ADVERTISEMENT

ಮಾತೃ ಭಾಷೆ ಅಳಿದರೆ ಸಂಸ್ಕೃತಿ ನಾಶ: ಹಿಂದಿ ಕವಿ ಅರುಣ ಕಮಲ

ಅಂತರರಾಷ್ಟ್ರೀಯ ಮಾತೃಭಾಷೆ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2024, 16:19 IST
Last Updated 25 ಫೆಬ್ರುವರಿ 2024, 16:19 IST
ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರ ವಿಭಾಗ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಕಾರ್ಯಕ್ರಮವನ್ನು ಹಿಂದಿ ಕವಿ ಅರುಣ ಕಮಲ ಉದ್ಘಾಟಿಸಿದರು
ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರ ವಿಭಾಗ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಕಾರ್ಯಕ್ರಮವನ್ನು ಹಿಂದಿ ಕವಿ ಅರುಣ ಕಮಲ ಉದ್ಘಾಟಿಸಿದರು   

ಕಲಬುರಗಿ: ‘ಮಾತೃ ಭಾಷೆಗಳು ಅಳಿದರೆ ಒಂದು ಸಂಸ್ಕೃತಿಯೇ ನಾಶವಾದಂತೆ’ ಎಂದು ಹಿಂದಿ ಕವಿ ಅರುಣ ಕಮಲ ಹೇಳಿದರು.

ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಈಚೆಗೆ ಭಾಷಾಶಾಸ್ತ್ರ ವಿಭಾಗ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರತಿಯೊಂದು ಭಾಷೆಗೂ ಅದರದೇ ಆದ ಚರಿತ್ರೆ, ಬೆಳವಣಿಗೆ ಮತ್ತು ಜ್ಞಾನ ಪರಂಪರೆ ಇರುತ್ತದೆ. ಹೀಗಾಗಿ ಪ್ರತಿಯೊಂದು ಭಾಷೆಯನ್ನು ಉಳಿಸಿಕೊಳ್ಳಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ. ಇಲ್ಲವಾದರೆ ಅನಾದಿ ಕಾಲದಿಂದ ಸೃಷ್ಟಿಯಾದ ವಿವೇಕದಿಂದ ವಂಚಿತರಾಗಬೇಕಾಗುತ್ತದೆ’ ಎಂದರು.

ADVERTISEMENT

‘ಭಾರತದಲ್ಲಿ ಕಳೆದ 50 ವರ್ಷಗಳಲ್ಲಿ ಸುಮಾರು 300 ಭಾಷೆಗಳು ನಾಶವಾಗಿವೆ. ಇದರಿಂದಾಗಿ ಮಾನವ ಸಂಸ್ಕೃತಿ ಕಳೆದುಕೊಂಡಿದ್ದು ಅಪಾರ. ಹೊಸ ಭಾಷೆಯ ನಿರ್ಮಾಣ ಈಗ ಸಾಧ್ಯವಿಲ್ಲ. ಆದ್ದರಿಂದ ಕಾಲಾನುಕಾಲದಿಂದ ಬೆಳೆದುಬಂದ ಭಾಷೆಗಳನ್ನು ನಿರ್ಲಕ್ಷಿಸುವುದು ತಪ್ಪು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಮಾತನಾಡಿ, ‘ಕೇಂದ್ರೀಯ ವಿಶ್ವವಿದ್ಯಾಲುಯವು ಹಲವಾರು ಭಾಷೆಗಳ ತಾಣವಾಗಿ ಬೆಳೆಯಬೇಕು ಎಂಬುದು ನಮ್ಮ ಆಸೆ. ಇದರಿಂದ ವಿವಿಧ ಭಾಷೆಗಳ ನಡುವೆ ಬೌದ್ಧಿಕ ಸಂವಾದಕ್ಕೆ ನೆರವಾಗುತ್ತದೆ. ಈ ನಿಟ್ಟಿನಲ್ಲಿ ಭಾಷೆಗಳ ನಡುವೆ ಹೊಸ ಚರ್ಚೆಯನ್ನು ಹುಟ್ಟುಹಾಕಲು ಇಲ್ಲಿನ ಪ್ರಾಧ್ಯಾಪಕರು ಶ್ರಮಿಸಬೇಕು’ ಎಂದು ತಿಳಿಸಿದರು.

ಭಾಷಾ ಮತ್ತು ಮಾನವಿಕ ನಿಕಾಯದ ಡೀನ್‌ ಪ್ರೊ. ವಿಕ್ರಮ ವಿಸಾಜಿ, ಪ್ರೊ. ಶಿವಗಂಗಾ ರುಮ್ಮಾ, ಪ್ರೊ. ಬಸವರಾಜ ಡೋಣೂರ, ಪ್ರೊ. ಬಸವರಾಜ ಕೊಡಗುಂಟಿ, ಪ್ರೊ. ಸಂದೀಪ ರಣಬಿರಕರ್, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ಪ್ರೊ. ಗಣೇಶ ಪವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಜಯದೇವಿ ಜಂಗಮಶೆಟ್ಟಿ, ಪ್ರೊ. ರವಿಕಿರಣ ನಾಕೋಡ, ಪ್ರೊ. ಸ್ವಪ್ನಿಲ್ ಚಾಪೆಕರ್ ನಾಡಗೀತೆ ಮತ್ತು ರಾಷ್ಟ್ರಗೀತೆ ಹಾಡಿದರು. ಭಾಷಾಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಮಂಜುಳಾಕ್ಷಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.