ಕಲಬುರಗಿ: ಅನಧಿಕೃತ ಅಂಗಡಿಗಳನ್ನು ಖಾಲಿ ಮಾಡಿಸಬೇಕು ಮತ್ತು ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಇಲ್ಲಿನ ಎಪಿಎಂಸಿ ಆವರಣದಲ್ಲಿ ಬುಧವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಯಿತು.
‘ಎಪಿಎಂಸಿ ಆವರಣದಲ್ಲಿರುವ ಅನಧಿಕೃತ ಅಂಗಡಿಗಳನ್ನು ಖಾಲಿ ಮಾಡಿಸಬೇಕು. ರಾಜಸ್ಥಾನಿ ವ್ಯಾಪಾರಿಗಳ ಬೆಂಬಲಕ್ಕೆ ನಿಂತು ಸ್ಥಳೀಯ ವ್ಯಾಪಾರಿಗಳಿಗೆ ಅನ್ಯಾಯ ಮಾಡುತ್ತಿರುವ ಅಧಿಕಾರಿಗಳನ್ನು ಸಾಮೂಹಿಕ ವರ್ಗಾವಣೆ ಮಾಡಬೇಕು’ ಎಂದು ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ ನರಿಬೋಳ ಆಗ್ರಹಿಸಿದರು.
‘ಎಪಿಎಂಸಿಯಲ್ಲಿ 300ಕ್ಕೂ ಹೆಚ್ಚು ಅನಧಿಕೃತ ಅಂಗಡಿಗಳಿದ್ದರೂ ಅಧಿಕಾರಿಗಳು ತಮಗೆ ಬೇಕಾದ ಅಂಗಡಿಗಳಿಗೆ ನೋಟಿಸ್ ಕೊಡದೆ 103 ಅಂಗಡಿಗಳಿಗಷ್ಟೇ ಅಂತಿಮ ನೋಟಿಸ್ ಕೊಟ್ಟಿದ್ದಾರೆ’ ಎಂದು ದೂರಿದರು.
ಹೋರಾಟಕ್ಕೆ ಹಿಂದೂ ಜಾಗೃತಿ ಸೇನೆಯ ಲಕ್ಷ್ಮೀಕಾಂತ ಸ್ವಾದಿ, ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯ ಶ್ರವಣಕುಮಾರ ನಾಯಕ್, ಕನ್ನಡ ಭೂಮಿ ಜಾಗೃತಿ ಸಮಿತಿಯ ಲಿಂಗರಾಜ ಸಿರಗಾಪುರ, ದಲಿತ ಸೇನೆಯ ಮಂಜುನಾಥ ಭಂಡಾರಿ, ಶ್ರೀಕಾಂತ ರೆಡ್ಡಿ, ಕರ್ನಾಟಕ ನವ ನಿರ್ಮಾಣ ಸೇನೆಯ ರವಿ ದೇಗಾಂವ್, ರಾಮ್ ಸೇನೆಯ ಮಹೇಶ ಕೆಂಭಾವಿ, ಬಹುಜನ ಸಮಾಜ ಪಾರ್ಟಿಯ ಹುಚ್ಚೇಶ್ವರ ವಠಾರ, ಕಲ್ಯಾಣ ನಾಡು ವಿಕಾಸ ವೇದಿಕೆಯ ಮುತ್ತಣ್ಣ ನಡಗೇರಿ, ಬ್ರಾಹ್ಮಣ ಆರ್ಗನೈಜೇಷನ್ ಆರ್ಮಿಯ ರವೀಂದ್ರ ಕುಲಕರ್ಣಿ, ರೈತ ಸಂಘದ ತಾಂಬೆ, ದೇವಿಂದ್ರ ದೇಸಾಯಿ ಕಲ್ಲೂರ್, ವೀರಣ್ಣ ಬೇಲೂರೆ ಸೇರಿದಂತೆ ಮಹಿಳಾ ಸಂಘಟನೆಗಳ ಪ್ರಮುಖರಾದ ಕಾವೇರಿ ಪೂಜಾರಿ, ಮಹಾದೇವಿ ಹೆಳವಾರ ಬೆಂಬಲಿಸಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.