ಅಫಜಲಪುರ: ‘ಕೆರೆಗಳ ನಿರ್ಮಾಣದಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಲವು ಪ್ರಯೋಜನಗಳಿವೆ. ಅದರಲ್ಲಿ ವಿಶೇಷವಾಗಿ ಅಂತರ್ಜಲ ಮಟ್ಟ ಹೆಚ್ಚಳವಾಗಿ ಗಿಡಮರಗಳು ಬೆಳೆಯಲು ಅನುಕೂಲವಾಗುವ ಜೊತೆಗೆ ಜನ ಜಾನುವಾರಗಳಿಗೆ ಕುಡಿಯುವ ನೀರು ಲಭಿಸಲಿದೆ’ ಎಂದು ಕೆಪಿಸಿಸಿ ಸದಸ್ಯ ಅರುಣಕುಮಾರ್ ಎಂ ಪಾಟೀಲ ತಿಳಿಸಿದರು.
ತಾಲೂಕಿನ ಅಂಕಲಗಾ ಗ್ರಾಮದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಗ್ರಾಮ ಪಂಚಾಯಿತಿ ಕೋಗನೂರ ಮತ್ತು ಕೆರೆ ಅಭಿವೃದ್ಧಿ ಸಮಿತಿ ಅಂಕಲಗಾ ಇವರ ಸಹಯೋಗದೊಂದಿಗೆ ಕೆರೆ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ತಾಲ್ಲೂಕಿನಲ್ಲಿ ಕೆರೆಗಳನ್ನು ನಿರ್ಮಾಣ ಮಾಡುವುದು ಮತ್ತು ಕೆರೆಗಳ ಹೂಳು ತೆಗೆಯುವ ಕೆಲಸವನ್ನು ಮಾಡಲಾಗುತ್ತಿದೆ. ಇವರು ಮಾಡುತ್ತಿರುವ ಸಾಮಾಜಿಕ ಕೆಲಸ ಕಾರ್ಯಗಳು ಮೆಚ್ಚುವಂತದ್ದು ಮತ್ತು ಇತರರಿಗೆ ಮಾದರಿಯಾಗಿವೆ. ನಾವೆಲ್ಲರೂ ಜೀವಜಲ ರಕ್ಷಣೆ ಮಾಡಿದರೆ ಮುಂದಿನ ದಿನಗಳಲ್ಲಿ ನೆಮ್ಮದಿಯಾಗಿ ಜೀವನ ಸಾಗಿಸಬಹುದು. ಜೀವಜಲ ರಕ್ಷಿಸದರೆ ಕಾಡು ಬೆಳೆಯುತ್ತದೆ ಮತ್ತು ಸಕಾಲಕ್ಕೆ ಮಳೆ ಬರುತ್ತದೆ. ತಾಪಮಾನ ಕಡಿಮೆಯಾಗುತ್ತದೆ’ ಎಂದರು
ಸಂಸ್ಥೆ ನಿರ್ದೇಶಕರಾದ ಗಣಪತಿ ಮಾಳಂಜಿ, ಮಹಾಂತೇಶ, ರಾಹುಲ್, ಶರಣು ಪಡಶೆಟ್ಟಿ, ನೀಲಕಂಠ ಮೂಲಗೆ, ಕೆರೆ ಸಮಿತಿ ಅಧ್ಯಕ್ಷ ಚನ್ನಮಲಪ್ಪ ಪಾಟೀಲ, ಶಿವಬಸಪ್ಪ ಪಾಟೀಲ, ಯಶವಂತರಾಯ ಹರಸೂರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.