ಕಲಬುರಗಿ: ‘ನಗರದಲ್ಲಿ ಶನಿವಾರ ನಡೆದ ಪಕ್ಷದ 25ನೇ ಜಿಲ್ಲಾ ಸಮ್ಮೇಳನದಲ್ಲಿ ಶಾಲಾ–ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಬೇಕು ಎನ್ನುವುದೂ ಸೇರಿ ವಿವಿಧ ಪ್ರಮುಖ ನಿರ್ಣಯಗಳನ್ನು ಮಂಡಿಸಲಾಗಿದೆ’ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಜಿಲ್ಲಾ ಕಾರ್ಯದರ್ಶಿ ಮಹೇಶಕುಮಾರ ರಾಠೋಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ರಾಜ್ಯದ ವಿವಿಧ ಭಾಗಗಳಿಂದ ಈ ವಿಭಾಗಕ್ಕೆ ಕೆಲಸ ಮಾಡಲು ಬರುವ ಶಿಕ್ಷಕರು ನಿವೃತ್ತಿಯಾಗುವವರೆಗೂ ಇದೇ ವಿಭಾಗದಲ್ಲಿ ಕೆಲಸ ಮಾಡುವುದನ್ನು ಕಡ್ಡಾಯ ಮಾಡಬೇಕು. ಜಿಲ್ಲೆಯಲ್ಲಿರುವ ರಾಜ್ಯದ ಏಕೈಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರವೇಶದಲ್ಲಿ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಬೇಕು. ವಿವಿಯಲ್ಲಿ ಈಚೆಗೆ ನಡೆದ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು. ವಿಶ್ವವಿದ್ಯಾಲಯದಲ್ಲಿ ಕೋಮುವಾದಿ ಚಟುವಟಿಕೆಗಳು ನಡೆಯುತ್ತಿವೆ. ಇವುಗಳನ್ನು ನಿಯಂತ್ರಿಸಬೇಕು ಎನ್ನುವುದು ಸಹ ನಿರ್ಣಯದ ಭಾಗವಾಗಿದೆ’ ಎಂದರು.
‘ಜಿಲ್ಲೆಯ ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ನಿವೇಶನ ಮತ್ತು ವಸತಿ ರಹಿತರಿಗೆ ಮನೆಗಳನ್ನು ನಿರ್ಮಿಸಿಕೊಡಲು ಜಮೀನು ಗುರುತಿಸಬೇಕು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಅದಕ್ಷ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು. ಕಾನೂನು ಸುವ್ಯವಸ್ಥೆಗೆ ಆದ್ಯತೆ ನೀಡಬೇಕು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ನಡೆದ ಭ್ರಷ್ಟಾಚಾರದ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎನ್ನುವ ಅಂಶವೂ ನಿರ್ಣಯದ ಪಟ್ಟಿಯಲ್ಲಿದೆ’ ಎಂದು ಹೇಳಿದರು.
ಸಿಪಿಐನ ಜಿಲ್ಲಾ ಸಹ ಕಾರ್ಯದರ್ಶಿ ಸಿದ್ದಪ್ಪ ಪಾಲ್ಕಿ ಹಾಗೂ ಖಜಾಂಚಿ ಭೀಮಾಶಂಕರ ಮಾಡಿಯಾಳ ಹಾಜರಿದ್ದರು.
ಜಿಲ್ಲಾ ಮಂಡಳಿ ರಚನೆ
ಮುಂದಿನ ಮೂರು ವರ್ಷಗಳ ಅವಧಿಗಾಗಿ ಜಿಲ್ಲಾ ಮಂಡಳಿಯನ್ನು ರಚಿಸಲಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ರಾಜ್ಯ ಸಹ ಕಾರ್ಯದರ್ಶಿ ಬಿ.ಅಮ್ಜದ್ ತಿಳಿಸಿದರು. ಪದಾಧಿಕಾರಿಗಳು: ಮಹೇಶಕುಮಾರ ರಾಠೋಡ (ಜಿಲ್ಲಾ ಕಾರ್ಯದರ್ಶಿ) ಪ್ರಭುದೇವ ಯಳಸಂಗಿ ಪದ್ಮಾವತಿ ಪಾಟೀಲ ಸಿದ್ದಪ್ಪ ಪಾಟೀಲ (ಜಿಲ್ಲಾ ಸಹ ಕಾರ್ಯದರ್ಶಿ) ಭೀಮಾಶಂಕರ ಮಾಡಿಯಾಳ (ಖಜಾಂಚಿ) ಮೌಲಾ ಮುಲ್ಲಾ ಭೀಮರಾಯ ಮುದಬಸ್ಸಪ್ಪಗೋಳ ಮಹಮದ್ ಚೌಧರಿ ಸಾಜೀದ್ ಅಹ್ಮದ್ ಶಿವಲಿಂಗಮ್ಮ ಲೆಂಗಟೀಕರ್ ಅಷ್ಪಾಕ್ ಮುಲ್ಲಾ (ಕಾರ್ಯಕಾರಿ ಮಂಡಳಿ ಸದಸ್ಯರು).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.