ಕಲಬುರಗಿ: ‘ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅಸಂಸದೀಯ ಪದ ಬಳಸಿ ನಿಂದಿಸಿದ್ದು ಖಂಡನೀಯ’ ಎಂದು ಕೆಕೆಆರ್ಡಿಬಿ ಅಧ್ಯಕ್ಷ, ಶಾಸಕ ಡಾ. ಅಜಯ್ ಸಿಂಗ್ ಹೇಳಿದ್ದಾರೆ.
‘ಪ್ರಿಯಾಂಕ್ ಅವರನ್ನು ಅವಮಾನಿಸಿದ ಬಿಜೆಪಿ ನಾಯಕರು ಆಡು ಭಾಷೆಯಲ್ಲಿ ಗಾದೆ ಮಾತು ಹೇಳಿದ್ದೇವೆ ಎಂದು ಸಮಜಾಯಿಷಿ ನೀಡಿದ್ದಾರೆ. ಇದು ಅಕ್ಷಮ್ಯ ಅಪರಾಧ. ನಂತರ ಕಲಬುರಗಿ ಹೋರಾಟ
ದಲ್ಲಿಯೂ ರಿಪಬ್ಲಿಕ್ ಆಫ್ ಕಲಬುರಗಿ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಇದು ಶುದ್ಧ ಸುಳ್ಳು. ಕಲಬುರಗಿ ಜನರಿಗೆ ಕಾಂಗ್ರೆಸ್ ಇತಿಹಾಸ ಗೊತ್ತಿದೆ. ನಮ್ಮ ಪಕ್ಷ ಅಧಿಕಾರದಲ್ಲಿ ಇದ್ದಾಗ ಅಭಿವೃದ್ಧಿ ನಡೆದಿದೆಯೇ ಹೊರತು ಬೇರಾವ ಕೆಲಸಗಳು ನಡೆದಿಲ್ಲ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಯಾರೇ ಆಗಲಿ ವೈಯಕ್ತಿಕ ಟೀಕೆಗಳಿಗೆ ಮುಂದಾಗಬಾರದು. ಚಿತ್ತಾಪುರ ಘಟನೆ ಸರಿ ತಪ್ಪೋ ಎಂದು ನಿರ್ಧರಿಸುವುದಕ್ಕಿಂತ ಅದು ಜನರ ಆ ಕ್ಷಣದ ಸ್ವಾಭಾವಿಕ ಆಕ್ರೋಶ ಆಗಿತ್ತು. ಹಾಗಂತ ಆ ಘಟನೆಗೆ ಪ್ರಿಯಾಂಕ್ ಅವರೇ ಪ್ರೇರಣೆ ಎಂದು ಆರೋಪಿಸುವುದು ಎಷ್ಟು ಸರಿ? ಪೊಲೀಸರು ಭದ್ರತೆ ದೃಷ್ಟಿಯಿಂದ
ತಮ್ಮ ಕೆಲಸ ಮಾಡಿದ್ದಾರೆ. ಇಡೀ ವ್ಯವಸ್ಥೆಯನ್ನೇ ಮನ ಬಂದಂತೆ ಟೀಕಿಸುವ ಬಿಜೆಪಿಗರದ್ದು ಮಿಥ್ಯಾರೋಪ’ ಎಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.