ಕಲಬುರಗಿ: ಆಳಂದ ತಾಲ್ಲೂಕಿನ ಜವಳಗಾ(ಜೆ) ಗ್ರಾಮದಲ್ಲಿ ನೂತನ ಜಾಮೀಯಾ ಮಸ್ಜೀದ್ ಉದ್ಘಾಟನೆ ಹಾಗೂ ಸರ್ವಧರ್ಮದ ಶಾಂತಿಯ ಸಮ್ಮೇಳನ ಈಚೆಗೆ ನಡೆಯಿತು.
ಸರ್ವಧರ್ಮ ಪ್ರತಿಪಾದಕರಾದ ಕರುಣೇಶ್ವರ ಶ್ರೀ, ಮೌಲಾನ ಮಜಾರಿ ಮಾತನಾಡಿ, ‘ಭಾರತದಂತಹ, ಬಹು ಧರ್ಮೀಯ ರಾಷ್ಟ್ರಗಳಲ್ಲಿ ಧಾರ್ಮಿಕ ಸಂಕುಚಿತತೆಯನ್ನು ತೊರೆದು ಸರ್ವಧರ್ಮ, ಸಮಭಾವವನ್ನು ಅಂಗೀಕರಿಸುವುದು ಅಗತ್ಯವಾಗಿದೆ. ಎಲ್ಲ ಧರ್ಮಗಳ ದೇವರು ಒಬ್ಬನೇ. ಆತನನ್ನು ಖುದಾ, ಭಗವಾನ, ಗಾಡ್ ಎಂಬ ವಿಭಿನ್ನ ಹೆಸರುಗಳಿಂದ ಕರೆಯುತ್ತೇವೆ. ದೇವರನ್ನು ಮೆಚ್ಚಿಸಲು ಇರುವ ಧಾರ್ಮಿಕ ವಿಧಾನಗಳು ಬೇರೆಬೇರೆಯಾಗಿವೆ. ಧರ್ಮಗಳ ಸಮಾನತೆಯ ಸಿದ್ಧಾಂತವೇ ಭಾರತದ ಏಕೈಕ ಮುಕ್ತಿ ಮಾರ್ಗ’ ಎಂದು ಹೇಳಿದರು.
ಮಾದನ ಹಿಪ್ಪರಗ ಅಭಿನವ ಶಿವಲಿಂಗ ಶ್ರೀ, ಬೆಳಮಗಿ ಅಮರಜ್ಯೋತಿ ಭಂತೇಜಿ, ಸಿಖ್ ಧರ್ಮದ ಮುಖ್ಯಸ್ಥ ಜಸವೀರ್ ಸಿಂಗ್, ಮತ್ತು ಕಲಬುರಗಿ ಗುರುದ್ವಾರದ ಉಪಾಧ್ಯಕ್ಷ ಗುರುವಿರ್ ಸಿಂಗ್, ಜೈನ್ ಧರ್ಮದ ನೇಮೀನಾಥ್, ಕ್ರಿಶ್ಚಿಯನ್ ಧರ್ಮದ ಯಶವಂತ ಕೋಟೆ ಅವರು ಸರ್ವಧರ್ಮದ ಏಕತೆಯ ಸಂದೇಶ ನೀಡಿದರು.
ಲಾತೂರನ ಮೌಲಾನಾ ಮುಸ್ತಫಾ ಸಾಹೇಬ್, ಉಮರ್ಗಾದ ಮೌಲನ ಗುಲಾಂನಬಿ ಸಾಹೇಬ್ ಮಾತನಾಡಿದರು.
ಕಲಬುರಗಿ–ಬೀದರ್–ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ ಮಾತನಾಡಿ, ‘ಧರ್ಮಗಳ ಸಮಾನತೆಯ ಸಿದ್ಧಾಂತದ ಸಾರಾಂಶ ಭಾರತದೆಲ್ಲೆಡೆ ವ್ಯಾಪಿಸಿದೆ’ ಎಂದು ಹೇಳಿದರು.
ಗುತ್ತಿಗೆದಾರ ರಾಜದಾರ್ ಪಾಷಾ, ಅಬ್ದುಲ್ ರಜಾಕ್, ಯೂಸುಫ್ ಪಟೇಲ, ಸೈಯದ್ ನಾಮದಾರ, ಇಲ್ಯಾಸ್ ಪಟೇಲ, ಬಾಬಾ ಪಟೇಲ್, ಜಿಲಾನ್ ಗುತ್ತೇದಾರ, ನಜೀರ್ ಪಟೇಲ್, ಮೋದಿನ್ ಪಟೇಲ್ ಹಾಜರಿದ್ದರು. ಮೆಹರಾಜ್ ಪಟೇಲ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.