ಮುಷ್ಕರ(ಪ್ರಾತಿನಿಧಿಕ ಚಿತ್ರ)
ಕಲಬುರಗಿ: ‘ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾ.ಪಂ ನೌಕರರ ಸಂಘದ ಸಿಐಟಿಯು ಸಂಯೋಜಿತ ರಾಜ್ಯ ಸಮಿತಿ ವತಿಯಿಂದ ಜುಲೈ 23ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೆಳಿಗ್ಗೆ 10ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭವಾಗಲಿದೆ. ಜಿಲ್ಲೆಯಿಂದ 1500ಕ್ಕೂ ಹೆಚ್ಚು ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದೇವೆ’ ಎಂದು ಸಮಿತಿ ಜಿಲ್ಲಾಧ್ಯಕ್ಷ ನಾಗರಾಜ ಜಿ. ಭಂಗೂರ ಹೇಳಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾವು ಮುಷ್ಕರದಲ್ಲಿ ಪಾಲ್ಗೊಳ್ಳುವುದರಿಂದ ನೀರು ಸರಬರಾಜು ಸೇರಿದಂತೆ ಇತರೆ ಸೇವೆಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿದ್ದು, ಸಾರ್ವಜನಿಕರಿಗೆ ತೊಂದರೆಯಾಗುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.
‘ರಾಜ್ಯ ಸರ್ಕಾರವು ಗ್ರಾ.ಪಂಗಳಲ್ಲಿರುವ ಶಾಶ್ವತ ಹುದ್ದೆಗಳನ್ನು ಸ್ಥಾನ ಪಲ್ಲಟ ಮಾಡಿ, ಹೊರಗುತ್ತಿಗೆ ನೀಡುವುದನ್ನು ಕೈಬಿಡಬೇಕು. ಕರವಸೂಲಿಗಾರ, ಕ್ಲರ್ಕ್, ಡಿಟಿಪಿ, ನೀರುಗಂಟಿಗಳು, ಜವಾನ, ಸ್ವಚ್ಛತಾ ಹುದ್ದೆಗಳನ್ನು ಏಕಕಾಲಕ್ಕೆ ಸರ್ಕಾರಿ ನೌಕರರನ್ನಾಗಿ ಘೋಷಣೆ ಮಾಡಬೇಕು. ವೇತನವನ್ನು ₹31 ಸಾವಿರಕ್ಕೆ ಹೆಚ್ಚಳ ಹಾಗೂ ನಿವೃತ್ತ ಅಥವಾ ಮೃತಪಟ್ಟ ಗ್ರಾ.ಪಂ ನೌಕರರ ಕುಟುಂಬಕ್ಕೆ ಕನಿಷ್ಠ ₹6 ಸಾವಿರ ಪಿಂಚಣಿ ವ್ಯವಸ್ಥೆ ಮಾಡಬೇಕು. ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಲೋಪಗಳಿದ್ದು, ಸರಿಪಡಿಸುವವರೆಗೂ ಪೂರ್ಣ ವೇತನ ನೀಡಬೇಕು’ ಎಂದು ಆಗ್ರಹಿಸಿದರು.
ಗ್ರೇಡ–1 ಕಾರ್ಯದರ್ಶಿಯಿಂದ ಪಿಡಿಒ ಹುದ್ದೆಗೆ ರಾಜ್ಯಮಟ್ಟದಲ್ಲಿ ಮುಂಬಡ್ತಿ ನೀಡಲಾಗುತ್ತಿದ್ದು, ಅದನ್ನು ಕೈಬಿಟ್ಟು ಜಿಲ್ಲಾ ಮಟ್ಟದಲ್ಲಿ ನೀಡಬೇಕು. ಡಾಟಾ ಎಂಟ್ರಿ ಆಪರೇಟರ್ಗಳಿಗೆ ಷರತ್ತುಗಳನ್ನು ವಿಧಿಸದೇ ಕ್ಲರ್ಕ್ ಹುದ್ದೆಗೆ ಅನುಮೋದನೆ ನೀಡಬೇಕು. ಗ್ರಾ.ಪಂ ನೌಕರರ ವರ್ಗಾವಣೆ, ನೀರುಗಂಟಿಗಳಿಗೆ ನಿರ್ದಿಷ್ಟ ಕೆಲಸ, ಲೆಕ್ಕ ಸಹಾಯಕ ಹುದ್ದೆ ಸೃಷ್ಟಿ, ಪಂಚಾಯಿತಿಗಳ ಮೇಲ್ದರ್ಜೆಗೇರಿಸುವುದು, ಸೇವಾ ಹಿರಿತನ ಆಧರಿಸಿ ವೇತನ ಹೆಚ್ಚಳ ಮಾಡಬೇಕು’ ಎಂದು ಅವರು ಆಗ್ರಹಿಸಿದರು.
ರಾಜ್ಯದಲ್ಲಿರುವ ಎಲ್ಲ ಗ್ರಾ.ಪಂಗಳಿಂದ ಸುಮಾರು 45 ಸಾವಿರಕ್ಕೂ ಹೆಚ್ಚು ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಜಿಲ್ಲಾ ಉಪಾದ್ಯಕ್ಷ ಭೋಜರಾಜ ಮಾಲಿಪಾಟೀಲ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜೈಭೀಮ್ ಹೊಸಮನಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.