ಕಲಬುರ್ಗಿ: ಕಲಬುರ್ಗಿ ನಗರ, ಚಿಂಚೋಳಿ ಹಾಗೂ ಕಾಳಗಿ ತಾಲ್ಲೂಕಿನ ಹಲವೆಡೆ ಸೋಮವಾರ ಸಂಜೆಯಿಂದ ಮಂಗಳವಾರ ಬೆಳಗಿನ ಜಾವದವರೆಗೆ ಭಾರಿ ಮಳೆ ಸುರಿದಿದ್ದು, ನದಿ, ಹಳ್ಳಗಳು ತುಂಬಿ ಹರಿಯುತ್ತಿವೆ. ರಸ್ತೆ ಸಂಪರ್ಕ ಕಡಿತಗೊಂಡಿದೆ.
ಕಲಬುರ್ಗಿ ನಗರದಲ್ಲಿ ಸುರಿದ ಭಾರಿ ಮಳೆಗೆ ಹಳೆ ಜೇವರ್ಗಿ ರಸ್ತೆಯ ಅಂಡರ್ ಪಾಸ್, ಕೋರಂಟಿ ಹನುಮಾನ್ ದೇವಸ್ಥಾನ ಬಳಿಯ ರೈಲ್ವೆ ಅಂಡರ್ ಪಾಸ್, ಸ್ಟೇಷನ್ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರದಲ್ಲಿ ವ್ಯತ್ಯಯವಾಯಿತು.
ಕಾಳಗಿ: ಪಟ್ಟಣದ ನೀಲಕಂಠ ಕಾಳೇಶ್ವರ ಐತಿಹಾಸಿಕ ದೇವಸ್ಥಾನಕ್ಕೆ ನೀರು ನುಗ್ಗಿದೆ. ಇದೇ ನೀರು ಚಿತ್ತಾಪುರ ಸಂಪರ್ಕಿಸುವ ಕಾಳಗಿ ಸೇತುವೆ ಮೇಲಿಂದ ಹರಿದುಹೋಗಿ ಸಂಪರ್ಕ ಕಡಿತಗೊಳಿಸಿದೆ.
ರಾಜಾಪುರ ಗ್ರಾಮದ ಹನುಮಾನ ಗುಡಿ ಬಳಿಗೆ ಹರಿದು ಬಂದ ಮಳೆ ನೀರು ಕಾಳಗಿ-ಕೊಡದೂರ ಸಂಪರ್ಕ ಸ್ಥಗಿತಗೊಳಿಸಿದೆ. ಕಣಸೂರ, ವಚ್ಚಾ ಹಳ್ಳ ತುಂಬಿಹರಿದು ಅಕ್ಕಪಕ್ಕದ ಮುಳುಗಡೆಯಾಗಿವೆ. 2-3 ದಿನಗಳಿಂದ ರಾತ್ರಿ ಮತ್ತು ಬೆಳಗಿನ ಜಾವದಲ್ಲೇ ಸುರಿಯುತ್ತಿರುವ ಮಳೆ ಜನಜೀವನ ನಲುಗುವಂತೆ ಮಾಡಿದೆ.
ಚಿಂಚೋಳಿ: ತಾಲ್ಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯದಿಂದ ಸೋಮವಾರ ತಡರಾತ್ರಿ 10.30ರಿಂದ ಎರಡು ಗೇಟುಗಳು ತಲಾ ಎರಡು ಅಡಿ ಎತ್ತರ ಎತ್ತಿ 3 ಸಾವಿರ ಕ್ಯುಸೆಕ್ ನೀರು ನದಿಗೆ ಬಿಡಲಾಗಿದೆ. ನದಿಯ ಮೇಲ್ಭಾಗದಲ್ಲಿ ಮಳೆಯಾಗಿದೆ ಜತೆಗೆ ಮುಲ್ಲಾಮಾರಿ ಮೇಲ್ದಂಡೆಯ ಜಲಾಶಯವೂ ಭರ್ತಿಯಾಗಿದೆ. ಇದರಿಂದಲೂ ಹೆಚ್ಚುವರಿ ನೀರು ಬರುವುದರಿಂದ ಮುನ್ನಚ್ಚರಿಕೆ ಕ್ರಮವಾಗಿ ನದಿಗೆ ನೀರು ಬಿಡಲಾಗಿದೆ.
ಒಂದು ವೇಳೆ ಮಳೆ ನಿಂತರೆ ಒಂದು ಗೇಟು ಬಂದ್ ಮಾಡಿ, ಒಂದೇ ಗೇಟಿನಿಂದ ನೀರು ಬಿಡಲಾಗುವುದು ಎಂದು ಎಇಇ ಹಣಮಂತರಾವ್ ಪೂಜಾರಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.