣಗಿ, ಮಹಾಂತೇಶ ಹಡಪದ, ಸುನೀಲ ಹಡಪದ ಗೋಷ್ಠಿಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.