ಕಲಬುರ್ಗಿ: ಕೋವಿಡ್ ಕರ್ಫ್ಯೂ ಕಾರಣ ತೋಟಗಾರಿಕೆ ಇಲಾಖೆಯ ಅಂಗ ಸಂಸ್ಥೆಯಾದ ಜಿಲ್ಲಾ ಹಾಪ್ಕಾಮ್ಸ್ನಿಂದ ಸಂಚಾರಿ ಹಣ್ಣು ಮತ್ತು ತರಕಾರಿ ಮಾರಾಟಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ರೈತರಿಂದ ನೇರವಾಗಿ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಿ, ಮಾರುಕಟ್ಟೆಗಿಂತ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆಒದಗಿಸಲು ಅನುಕೂಲವಾಗುವಂತೆ ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾ ಮಂಡಳ ಈ ಸಂಚಾರಿ ವಾಹನ ವಿನ್ಯಾಸಗೊಳಿಸಿದೆ.
ಜಿಲ್ಲೆಯ ರೈತರಿಗೆ ಒಳ್ಳೆಯ ಬೆಲೆ ನೀಡಿ ರೈತರಿಂದ ನೇರವಾಗಿ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಿ, ಈ ಸಂಚಾರಿ ವಾಹನಗಳ ಮೂಲಕ ವಿವಿಧೆಡೆ ತೆರಳಿ ಮಾರಲಾಗುವುದು.
ಈ ಸಂಚಾರಿ ವಾಹನವನ್ನು ಬೆಂಗಳೂರಿನ ಹೆಸರಘಟ್ಟ ಐಐಎಚ್ಆರ್ ಸಂಸ್ಥೆಯು ವಿನ್ಯಾಸಗೊಳಿಸಿದ್ದು, ಇದರಲ್ಲಿ ಸೋಲಾರ್ ಪ್ಯಾನಲ್, ದರಪಟ್ಟಿ ಪ್ರದರ್ಶನ ಸ್ಕ್ರೀನ್ ಹಾಗೂ ಇತರೆ ಸುಸಜ್ಜಿತ ತಂತ್ರಜ್ಞಾನದ ವ್ಯವಸ್ಥೆ ಇದೆ. ಇದನ್ನು ರಾಜ್ಯ ಸಹಕಾರಿ ತೋಟಗಾರಿಕಾ ಮಾರಾಟ ಮಹಾಮಂಡಳಿಯು ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲಾ ಹಾಪ್ಕಾಮ್ಸ್ ಸಂಘಕ್ಕೆ ನೀಡಿದೆ. ಮುಂದಿನ ವಾರ ಇಂಥ ಇನ್ನೂ ಮೂರು ವಾಹನಗಳು ಸಂಚರಿಸಲಿವೆ.
ಸೋಮವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕಲಬುರ್ಗಿ ವಿಭಾಗದ ತೋಟಗಾರಿಕೆ ಜಂಟಿ ನಿರ್ದೇಶಕ ಮಂಜುನಾಥ ನಾರಾಯಣಪೂರ, ಉಪನಿರ್ದೇಶಕ ಎಚ್.ಎಸ್. ಪ್ರಭುರಾಜ್, ಗುರುಶಾಂತ ಪಾಟೀಲ, ಕಲಬುರ್ಗಿ ಮತ್ತು ಯಾದಗಿರಿ ಕೆ.ಎಚ್.ಎಫ್ ಜಿಲ್ಲಾ ಪ್ರತಿನಿಧಿ ಬಸವರಾಜ ಪಾಟೀಲ ಊಡಗಿ, ಜಿಲ್ಲಾ ಹಾಪ್ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಪರಮೇಶ್ವರ ಶಿಖರೆ, ಸಂಘದ ನಿರ್ದೇಶಕ ಸುಭಾಷ ಭುವಿ, ಬಸವರಾಜ ಐ.ಕೆ, ಬಾಬುರಾವ ಗೊಬ್ಬೂರ ಹಾಗೂ ಇತರ ನಿರ್ದೇಶಕರು ಇದ್ದರು. ಕಳೆದ ವರ್ಷ ಲಾಕ್ಡೌನ್ ಸಂದರ್ಭದಲ್ಲಿ ಸಹ ಸಂಚಾರಿ ವಾಹನಗಳ ಮೂಲಕ ವಿವಿಧೆಡೆ ತೆರಳಿ ಹಣ್ಣು ಮತ್ತು ತರಕಾರಿ ಮಾರಾಟ ಮಾಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.