
ಚಿಂಚೋಳಿ: ‘ಭಾರತ ಜಗತ್ತಿನ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಲು ಭಾರತದ ಸಮರ್ಥ ಸಂವಿಧಾನವೇ ಕಾರಣ. ಈ ಸಂವಿಧಾನ ನಾವೆಲ್ಲರೂ ಅನುಸರಿಸಬೇಕು. ಇದು ನೀಡಿದ ಹಕ್ಕು ಕರ್ತವ್ಯಗಳು ನಾವೆಲ್ಲರೂ ಪಾಲಿಸಬೇಕು ಆಗ ಸಂವಿಧಾನಕ್ಕೆ ಜೀವ ಬರುತ್ತದೆ. ಇಲ್ಲವಾದರೆ ಇದೊಂದು ದಾಖಲೆಯಾಗಿ ಮಾತ್ರ ಉಳಿಯುತ್ತವೆ’ ಎಂದು ಇಲ್ಲಿನ ಪ್ರಥಮ ದರ್ಜೆ ನ್ಯಾಯಾಲಯದ ನ್ಯಾಯಾಧೀಶ ದತ್ತಕುಮಾರ ಜವಳಕರ್ ತಿಳಿಸಿದರು.
ಅವರು ತಾಲ್ಲೂಕು ಆಡಳಿತ, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ಭಾರತದ ನೆರೆಯ ರಾಷ್ಟ್ರಗಳಲ್ಲಿ ಸಂವಿಧಾನ ಬಾರಿ ಬದಲಾಯಿಸಲಾಸಿದ್ದರಿಂದ ಅಲ್ಲಿ ಕ್ಷೋಭೆ, ಅಶಾಂತಿ, ಹಿಂಸಾಚಾರ ತಾಂಡಾವಾಡುತ್ತಿದೆ. ಆದರೆ, ಭಾರತದಲ್ಲಿ ಸಂವಿಧಾನ ಜಾರಿಯಾಗಿ 75 ವರ್ಷ ಗತಿಸಿದರೂ ಒಂದೇ ಸಂವಿಧಾನವಿದೆ’ ಎಂದರು.
ವಿಶೇಷ ಉಪನ್ಯಾಸ ನೀಡಿದ ಶಿಕ್ಷಣ ಸಂಯೋಜಕ ಅಶೋಕ ಹೂವಿನಭಾವಿ ಮಾತನಾಡಿ, ‘ಭಾರತದ ಸಂವಿಧಾನ ಜಗತ್ತಿನ ಅತ್ಯಂತ ಶ್ರೇಷ್ಠ ಸಂವಿಧಾನಗಳಲ್ಲಿ ಒಂದಾಗಿದೆ. ಭಾರತೀಯರೆಲ್ಲರಿಗೂ ಸಮಾನತೆ ನೀಡಿರುವುದೇ ಸಂವಿಧಾನ ಹೀಗಾಗಿ ಸಂವಿಧಾನಕ್ಕೆ ಸಮಾನತೆಯೇ ಜೀವಾಳವಾಗಿದೆ’ ಎಂದು ತಿಳಿಸಿದರು.
ಪ್ರಾಂಶುಪಾಲ ಬಸವರಾಜ ಕೋನೇರಿ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಶಶಿಕಾಂತ ಆಡಕಿ, ಸಹಾಯಕ ಸರ್ಕಾರಿ ಅಭಿಯೋಜಕ ಶಾಂತಕುಮಾರ ಜಿ.ಪಾಟೀಲ, ತಾ.ಪಂ ಇಒ ಸಂತೋಷ ಚವ್ಹಾಣ, ಸಮಾಜ ಕಲ್ಯಾಣ ಅಧಿಕಾರಿ ಶೃತಿ, ಬಿಇಒ ಲಕ್ಷ್ಮಯ್ಯ , ಟಿಎಚ್ಒ ಮಹಮದ್ ಗಫಾರ್, ಸಿಡಿಪಿಒ ಸವಿತಾ, ಮುಖ್ಯಾಧಿಕಾರಿ ನಿಂಗಮ್ಮ ಬಿರಾದಾರ, ಬಿಸಿಎಂ ಅಧಿಕಾರಿ ಅನುಸೂಯಾ ಚವ್ಹಾಣ, ವೆಂಕಟೇಶ ದುಗ್ಗನ್, ವೀರಶೆಟ್ಟಿ ರಾಠೋಡ್, ದೇವೇಂದ್ರ ಜಾಬಿನ್ ಇದ್ದರು.
ಬಸವರಾಜೇಶ್ವರಿ ಹಾಲು ಸ್ವಾಗತಿಸಿದರು. ಮೆರಾಜ ಪಾಷಾ ನಿರೂಪಿಸಿದರು. ಸಂತೋಷಕುಮಾರ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಪೂಜಾ, ಪ್ರಿಯಾಂಕಾ, ಆರತಿ, ಯೋಗೇಶ, ಯಾಸ್ಮಿನ್, ಅರವಿಂದ ಮತ್ತು ತಂಡದವರು ನ್ಯಾಯಾಧೀಶರಿಂದ ಬಹುಮಾನ ಸ್ವೀಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.