ಚಿತ್ತಾಪುರ: ಸೋಮವಾರ ರಾತ್ರಿ ತಾಲ್ಲೂಕಿನಾದ್ಯಂತ ಧಾರಾಕಾರವಾಗಿ ಸುರಿದ ಮಳೆಯು ರೈತ ಸಮುದಾಯದಲ್ಲಿ ಮಂದಹಾಸ ಮೂಡಿಸಿದೆ.
ಮಂಗಳವಾರ ಹೊಲದಲ್ಲಿನ ಮುಂಗಾರು ಬೆಳೆಗಳಿಗೆ ಜೀವಕಳೆ ಬಂದು ಬೆಳೆಗಳು ನಳನಳಿಸುತ್ತಿವೆ. ಮುಂಗಾರು ಬೆಳೆ ಹೆಸರು ಹೂವಾಡುವ, ಕಾಯಿಯಾಗುವ ಹಂತದಲ್ಲಿದೆ. ಮಳೆಯಿಲ್ಲದೆ ಕಾಯಿ ಕಡಿಮೆಯಾಗುತ್ತವೆ, ಇಳುವರಿ ಕ್ಷೀಣಿಸುತ್ತದೆ ಎನ್ನುವ ಚಿಂತೆ ರೈತರನ್ನು ಕಾಡುತ್ತಿರುವಾಗಲೇ ಧಾರಾಕಾರ ಸುರಿದ ಮಳೆಯಿಂದ ಬಂಪರ್ ಇಳುವರಿ ಸಿಗುವ ಖುಷಿ ಮೂಡಿದೆ.
ತೇವಾಂಶದ ಕೊರತೆಯಿಂದ ತೊಗರಿ ಬೆಳೆಯ ಬೆಳವಣಿಗೆ ಕುಂಠಿತಗೊಂಡಿತ್ತು. ಮಳೆಯಿಂದ ಉದ್ದು, ತೊಗರಿ ಬೆಳೆ ಚೇತರಿಸಿಕೊಂಡು ಸಮೃದ್ಧವಾಗಿ ಬೆಳೆಯುತ್ತವೆ ಎಂದು ರೈತರು ಹರ್ಷ ವ್ಯಕ್ತಪಡಿಸಿದ್ದಾರೆ. ತಾಲ್ಲೂಕಿನಾದ್ಯಂತ ರಾತ್ರಿ ಉತ್ತಮ ಮಳೆಯಾಗಿದ್ದು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ತಗ್ಗು ಪ್ರದೇಶದಲ್ಲಿನ ಹೊಲಗಳಲ್ಲಿ ಮಳೆ ನೀರು ನಿಂತು ಹೆಸರು, ತೊಗರಿ ಬೆಳೆಗಳು ಜಲಾವೃತಗೊಂಡಿವೆ.
ಅಲ್ಲೂರ್(ಕೆ), ಅಲ್ಲೂರ್(ಬಿ), ರಾಮತೀರ್ಥ, ರಾಜೋಳಾ, ಭಂಕಲಗಿ ಗ್ರಾಮಗಳ ತಗ್ಗು ಪ್ರದೇಶದ ಹೊಲಗಳಲ್ಲಿ ಮಳೆ ನೀರು ನಿಂತು ಹೊಲಗಳಲ್ಲಿನ ಹೆಸರು, ಉದ್ದು, ತೊಗರಿ, ಸಜ್ಜೆ ಮುಂತಾದ ಬೆಳೆಗಳು ಹಾನಿಯಾಗುವ ಆತಂಕ ರೈತರಲ್ಲಿ ಶುರುವಾಗಿದೆ.
ತಾಲ್ಲೂಕಿನ ದಂಡೋತಿ ಗ್ರಾಮದ ಹತ್ತಿರ ಹರಿಯುತ್ತಿರುವ ಕಾಗಿಣಾ ನದಿಯಲ್ಲಿ ಮಂಗಳವಾರ ಬೆಳಿಗ್ಗೆ ಪ್ರವಾಹ ಉಕ್ಕಿ ಬಂದು ನದಿ ತುಂಬಿ ಹರಿಯುತ್ತಿದೆ. ಮಧ್ಯಾಹ್ನ ಸೇತುವೆ ಮುಳುಗಡೆಯ ಆತಂಕ ಸೃಷ್ಟಿಯಾಗಿತ್ತು. ಸಂಜೆ ಪ್ರವಾಹ ಇಳಿಮುಖವಾಗಿದೆ. ಪ್ರಸ್ತಕ ಸಾಲಿನ ಮಳೆಗಾಲದಲ್ಲಿ ಮೊದಲ ಸಲ ಕಾಗಿಣಾ ನದಿಯು ಪ್ರವಾಹದಿಂದ ತುಂಬಿ ಭೋರ್ಗರೆಯುತ್ತಾ ಹರಿಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.