ಕಲಬುರಗಿ: ನಗರ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಮಂಗಳವಾರ ಸಂಜೆ ಧಾರಾಕಾರ ಮಳೆ ಸುರಿಯಿತು. ತಗ್ಗು ಪ್ರದೇಶದ 18ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತು.
ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು ಧಗೆ ಹೆಚ್ಚಾಗಿತ್ತು. ಇಳಿಸಂಜೆಗೆ ಏಕಾಏಕಿ ಗುಡುಗು ಸಹಿತ ಆರಂಭವಾದ ಮಳೆ ಎರಡು ತಾಸು ಸುರಿಯಿತು. ಇಲ್ಲಿನ ಜಯನಗರ, ಸುಂದರ ನಗರ, ಪ್ರಶಾಂತ ನಗರ, ವೀರೇಂದ್ರ ಪಾಟೀಲ ಬಡಾವಣೆಯ ಮನೆಗಳಿಗೆ ನೀರು ನುಗ್ಗಿ, ಜನಜೀವನ ಅಸ್ತವ್ಯಸ್ತವಾಯಿತು. ಪಿಡಿಎ ಎಂಜಿನಿಯರಿಂಗ್ ಕಾಲೇಜ್, ಹಳೆ ಜೇವರ್ಗಿ ಮಾರ್ಗದ ರೈಲ್ವೆ ಅಂಡರ್ಪಾಸ್
ಗಳಲ್ಲಿ ನೀರು ತುಂಬಿಕೊಂಡು ಅರ್ಧ ತಾಸು ವಾಹನ ಸಂಚಾರ ಬಂದ್ ಆಯಿತು. ಐವಾನ್ ಇ ಶಾಹಿ ಮಾರ್ಗ, ಲಾಳಗೇರಿ ಕ್ರಾಸ್, ಮುಸ್ಲಿಂ ಚೌಕ, ಬಸ್ ನಿಲ್ದಾಣ, ಚಪ್ಪಲ್ ಬಜಾರ್, ದರ್ಗಾ ರೋಡ್, ಶಹಾಬಜಾರ್ ರಸ್ತೆಗಳಲ್ಲಿ ಚರಂಡಿಗಳು ತುಂಬಿಕೊಂಡು ನೀರು ರಸ್ತೆಯ ಮೇಲೆ ಹರಿಯಿತು.ಸೂಪರ್ ಮಾರ್ಕೆಟ್ ಪ್ರದೇಶ, ಸೋನಿಯಾ ಗಾಂಧಿ ಬಡಾವಣೆ,ಶಕ್ತಿ ನಗರ, ಗಾಜಿಯಾಬಾದ್, ದರ್ಗಾ ಬಡಾವಣೆ, ಶಾಸ್ತ್ರಿ ನಗರ, ಮಹಾವೀರ ನಗರ, ಗುಲ್ಲಾಬವಾಡಿ, ಗುಲಬರ್ಗಾ ವಿಶ್ವವಿದ್ಯಾಲಯ ಸೇರಿದಂತೆ ನಗರದ ಬಹುಪಾಲು ಪ್ರದೇಶಗಳಲ್ಲಿ ಮಳೆ ಸುರಿಯಿತು.
ಉಳಿದಂತೆ, ಜಿಲ್ಲೆಯ ಚಿಂಚೋಳಿ, ಸೇಡಂ, ಕಮಲಾಪುರ, ಕಾಳಗಿ, ಅಫಜಲಪುರ, ಚಿತ್ತಾಪುರ, ಜೇವರ್ಗಿ ತಾಲ್ಲೂಕಿನಲ್ಲೂ ಮಳೆ ಸುರಿದಿದೆ. ಅಫಜಲಪುರ ತಾಲ್ಲೂಕಿನ ರೇವೂರ(ಬಿ) ವಲಯದ ಬಡದಾಳ ಗ್ರಾಮದಲ್ಲಿ ಒಂದು ಹಸು,ಕಮಲಾಪುರ ತಾಲ್ಲೂಕಿನ ನವನಿಹಾಳ ಛತ್ರುನಾಯಕ ತಾಂಡಾದಲ್ಲಿ ಒಂದು ಎತ್ತು, ಚಿಂಚೋಳಿ ತಾಲ್ಲೂಕಿನಲ್ಲಿಅಣವಾರ ಗ್ರಾಮದಲ್ಲಿ ಮೂರು ಮೇಕೆಗಳು ಸಿಡಿಲೆರಗಿ ಸಾವನ್ನಪ್ಪಿವೆ. ಕೆಲವು ಹಳ್ಳಿಗಳಲ್ಲಿ ವಿದ್ಯುತ್ ಕಂಬಗಳು ಹಾಗೂ ಗಿಡಗಳೂ ಉರಿಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.